ಗಮ್ಮತ್ತು ಗೌಳಿ ರಕ್ತದೋಕುಳಿ..
ಬೀಳುವ ಮಳೆಯ ನಡುವೆ ಕೊಡಲಿಯ ಝೇಂಕಾರದಿಂದ ಹೊಮ್ಮುವ ರಕ್ತದೋಕುಳಿ ಕೆಂಪು ವರ್ಣದಲ್ಲಿ ಕಲೆಯ ರೂಪ ತಾಳುತ್ತದೆ..
ಅಷ್ಟರ ಮಟ್ಟಿಗೆ ಪ್ರತಿ ಫ್ರೇಮ್ ನಲ್ಲಿ ಹಿಂಸೆಯೂ ಕ್ಲಾಸಿಕ್ ಆಗಿ ಕಾಣುತ್ತದೆ.. ಅಲ್ಲಿ ಪ್ರೇಕ್ಷಕ ಕೇವಲ ಕೌತುಕದ ವೀಕ್ಷಕ. ರುಂಡ ಚೆಂಡಾಡುವ ಗೌಳಿಯ ಆಕ್ರೋಶಕ್ಕೆ ತನ್ನ ಆವೇಶ ಮೊಗೆದು ಕೊಟ್ಟವ..
ತಾನಾಯಿತು ತನ್ನ ಹಸು ಮಗುವಿನ ಕೆಲಸವಾಯಿತು ಎಂದು ಕುಗ್ರಾಮದಲ್ಲಿ ಬಾಳುತ್ತಿದ್ದ ಗೌಳಿಗೆ ಪತ್ನಿಯ ರೂಪವೇ ಶಾಪವಾಗುತ್ತದೆ ಎಂಬುದು ತಿಳಿಯುವಷ್ಟರಲ್ಲಿ ಎಲ್ಲಾ ಅವಘಡಗಳು ನಡೆದು ಹೋಗುತ್ತವೆ
ಪೈಶಾಚಿಕ ಕೃತ್ಯ ನಡೆಸಲು ಹೇಳಿ ಮಾಡಿಸಿದಂಥ ಕ್ರೌರ್ಯ ತುಂಬಿಕೊಂಡ ಹೊಲಸು ಕಾಮುಕ ಪೊಲೀಸ್ ಅಧಿಕಾರಿ; ಅಪ್ರಾಪ್ತ ಬಾಲಕಿಯ ಮೇಲೆ ಮಾಡಿದ ಅತ್ಯಾಚಾರ ಮುಚ್ಚಲು ಬಂದು ಗೌಳಿ ಕುಟುಂಬದ ಮೇಲೆ ಹದ್ದಿನ ಕಣ್ಣಿಡುವುದು; ತೆಳು ಬಾಲಕೆಯಂತಹ ಆತನ ಪತ್ನಿಯ ಮೇಲೆ ಕಣ್ಣು ಹಾಕಿ ಹಿಂಸೆ ನೀಡುವುದು ಬಳಿಕ ಆತನ ಜೀವನಾಧಾರವಾಗಿದ್ದ ಹಸು ಕುರಿಗಳನ್ನು ನಾಪತ್ತೆ ಮಾಡಿ ಹಿಂಸೆ ನೀಡುವುದು..
ಇದರ ಪರಿಣಾಮವಾಗಿ ರೂಪುಗೊಂಡ ಗೌಳಿಯೊಳಗಿನ ರಕ್ಕಸ ಬಳಿಕ ಆಡುವುದು ರಕ್ತ ಚೆಂಡಾಟ. ಮೊದಲರ್ಧ ಕಥೆ ತೆಳುವಾಗಿ ಸಾಗಿದರೂ ಉತ್ತರಾರ್ಧದಲ್ಲಿ ರೋಷಾವೇಶ ವಿಜೃಂಭಿಸುತ್ತದೆ.
ಆಗ ಕಾಡು ಮಳೆ ತೋಟ ಎಲ್ಲವೂ ನೋಡಲು ಕಣ್ಣಿಗೆ ಹಬ್ಬ. ಅದೆಲ್ಲಿಯದೋ ರಕ್ಕಸರ ಗುಂಪು ಅಟ್ಟಹಾಸ ಮೆರೆದು ಗೌಳಿ ಕೋಪಕ್ಕೆ ಸಿಕ್ಕು ಚೆಟ್ನಿಯಾಗುತ್ತದೆ.
ಇಡೀ ಚಿತ್ರದಲ್ಲಿ ಆರ್ಭಟಿಸಿ ಹೂಂಕರಿಸಿದ್ದಾರೆ ಶ್ರೀನಗರ ಕಿಟ್ಟಿ. ಅವರಿಗೆ ಸಾಟಿಯಾಗಿ ನಗು ಅಳುವಿನಲ್ಲಿ ಒಂದಾಗಿ ಅತ್ಯುತ್ತಮ ನಟನೆ ನೀಡಿದ್ದಾರೆ ಪಾವನ ಗೌಡ. ಹಾಗೆಯೇ ರಂಗಾಯಣ ರಘು ಹೃದಯವನ್ನು ಆರ್ದ್ರಗೊಳಿಸುವಷ್ಟು ಆಪ್ತವಾಗಿ ನಟಿಸಿದ್ದಾರೆ.
ಕೆಟ್ಟ ಪೊಲೀಸ್ ಅಧಿಕಾರಿಯಾಗಿ ಶರತ್ ಲೋಹಿತಾಶ್ವ ಹಾಗೆಯೇ ಖಳರಾಗಿ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಪ್ರೇಕ್ಷಕ ಅವರ ವಿರುದ್ಧ ರೊಚ್ಚಿಗೇಳುವಷ್ಟು ಉತ್ತಮವಾಗಿ ನಟಿಸಿದ್ದಾರೆ.
ನಿರ್ದೇಶಕ ಸೂರ ಮೊದಲ ಚಿತ್ರದಲ್ಲೇ ಭರವಸೆ ಹುಟ್ಟಿಸಿದ್ದಾರೆ.
ಸಂದೀಪ್ ಛಾಯಾಗ್ರಹಣ, ಉಮೇಶ್ ಸಂಕಲನ ಹಾಗೂ ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ ಅತ್ಯುತ್ತಮ.