ಈಚೆಗೆ ಮುಕ್ತಾಯಗೊಂಡ 14 ನೇ
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತದ ಧ್ವಜದ ಮಹತ್ವ ಸಾರುವ ಚಿತ್ರವೊಂದು ಪ್ರದರ್ಶನ ಕಂಡಿತು..
ಅದು ನಮ್ಮ ಭಾರತ..!
ಮೇಲ್ನೋಟಕ್ಕೆ ಈ ಚಿತ್ರವು ಮಕ್ಕಳ ಚಿತ್ರವಾಗಿ ಗುರುತಿಸಿಕೊಂಡಿದ್ದರೂ ದೇಶಪ್ರೇಮ ಮತ್ತು ನಮ್ಮ ರಾಷ್ಟ್ರ ಧ್ವಜದ ಹಿರಿಮೆ ಮತ್ತು ಮಹತ್ವಗಳನ್ನು ಸಾರುವ ಚಿತ್ರ ಎಂಬುದಾಗಿ ಗುರುತಿಸಿಕೊಂಡಿರುವುದು ವಿಶೇಷ.
ಬೆಂಗಳೂರಿನ ಎಸ್ ಜೆ ಪಿ ತಾಂತ್ರಿಕ ವಿದ್ಯಾಲಯದಲ್ಲಿ ಛಾಯಾಗ್ರಹಣ ಡಿಪ್ಲೋಮಾ ಪಡೆದಿರುವ ಕುಮಾರಸ್ವಾಮಿ ಈ ಚಿತ್ರದ ನಿರ್ದೇಶಕರು. ಛಾಯಾಗ್ರಹಣ ಹಾಗೂ ನಟನೆ ಮಾಡುವ ಮೂಲಕವೂ ಗುರುತಿಸಿಕೊಂಡಿರುವ ಕುಮಾರಸ್ವಾಮಿ ಅವರದು ಬಹುಮುಖ ಪ್ರತಿಭೆ.
ಮುಂಬೈನಲ್ಲಿ ಸಾಕಷ್ಟು ಹಿಂದಿ ಚಿತ್ರಗಳಲ್ಲಿ ದುಡಿದಿರುವ ಕುಮಾರಸ್ವಾಮಿ ಅವರು ಭಾರತೀಯ ಚಿತ್ರರಂಗದ ದಂತಕಥೆಗಳಾದ ದೇವಾನಂದ್, ಪುಟ್ಟಣ್ಣ ಕಣಗಾಲ್ ಹಾಗೂ ಪ್ರಕಾಶ್ ಮೆಹ್ರಾ ಅಂತಹವರ ಬಳಿ ಸಹಾಯಕರಾಗಿ ದುಡಿದಿದ್ದಾರೆ.
ಸ್ವತಂತ್ರವಾಗಿ ಚಿತ್ರ ನಿರ್ದೇಶಿಸುವ ಮತ್ತು ಮನರಂಜನೆಯ ಜೊತೆಗೆ ಯುವ ಜನತೆಗೆ ಸಂದೇಶ ನೀಡುವ ಚಿತ್ರ ಮಾಡುವ ಕನಸು ಹೊತ್ತಿದ್ದ ಈ ಹಿರಿಯ ತಂತ್ರಜ್ಞ ‘ನಮ್ಮ ಭಾರತ’ ಚಿತ್ರದ ಮೂಲಕ ಅದನ್ನು ನನಸು ಮಾಡಿಕೊಂಡಿದ್ದಾರೆ.
ಜನಮಾನಸದಲ್ಲಿ ಹೆಗ್ಗಳಿಕೆ ದಾಖಲಿಸಬಲ್ಲ ಹೊಸತನದ ಚಿತ್ರ ನೀಡುವ ಗುರಿ ಹೊಂದಿರುವ ಕುಮಾರಸ್ವಾಮಿ ಅವರಿಗೆ ಇನ್ನೂ ಚಿರ ಯೌವನದ ಉತ್ಸಾಹ.
ಚಿತ್ರೋತ್ಸವದಲ್ಲಿ ವಿಶೇಷ ಪ್ರದರ್ಶನಗೊಂಡ ‘ನಮ್ಮ ಭಾರತ’ ಚಿತ್ರಕ್ಕೆ ಸಿಕ್ಕಿದ ಪ್ರೋತ್ಸಾದಿಂದಾಗಿ ಅವರ ಉತ್ಸಾಹ ಮತ್ತಷ್ಟು ಇಮ್ಮಡಿಸಿದೆ.