ವಿಜಯ ರಾಘವೇಂದ್ರ ಪ್ರಗತಿ ಪರ ರೈತನಾಗಿ ನಟಿಸಿರುವ ಹಾಗೂ ಎನ್.ಆರ್.ನಂಜುಂಡೇಗೌಡ ನಿರ್ದೇಶನದ ಚಿತ್ರ ‘ಕಾಸಿನ ಸರ’ ಈ ವಾರ (ಮಾರ್ಚ್ 3) ಬಿಡುಗಡೆ ಕಾಣುತ್ತಿದೆ.
ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಇರುವ ಈ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ಹೇಳಲಾಗಿದೆ. ವಿಜಯ ರಾಘವೇಂದ್ರ ಜೊತೆ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ.
ಗ್ರಾಮೀಣ ಭಾಗದಿಂದಲೇ ಬಂದ ದೊಡ್ಡನಾಗಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಗ್ರಾಮೀಣ ಪರಿಸರದ ‘ಹೆಬ್ಬೆಟ್ಟು ರಾಮಕ್ಕ’ ನಿರ್ದೇಶನ ಮಾಡಿದ್ದ ನಂಜುಂಡೇಗೌಡ ಈ ಚಿತ್ರದ ನಿರ್ದೇಶಕ.
ಕಥೆಯೂ ಗ್ರಾಮೀಣ ಭಾಗದಲ್ಲಿ ನಡೆಯುವುದರಿಂದ ಅನೇಕ ಭಾವನಾತ್ಮಕ ಅಂಶಗಳು ಕಾಡುತ್ತವೆ. ರೈತನ ಮೇಲೆ ಇತರ ಅವಲಂಬನೆ ಎದ್ದು ಕಾಣುವ ಅಂಶಗಳು ಇವೆ.
‘ಕಾಸಿನ ಸರ’ ಎಂದರೆ ಕೇವಲ ಒಡವೆ ಅಲ್ಲ; ಅದೊಂದು ಭಾವನಾತ್ಮಕ ವಿಷಯವೂ ಆಗಿದೆ. ಚಿತ್ರದಲ್ಲಿ ಭರಣೀಯ ಮಳೆ ಹೋಯ್ದು ಎಂಬ ಹಾಡು ಶ್ರೀಧರ್ ಸಂಭ್ರಮ್ ಅವರ ಸಂಗೀತದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ ಮತ್ತು ಅಷ್ಟೇ ಸುಂದರವಾಗಿ ವೇಣು ಚಿತ್ರಿಸಿದ್ದಾರೆ.
ಹೃಷಿಕಾ ಪೂಣಚ್ಚ ಕೃಷಿ ಪದವೀಧರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ಮೂರು ವರ್ಷಗಳ ಸುದೀರ್ಘ ಅವಧಿ ಬಳಿಕ ನಾನು ಅಭಿನಯಿಸಿದ ಚಿತ್ರವೊಂದು ಬಿಡುಗಡೆ ಕಾಣುತ್ತಿದೆ ಎಂಬ ಹರ್ಷ ಅವರದು..
ಕಾಸಿನ ಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಸಾಂಪ್ರದಾಯಿಕ, ಸಾವಯುವ ಕೃಷಿಯನ್ನು ಬಿಟ್ಟರೆ ಮುಂದೆ ಬಹುದೊಡ್ಡ ಅಪಾಯ ಕಾದಿದೆ. ಈ ಹಿನ್ನೆಲೆಯಲ್ಲಿ ಮಣ್ಣನ್ನು ರಕ್ಷಿಸುವ ಹೊಣೆಗಾರಿಕೆಯ ಬಗ್ಗೆ ಚಿತ್ರದಲ್ಲಿ ಬಹುದೊಡ್ಡ ಸಂದೇಶವಿದೆ.