ಇದು ರೈತನ ಕಥೆ..! ದೇಶದ ಬೆನ್ನೆಲುಬು, ನಿಜವಾದ ಅನ್ನದಾತ ಆಗಿರುವ ರೈತ ನಿಜವಾಗಿಯೂ ಸುಖವಾಗಿರುವನೇ..
ಇದನ್ನೇ ಬಿಂಬಿಸುತ್ತದೆ ಶ್ರೀಮಂತ..!
ನಿರ್ದೇಶಕ ಹಾಗೂ ಪ್ರಧಾನ ನಿರ್ಮಾಪಕ ಆಗಿರುವ ಹಾಸನ್ ರಮೇಶ್, ರೈತ ನಿಜವಾದ ಶ್ರೀಮಂತ ಎಂಬುದನ್ನು ಬಿಂಬಿಸಿದ್ದಾರೆ. ಜೊತೆಗೆ ಅನ್ನದಾತ ರೈತನ ಭವಣೆಯ ವಿಷಯಗಳನ್ನೂ ಮಾರ್ಮಿಕವಾಗಿ ಬಿಂಬಿಸಲಾಗಿದೆ.
ಮುಂದಿನ ತಿಂಗಳ ಎರಡನೇ ವಾರ ಅಂದರೆ ಏಪ್ರಿಲ್ 14 ರಂದು ಚಿತ್ರವು ಬಿಡುಗಡೆ ಕಾಣುವುದೆಂದು ತಂಡ ಘೋಷಣೆ ಮಾಡಿಕೊಂಡಿತು.
ಅದು ಹಾಡು ಬಿಡುಗಡೆಯ ಸಮಾರಂಭ. ಅಲ್ಲಮ ಪ್ರಭುವಿನ ವಚನ ಹಾಡಾಗಿತ್ತು. ನಾದಬ್ರಹ್ಮ ಡಾ.ಹಂಸಲೇಖ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಸುಶ್ರಾವ್ಯ ಗೀತ ನೇರವಾಗಿ ರೈತನಿಗೇ ಹೋಲುವುದು ವಿಶೇಷ.
ನಮ್ಮ ಈ ಪ್ರಯತ್ನ ನಾಲ್ಕೈದು ವರ್ಷಗಳದು. ರೈತನನ್ನು ಬಹಳವೇ ವಿಶೇಷವಾಗಿ ತೋರಿಸಿ ಶ್ರೀಮಂತ ಎಂದು ಬಿಂಬಿಸುವುದು ಸುಲಭ. ಆದರೆ ಒಳಗೆ ಸಂಭ್ರಮವಿದೆ, ಸಂಕಟವಿದೆ ಜೊತೆಗೆ ವಿನೋದವೂ ಇದೆ. ಹಾಗಾಗಿ ಚಿತ್ರವೇ ಶ್ರೀಮಂತ ಎಂದರು ಹಾಸನ್ ರಮೇಶ್.
ಕೊರೊನಾ ಸಮಯದಲ್ಲಿ ಜನರಿಗೆ ಸಹಾಯಹಸ್ತ ಚಾಚುತ್ತಾ ನಿಜವಾದ ಹೀರೋ ಆಗಿದ್ದವರು ಭಾರತೀಯ ಚಿತ್ರರಂಗದಲ್ಲೇ ಗುರುತಿಸಿಕೊಂಡಿರುವ ಸೋನುಸೂದ್. ಅದೇ ಕಾರಣಕ್ಕೆ ಅವರ ಮನವೊಲಿಸಿದಾಗ ಖುಷಿಯಿಂದ ಒಪ್ಪಿಕೊಂಡು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ನಮ್ಮ ಚಿತ್ರ ಹೆಮ್ಮೆ ಎಂದರು ನಿರ್ದೇಶಕ ಹಾಸನ್ ರಮೇಶ್.
ಜೊತೆಗೆ ಕನ್ನಡದ ಸೂಪರ್ ಸ್ಟಾರ್ ಒಬ್ಬರು ಅಭಿನಯಿಸಿದ್ದಾರೆ. ಅದೂ ಹೆಮ್ಮೆಯ ವಿಷಯವೇ. ನಾಡಿಗೆ ವಿಶಿಷ್ಟ ಸಂದೇಶ ನೀಡುವುದು ನಮ್ಮ ಆಶಯ. ಅದಕ್ಕೆ ನಾದಬ್ರಹ್ಮ ಡಾ.ಹಂಸಲೇಖ ಅವರಂತಹ ಗುರುಗಳ ಆಶೀರ್ವಾದವಿದೆ ಎಂದರು.
ಗಾನ ಗಾರುಡಿಗ ದಿವಂಗತ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕೊನೆಯ ಹಾಡು ನಮ್ಮ ಚಿತ್ರದಲ್ಲಿದೆ. ಅದು ಈಗಾಗಲೇ ರೈತ ಗೀತೆಯಾಗಿ ಪ್ರಸಿದ್ಧವಾಗಿದೆ. ಹೀಗೆ ಬಹಳವೇ ವಿಶೇಷತೆಗಳ ಜೊತೆಗೆ ಬರುತ್ತಿರುವ ಶ್ರೀಮಂತ ಚಿತ್ರವನ್ನು ಎಲ್ಲರೂ ಗೆಲ್ಲಿಸಿಕೊಡಬೇಕಾಗಿದೆ ಎಂದು ಹೇಳುತ್ತಾ ಹೋದರು ರಮೇಶ್.
ಪ್ರತಿ ಊರಿನಲ್ಲಿ ಒಬ್ಬ ಉಡಾಫೆ ಮನುಷ್ಯ ಇರುತ್ತಾನೆ. ಆತ ಒಣ ಜಂಭ ಪ್ರದರ್ಶಿಸುತ್ತಾ ಓಡಾಡುತ್ತಾನೆ..
ಅಂತಹ ಪಾತ್ರ ನನ್ನದು ಎಂದರು ರವಿಶಂಕರ್ ಗೌಡ.
ಅಮಾಯಕ ಮುಗ್ಧೆ ಶಾಂತವ್ವನ ಪಾತ್ರ ನಿರ್ವಹಿಸಿರುವುದಾಗಿ ಹೇಳಿಕೊಂಡರು ಕಲ್ಯಾಣಿ. ನನ್ನದು ಊರಗೌಡನ ಪಾತ್ರ. ಬಹಳವೇ ವಿಶೇಷವಾಗಿದೆ ಎಂದವರು ಮಧುಗಿರಿ ಪ್ರಕಾಶ್.
ನಿರ್ಮಾಪಕ ಸಂಜಯ್ ಬಾಬು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು ಮತ್ತು ಸೋನುಸೂದ್ ಸಂಪರ್ಕ ಮಾಡುವಲ್ಲಿ ಸ್ನೇಹಿತರು ನೀಡಿದ ಸಹಕಾರವನ್ನು ನೆನೆದರು.
ಕಾರ್ಯಕಾರಿ ನಿರ್ಮಾಪಕ ಬಸವರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು. ಮುಖ್ಯ ಪಾತ್ರ ನಿರ್ವಹಿಸಿರುವ ಕ್ರಾಂತಿ ಪ್ರಚಾರದಲ್ಲಿ ತೊಡಗಿಕೊಂಡಿರುವುದಾಗಿ ಮಾಹಿತಿ ನೀಡಿತು ಚಿತ್ರತಂಡ. ಕೊನೆಯಲ್ಲಿ ಬಿಡುಗಡೆಗೊಂಡ ಅಸ್ಲಾಂ ಸಂಪಾದಕತ್ವದ ‘ನಮ್ಮ ಸೂಪರ್ ಸ್ಟಾರ್’ ಪತ್ರಿಕೆಯಲ್ಲಿ ಇಡೀ ‘ಶ್ರೀಮಂತ’ ಚಿತ್ರದ ವಿವರಗಳಿದ್ದವು.