Snehapriya.com

June 8, 2025

ಚಿತ್ರೋತ್ಸವದಲ್ಲಿ ಹೆಚ್ಚಿದ ಕಲರವ; ಮೆರೆದ ಜಾಗತಿಕ ಕನ್ನಡ ಚಿತ್ರಗಳು..

Social Share :

ನೋಡು ನೋಡುತ್ತಾ ಇವು ಕನ್ನಡ ಚಿತ್ರಗಳೇ.. ಎಂಬ ಬೆರಗು ಮೂಡಿಸುತ್ತಾ ಹೋದವು. ಹೊಸದಾದ ನಿರೂಪಣಾ ಶೈಲಿ; ಎದೆಗೆ ನಾಟುವ ಪ್ರಶ್ನೆಗಳ ಪರಂಪರೆ; ಜಾಗತಿಕ ಸಿನಿಮಾ ನೆನಪಿಸುವ ಸಿಂಕ್ ಸೌಂಡ್ ಮೇಲಾಗಿ ಸಾಮಾಜಿಕ ನೆಲೆಯ ಕಥೆಗಳ ಆಯ್ಕೆ..

ಅಬ್ಬಾಬ್ಬ.. ಕನ್ನಡದ ಚಿತ್ರಗಳು ಜಾಗತಿಕ ಮಟ್ಟದ ಚಿತ್ರಗಳಿಗೆ ಸ್ಪರ್ಧೆ ಒಡ್ಡುತ್ತಿವೆ. ಜೊತೆಗೆ ಗುಣಮಟ್ಟದ ನೆಲೆಯಲ್ಲಿ ಜನರನ್ನು ಬೆರಗುಗೊಳಿಸುತ್ತಾ ನಡೆದಿವೆ.

14ನೇ ಬೆಂಗಳೂರು ಸಿನಿಮೋತ್ಸವ ಕನ್ನಡ ಚಿತ್ರಗಳ ಆಯ್ಕೆಯಲ್ಲಿಯೇ ಪ್ರಬುದ್ಧತೆ ಸಾಧಿಸಿದೆ ಎನಿಸಿದ್ದು, ಜಾಗತಿಕ ಮಟ್ಟಕ್ಕೆ ಪೈಪೋಟಿ ನೀಡಬಲ್ಲ ಚಿತ್ರಗಳನ್ನು ನೋಡಿದಾಗ..

ಮನ್ಸೋರೆ ನಿರ್ದೇಶನದ ’19 20 21′, ಕೃಷ್ಣೇಗೌಡ ನಿರ್ದೇಶನದ ‘ನಾನು ಕುಸುಮ’, ಪೃಥ್ವಿ ಕೋಣಾನೂರು ನಿರ್ದೇಶನದ ‘ಹದಿನೇಳೆಂಟು’. ಈ ಮೂರು ಚಿತ್ರಗಳು ಕನ್ನಡ ಸ್ಪರ್ಧಾ ವಿಭಾಗದಲ್ಲಿವೆ.

ಈ ಮೂರೂ ಚಿತ್ರಗಳನ್ನು ನೋಡುವಾಗ ಕನ್ನಡದ ಸಿನಿಮಾ ಪ್ರಪಂಚದ ಚಿಂತನೆಯ ದಿಕ್ಕು ಬದಲಾಗಿರುವುದರ ಮಾಹಿತಿ ದೊರೆಯುತ್ತದೆ. ಒಂದು ಚಿತ್ರ ಸಂವಿಧಾನದ ಆಶಯಗಳ ಸುತ್ತ ಸಾಗಿದರೆ, ಮತ್ತೊಂದು ಚಿತ್ರ ಅಬಲೆ ಹೆಣ್ಣು ಮಗಳು ಸಾಮಾಜಿಕ ಕ್ರೌರ್ಯಕ್ಕೆ ಸಿಲುಕುವ ವ್ಯವಸ್ಥೆ ಪರಿಚಯದ ಮತ್ತೊಂದು ಚಿತ್ರ. ಟಿವಿ ಮಾಧ್ಯಮ ಸನ್ನಿಗೆ ಸಿಲುಕುವ ಹದಿಹರೆಯದ ಜೋಡಿ ಮಾಡುವ ತಪ್ಪಿಗೆ ಶಾಲೆ ಮತ್ತು ಪೋಷಕರು ಅನುಭವಿಸುವ ಯಾತನೆಗಳನ್ನು ತೆರೆದಿಡುವ ಮಗದೊಂದು ಚಿತ್ರ.

ಹೀಗೆ ನೋಡುಗರ ಮನ ಕಲಕುವ ಕನ್ನಡ ಚಿತ್ರಗಳು ಈ ಬಾರಿಯ ಚಿತ್ರೋತ್ಸವದ ಹೆಮ್ಮೆ ಮತ್ತು ಅದುವೆ ಸಿನಿಮಾ ಉತ್ಸವದ ಸಾರ್ಥಕತೆ.

ಏಷ್ಯನ್ ಸ್ಪರ್ಧಾ ವಿಭಾಗದಲ್ಲಿದ್ದ ‘ವಿರಾಟಪುರದ ವೀರಾಗಿ’, ‘ಇನ್’ ಮತ್ತು ‘ಸಿಗ್ನಲ್ ಮ್ಯಾನ್ 1971’ ಚಿತ್ರಗಳು ಸಹ ಪ್ರೇಕ್ಷಕರ ಮನ ಸೆಳೆದವು.

ಒಂದು ಉತ್ಸವ (ಚಿತ್ರೋತ್ಸವ) ಯಶಸ್ವಿಯಾಗುವುದು ಸಾಮಾನ್ಯವಾದ ವಿಷಯವಲ್ಲ; ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್ ಅವರು ತಮಗೆ ಸಿಕ್ಕಿದ ಅಲ್ಪ ಅವಧಿಯಲ್ಲಿ ಗುಣಾತ್ಮಕ ನೆಲೆ ಅಚ್ಚೊತ್ತುವಂತೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರೆ ತಪ್ಪಲ್ಲ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *