ಪ್ರಜೆಗಳ ‘ಅರ್ಥ’ ಪ್ರಭುಗಳ ‘ಸ್ವಾರ್ಥ’
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಆರ್ಥಿಕ ಸ್ವಾತಂತ್ರ್ಯ ಜನರಿಗೆ ಇನ್ನೂ ಸಿಕ್ಕಿಲ್ಲ ಎಂಬ ಪ್ರತಿಪಾದನೆ ಇರುವ ಚಿತ್ರದಲ್ಲಿ ಪ್ರಜೆಗಳು ಹೇಗೆ ಪ್ರಭುಗಳು ಎಂಬುದನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ.
ವ್ಯವಸ್ಥೆಯಲ್ಲಿನ ಲೋಪಗಳು ಕಣ್ಣಿಗೆ ಕಾಣದೆ ಹೇಗೆ ದುರುಪಯೋಗ ಆಗುತ್ತಿವೆ ಎಂಬುದನ್ನೂ ಹಲವು ಸನ್ನಿವೇಶಗಳ ಮೂಲಕವೇ ಹೇಳಲಾಗಿದೆ.
ಅದುವೇ ಪ್ರಜಾರಾಜ್ಯ..!
ಕಾರ್ಖಾನೆ ಮುಚ್ಚುವುದರಿಂದ ಅದರ ಉದ್ಯೋಗಿ ಅನುಭವಿಸುವ ಯಮ ಯಾತನೆ, ಪ್ರಗತಿ ಪರ ರೈತನಾಗಲು ಹೊರಟು ಹಣ, ಅಪ್ಪ, ಕುಟುಂಬ ಕಳೆದುಕೊಂಡ ಯುವಕನ ವೇದನೆ, ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಅವರ ಅಪ್ಪ ಅಮ್ಮ ಪಡುವ ಸಂಕಟ ಹಾಗೂ ಸರ್ಕಾರಿ ಆಸ್ಪತ್ರೆಗಳು ಸಿಗದೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಬಿಲ್ ನಿಂದ ಎದುರಾದ ಸಂಕಷ್ಟ ಇವೆಲ್ಲವೂ ಪರಿಚಯವಾಗುವ ಹೊತ್ತಿಗೆ ಮೊದಲರ್ಧ ಮುಗಿಯುತ್ತದೆ.
ಆದರೆ ಈ ವಿಷಯಗಳ ಸುತ್ತ ಕಥೆ ನಡೆಯುವಾಗ, ಅಚ್ಯುತ್ ಕುಮಾರ್, ಸಂಪತ್ ಮೈತ್ರಿ, ಡಾ.ವರದರಾಜ್, ವಿಜಯ್ ಭಾರ್ಗವ್ ಹಾಗೂ ಇತರ ಪಾತ್ರಗಳ ಸ್ಪಷ್ಟತೆ ದೊರೆಯುತ್ತದೆ.
ಕಾರ್ಖಾನೆ ಮುಚ್ಚುವಾಗ ಅಚ್ಯುತ್ ನಡೆಸುವ ಹೋರಾಟ, ರೈತನಾಗಲು ಹೊರಟು ಎಲ್ಲವನ್ನು ಕಳೆದುಕೊಳ್ಳುವ ಭಾರ್ಗವ್ ನಾರಾಯಣ್, ವ್ಯವಸ್ಥೆ ಮತ್ತು ತೆರಿಗೆ ಹಣದ ವಿಷಯವನ್ನು ಸರಳವಾಗಿ ಅರ್ಥೈಸುವ ಡಾ.ವರದರಾಜ್ ಹಾಗೂ ತೆರಿಗೆ ಹಣದ ನಯವಂತಿಕೆಯನ್ನು ಹಾಸ್ಯದ ಮೂಲಕವೇ ತಿಳಿಸುವ ತಬಲಾನಾಣಿ ಹೀಗೆ ಪಾತ್ರಗಳು ಗಮನ ಸೆಳೆಯುತ್ತವೆ ಮತ್ತು ಕುತೂಹಲ ಕಾಯ್ದುಕೊಳ್ಳುತ್ತವೆ.
ಆದರೆ ಉತ್ತರಾರ್ಧದಲ್ಲಿ ಎಲ್ಲವೂ ಚುನಾವಣೆ ಕಡೆಗೆ ತಿರುಗುತ್ತದೆ. ಅಸಾಮಾನ್ಯ ಹೋರಾಟಗಾರ ಜೈಲಿನಿಂದ ಬಿಡುಗಡೆ ಕಾಣುವುದು ಮತ್ತು ಯುವ ಪಡೆಗೆ ಆ ನಾಯಕ (ದೇವರಾಜ್) ಬೆಂಬಲವಾಗಿ ನಿಲ್ಲುವುದು ನಡೆಯುತ್ತದೆ..
ಆಗ ಮೈದಳೆಯುತ್ತದೆ ಒಂದು ರಾಜಕೀಯ ಪಕ್ಷ. ಅದೇ ‘ಕರ್ನಾಟಕ ಸ್ವಾಭಿಮಾನಿ ಪಕ್ಷ’. ಆ ಪಕ್ಷ ಚುನಾವಣೆಯಲ್ಲಿ ಗೆಲ್ಲುತ್ತದೆ. ನಿರ್ಮಾಪಕ ವರದರಾಜ್ ಪಾತ್ರಕ್ಕೆ ಮುಖ್ಯಮಂತ್ರಿ ಹುದ್ದೆ ಸಿಗುತ್ತದೆ.
ಆದರೆ ಇಂದಿನ ರಾಜಕೀಯದ ಗತ್ತು ಹಾಗೂ ಸಮಕಾಲೀನ ರಾಜಕೀಯ ಗುಣಗಳನ್ನು ಬಿಂಬಿಸಲು ಇಲ್ಲಿ ಸಾಧ್ಯವಾಗಿಲ್ಲ. ಮುಖ್ಯವಾಗಿ ಅಧಿಕಾರ ಮತ್ತು ಅದರ ಶಿಷ್ಟಾಚಾರಗಳ ಸಮರ್ಪಕ ಅಭಿವ್ಯಕ್ತಿ ಕಾಣುವುದಿಲ್ಲ.
ಕಥೆ, ಚಿತ್ರಕಥೆ ಬರೆದಿರುವ ಡಾ.ವರದರಾಜ್ ಡಿ.ಎನ್ ವೇಗಕ್ಕೆ ಒತ್ತು ನೀಡಿಲ್ಲ; ಹಾಗಾಗಿ ನಿರೂಪಣೆ ಹೊಸ ಜಾಡನ್ನು ಬೆನ್ನು ಹತ್ತುವುದು ಸಾಧ್ಯವಾಗಿಲ್ಲ..
ದೇವರಾಜ್, ಸುಧಾರಾಣಿ, ಶಂಖನಾದ ಆಂಜನಪ್ಪ, ಮಧುಗಿರಿ ಪ್ರಕಾಶ್, ಶಶಿಕಲಾ, ಚಿಕ್ಕ ಹೆಜ್ಜಾಜಿ ಮಹಾದೇವ್ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇನ್ನೇನು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಬಹುದಾದ ಈ ಸಂದರ್ಭದಲ್ಲಿ ಮತದಾರ ಪ್ರಭುಗಳಿಗೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದೆ.