ಮಾರ್ಚ್ 3ಕ್ಕೆ ಚಿತ್ರಮಂದಿರಗಳಲ್ಲಿ..
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವರದರಾಜ್ ಡಿ.ಎನ್ ನಿರ್ಮಿಸಿರುವ ‘ಪ್ರಜಾ ರಾಜ್ಯ’ ಈ ವಾರ ಅಂದರೆ ಮಾರ್ಚ್ 3ರಂದು ತೆರೆ ಕಾಣುತ್ತಿದೆ.
ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಪ್ರಜಾರಾಜ್ಯ ಚಿತ್ರದ ಹಾಡು ಹಾಗೂ ಟ್ರೇಲರ್ ಮೂಲಕ ಈಗಾಗಲೇ ಜನರ ಮನ ಗೆದ್ದಿದೆ. ಉತ್ತಮ ಸಂದೇಶವಿರುವ ಚಿತ್ರ ಕೂಡ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ಭರವಸೆ ನಿರ್ಮಾಪಕರದು..
ಈಚೆಗೆ ವಿಜಯ್ ಪ್ರಕಾಶ್ ಹಾಡಿರುವ ಸಂದೀಪ್ ಹೆಗ್ಗದ್ದೆ ಬರೆದಿರುವ ‘ಏನಾಗಲಿ ಎದ್ದೇಳು..’ ಎಂಬ ಹಾಡು ಜಿ.ಟಿ ಮಾಲ್ ನಲ್ಲಿ
ಅದ್ದೂರಿ ಇವೆಂಟ್ ನಲ್ಲಿ ಬಿಡುಗಡೆಗೊಂಡಿದೆ.
ಇದೇ ವೇಳೆ ಡಾ.ಪೂಜಾ ಪ್ರಶಾಂತ್ ಆಯೋಜಿಸಿದ್ದ ಮಕ್ಕಳ ಫ್ಯಾಷನ್ ಶೋ ಸಂದರ್ಭದಲ್ಲಿ ಈ ಹಾಡು ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ನಿರ್ಮಾಪಕ ಡಾ.ವರದರಾಜ್ ಅಭಿನಯಿಸಿರುವುದು ವಿಶೇಷವಾಗಿದೆ. ವಿಜೇತ್ ಮಂಜಯ್ಯ ಈ ಚಿತ್ರದ ಸಂಗೀತ ನಿರ್ದೇಶಕ.
ಸದ್ಯದಲ್ಲೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದರ ಹಿನ್ನೆಲೆಯಲ್ಲಿ ಪ್ರಜಾ ರಾಜ್ಯ ಚಿತ್ರಕ್ಕೆ ಮಹತ್ವ ಹೆಚ್ಚಾಗಿದೆ. ಆರ್ಥಿಕ ಸ್ವಾತಂತ್ರ್ಯ ಇನ್ನು ನಮಗೆ ಸಿಕ್ಕಿಲ್ಲ ಎಂಬುದನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಹೇಳಲಾಗಿದೆ ಎಂಬ ವಿವರ ಕೊಟ್ಟರು ಡಾ.ಡಿ.ಎನ್.ವರದರಾಜ್.
ವಿಜಯ್ ಭಾರ್ಗವ್ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಡಾ.ವರದರಾಜ್ ಅಚ್ಯುತಕುಮಾರ್, ವಿಜಯ್ ಭಾರ್ಗವ, ಸುಧಾ ಬೆಳವಾಡಿ, ದಿವ್ಯ ಗೌಡ, ಸುಧಾರಾಣಿ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್ ಮೊದಲಾದವರಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ.