ಪ್ಯಾನ್ ಇಂಡಿಯಾ ಚಿತ್ರದ ಅದ್ದೂರಿ ವೈಭವ
ದೊಡ್ಡ ದೊಡ್ಡ ತಾರಾಬಳಗ ಹೊಂದಿರುವ ಮತ್ತು ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ‘ಕಬ್ಜ’ ಬಿಡುಗಡೆಗೆ ಮುನ್ನವೇ ಅಭೂತ ಪೂರ್ವ ಸಾಧನೆ ಮಾಡತೊಡಗಿದ್ದು, ಚಿತ್ರದ ಪ್ರಚಾರದ ಭಾಗವಾಗಿ ಶಿಡ್ಲಘಟ್ಟದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕಂಡಿದ್ದು ಭಾರೀ ಜನ ಸಾಗರ..
ಶಿಡ್ಲಘಟ್ಟದ ಜ್ಯೂನಿಯರ್ ಕಾಲೇಜು ಮೈದಾನ ಆವರದಲ್ಲಿ ಜಗಮಗಿಸುವ ವೇದಿಕೆ ಕಣ್ಣು ಕುಕ್ಕುವಂತಿತ್ತು. ಆ ವೇದಿಕೆಯಲ್ಲಿ ತಾರೆಗಳ ಕಲರವವೂ ಹೆಚ್ಚಾಗಿತ್ತು.
‘ನಮಾಮಿ ನಮಾಮಿ.. ಹಾಡು ಅನೇಕ ವಿವಿಧ್ಯತೆಗಳ ಸಂಗಮವಾಗಿದ್ದು, ಸಮಾರಂಭದಲ್ಲಿ ಅದನ್ನು ಸಾಬೀತುಪಡಿಸಿತು. ಇದರ ಜೊತೆಗೆ ಹೊಸ ಹಾಡು ‘ಚುಮು ಚುಮು ಚಳಿ ಚಳಿ ತಬ್ಕೋ ಚಳುವಳಿ..’ ಬಿಡುಗಡೆಗೊಂಡಿತು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಿಡ್ಲಘಟ್ಟ ಶಾಸಕ ಮುನಿಯಪ್ಪ, ಸಮಾಜ ಸೇವಕ ರಾಮಚಂದ್ರಗೌಡ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತಿತರ ರಾಜಕೀಯ ನಾಯಕರ ದಂಡು ಅಲ್ಲಿತ್ತು. ಪ್ರತಿಯೊಬ್ಬರೂ ಚಿತ್ರದ ಆಶಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಮುಖ್ಯವಾಗಿ ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಹಾಜರಾತಿ ಇಡೀ ಚಿತ್ರತಂಡಕ್ಕೆ ಖುಷಿ ತಂದುಕೊಟ್ಟಿತ್ತು. ಶಿವಣ್ಣ ಎಂದಿನಂತೆ ಹಾಡಿ ಕುಣಿದು ರಂಜಿಸಿದರು.
ಕಬ್ಜ ನಾಯಕ ನಟ ಉಪೇಂದ್ರ ಅವರ ಜೊತೆಗಿನ ಬಹಳ ವರ್ಷದ ಒಡನಾಟ ಶಿವಣ್ಣ ಸ್ಮರಿಸಿದರಲ್ಲದೆ ‘ಓಂ’ ಚಿತ್ರದ ಸನ್ನಿವೇಶಕ್ಕೆ ಆರ್.ಚಂದ್ರು ಅವರನ್ನು ಬಳಸಿಕೊಂಡು ಅಭಿನಯ ಮಾಡಿದ್ದು ವಿನೋದವಾಗಿತ್ತು.
ಇದೇ ಸಂದರ್ಭದಲ್ಲಿ ಆರ್.ಚಂದ್ರು ಅವರ ಗೆಳೆಯ ಪ್ರದೀಪ್ ಈಶ್ವರ್
ಚಿತ್ರದ ಆಶಯಗಳ ಬಗ್ಗೆ ಮಾತನಾಡುತ್ತಾ ಕನ್ನಡ ಚಿತ್ರರಂಗದ ಸಾಧನೆಗಳನ್ನು ಬಣ್ಣಿಸಿದರು. ವರನಟ ಡಾ.ರಾಜ್ ಕುಮಾರ್ ಅವರ ‘ಮೈಷಾಸುರ ಮರ್ದಿನಿ’ ಆಗ ಎಲ್ಲಾ ಭಾಷೆಗಳಿಗೂ ಡಬ್ ಆದ ಮೊದಲ ಪ್ಯಾನ್ ಇಂಡಿಯಾ ಚಿತ್ರ ಎಂಬ ವಿವರ ಕೊಟ್ಟರು.
ಕಬ್ಜ ಬಾಲಿವುಡ್ ಹಂಚಿಕೆ ಪಡೆದಿರುವ ಆನಂದ್ ಪಂಡಿತ್, ಕಾರ್ಯಕಾರಿ ನಿರ್ಮಾಪಕರಾಗಿರುವ ಅಲಂಕಾರ್ ಪಾಂಡ್ಯನ್ ಮೊದಲಾದವರ ಉಪಸ್ಥಿತಿ ಈ ಸಂದರ್ಭದಲ್ಲಿತ್ತು.
ನಟಿ ಶ್ರೀಯ ಶರಣ್ ಮುಖ್ಯ ಆಕರ್ಷಣೆಯಾಗಿದ್ದರು. ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ ಅನೂಪ್ ರೇವಣ್ಣ ಸಹ ತಮ್ಮ ಪಾತ್ರ ಹಾಗೂ ಚಿತ್ರದ ಆಶಯಗಳ ಬಗ್ಗೆ ಮಾತನಾಡಿದರು.
ಡಾ.ಸುಧಾಕರ್ ಹಾಗೂ ರಾಜಕೀಯ ಗಣ್ಯರ ಆಶೀರ್ವಾದ ಮತ್ತು ಶಿವಣ್ಣ ದಂಪತಿಗಳ ಆಶೀರ್ವಾದ ನನ್ನ ಮೇಲಿರುವುದು ಪುಣ್ಯ ಎಂದರು ಆರ್.ಚಂದ್ರು. ಈ ಚಿತ್ರವು ಮುಂಬೈನಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಇದರ ಹಕ್ಕು ಪಡೆದಿರುವ ಆನಂದ್ ಪಂಡಿತ್ ಅವರಿಗೆ ದೊಡ್ಡ ಹೆಸರಿದೆ. ಹಾಗಾಗಿ ಎರಡು ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಈ ಚಿತ್ರ ಬಿಡುಗಡೆ ಕಾಣುವುದು ಸಾಧ್ಯವಾಗುತ್ತಿದೆ ಎಂದರು ಆರ್.ಚಂದ್ರು.
ಈ ಚಿತ್ರದ ಮೂಲಕ ಇಂಡಿಯನ್ ರಿಯಲ್ ಸ್ಟಾರ್ ಆಗಿರುವ ಉಪೇಂದ್ರ, ಈ ಚಿತ್ರದ ಬಗ್ಗೆ ದೊಡ್ಡ ಕನಸು ಕಂಡವರು ಆರ್.ಚಂದ್ರು. ಈಗ ಅದನ್ನು ಸಾಕಾರಗೊಳಿಸಿರುವುದು ಅಚ್ಚರಿ ಮೂಡಿಸಿದೆ ಎಂದರು. ಶಿಡ್ಲಘಟ್ಟ ಜನತೆಗೆ ಪ್ರಜಾಕೀಯ ಅಂದರೆ ಏನು ಎಂಬುದನ್ನು ಸಹ ಉಪೇಂದ್ರ ವರ್ಣಿಸಿದರು.
ಗುರುಕಿರಣ್ ಹಾಡು ಮತ್ತು ರೋಬೋ ಗಣೇಶ್ ನೃತ್ಯ ಜನಮನ ಸೂರೆಗೊಂಡಿತು..
ಇದೇ ವೇಳೆ ಶಿವಕುಮಾರ್ ನೇತೃತ್ವದ ಚಿತ್ತಾರ ಮ್ಯಾಗಜಿನ್ ಪೋಸ್ಟರ್ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.