ಹದಿಹರೆಯದ ಜೋಡಿಯೊಂದರ ಕಥೆಯನ್ನು ಪ್ರೇಮಾಲಾಪದ ಜೊತೆ ನಿರೂಪಿಸಲಾಗಿದೆ.
ಅದೇ ಪ್ರಣಯಂ..!
ಈ ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಬರೆದಿರುವ ‘ಮಳೆಗಾಲ ಬಂತು ಸನಿಹ’ ಎಂಬ ಹಾಡಿನ ಸಾಹಿತ್ಯವಿರುವ ವೀಡಿಯೋವನ್ನು ಈಚೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು.
ಯುವ ಜೋಡಿಗಳ ಪ್ರಣಯದ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಪಲ್ಲಕ್ಕಿ, ಗಣಪ, ಪಾರಿಜಾತ ಚಿತ್ರಗಳನ್ನು ನೀಡಿದ ಪರಮೇಶ್ ನಿರ್ಮಾಣ ಮಾಡಿದ್ದಾರೆ.
ಎಸ್. ದತ್ತಾತ್ರೇಯ ಈ ಚಿತ್ರದ ನಿರ್ದೇಶಕರು. ಮದುವೆ ನಿಶ್ಚಯ ಮಾಡಿಕೊಂಡ ಪ್ರೇಮಿಗಳಿಬ್ಬರ ನಡುವೆ ನಡೆಯುವ ಸಲ್ಲಾಪದ ಕಥೆ ಇದು. ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು ಚಿತ್ರವು ಬಿಡುಗಡೆಯ ಹಂತಕ್ಕೆ ಬಂದಿದೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.
ಪರಮೇಶ್ ಮತ್ತು ನನಗೂ ದಶಕದ ಹಿಂದಿನ ನಂಟು. ಅವರ ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೆ ಹಾಡು ಬರೆದಿದ್ದೆ. ಮಳೆಗಾಲದಲ್ಲಿ ಪ್ರೇಮಿಗಳಿಬ್ಬರು ತಮ್ಮ ಭಾವನೆಗಳನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ ಎಂದವರು ಗೀತರಚನೆಕಾರ ಜಯಂತ್ ಕಾಯ್ಕಿಣಿ.
ಸಂಗೀತ ನಿರ್ದೇಶಕ ಮನೋಮೂರ್ತಿ ಆರು ಮಧುರ ಗೀತೆಗಳನ್ನು ಮಾಡಿಕೊಟ್ಡಿದ್ದು, ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ಹಾಡಿದ್ದಾರೆ ಎಂಬ ವಿವರ ಕೊಟ್ಟವರು ಝಂಕಾರ್ ಮ್ಯೂಸಿಕ್ ನ ಭರತ್ ಜೈನ್.
ಮುಂಗಾರು ಮಳೆ ಚಿತ್ರದ ರೀತಿಯಲ್ಲಿ ಒಂದು ಮ್ಯೂಸಿಕಲ್ ಹಿಟ್ ಕೊಡಬೇಕೆಂಬ ಆಶಯದಿಂದ ಬಹಳಷ್ಟು ಮೆಲೋಡಿ ಟ್ಯೂನ್ ಗಳನ್ನು ಮಾಡಲಾಯಿತು ಎಂದರು ನಿರ್ಮಾಪಕ ಪರಮೇಶ್.
‘ಪ್ರಯಣಂ’ ನಿಶ್ಚಿತಾರ್ಥದಿಂದ ಮದುವೆ ಆಗುವವರೆಗೆ ನಡೆಯುವ ಕಥೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ಎಲ್ಲ ಕಲಾವಿದರು ಸಹಕಾರದಿಂದ ಚಿತ್ರ ಉತ್ತವಾಗಿ ಮೂಡಿ ಬಂದಿದೆ ಎಂದರು.
ಚಿಕ್ಕಮಗಳೂರು, ಮಡಿಕೇರಿಯಂತಹ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ರಾಜವರ್ಧನ್ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಮುಂತಾದವರು ನಟಿಸಿದ್ದಾರೆ ಎಂದವರು ನಿರ್ದೇಶಕ ದತ್ತಾತ್ರೇಯ.
ಮನೋಮೂರ್ತಿ ಸಂಗೀತ, ವಿ. ನಾಗೇಶ್ ಆಚಾರ್ಯ ಛಾಯಾಗ್ರಹಣ. ಮದನ್ ಹರಿಣಿ ನೃತ್ಯ, ಥ್ರಿಲ್ಲರ್ ಮಂಜು, ಮಾಸ್ ಮಾದ ಸಾಹಸವಿದೆ ಎಂಬ ವಿವರಗಳು ಬಂದವು.