ಗಡಿ ತಂಟೆ ಬಗೆಹರಿಸುವ ಕಿಲಾಡಿಗಳು
ಎಷ್ಟೋ ವೇಳೆ ಕೆಲವರು ಮಾಡುವ ತರಲೆಯಿಂದ ಬೇರೆಯವರಿಗೆ ಒಳ್ಳೆಯದಾಗಿ ಹೋಗುತ್ತದೆ..
ಇಲ್ಲಿ ಕೂಡ ಹಾಗೆ ಅಭಿ ಮತ್ತು ಆದಿ ಎಂಬ ಇಬ್ಬರು ಹುಡುಗರು ಮಾಡುವ ಸಾಹಸ ಯಡವಟ್ಟುಗಳಿಂದ ಬಹಳ ವರ್ಷಗಳಿಂದ ಬಗೆ ಹರಿಯದ ಸಮಸ್ಯೆ ಬಗೆ ಹರಿಯುತ್ತದೆ..
ಬೆಂಗಳೂರಿನ ಉದ್ಯಮಿಯೊಬ್ಬರ ಇಬ್ಬರು ಸೋಮಾರಿ ಮತ್ತು ತರ್ಲೆ ಗುಣಗಳಿರುವ ಇಬ್ಬರು ಪುತ್ರರು ಅಪ್ಪನ ಕಟ್ಟುನಿಟ್ಟಿನ ಆದೇಶದ ಮೇರೆಗೆ ದೂರದ ಸಾಧಾರಣ ಪಟ್ಟಣಕ್ಕೆ ಹೋಗಬೇಕಾಗಿ ಬರುತ್ತದೆ.
ಅಲ್ಲಿ ರಾಜ್ಯ ಭಾಷೆ ಗಡಿ ವಿಷಯಗಳಲ್ಲಿ ವೈಷಮ್ಯದ ವಾತಾವರಣವಿರುತ್ತದೆ. ಅದು ಕೆಲವು ಸ್ವಾರ್ಥಿಗಳು ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದು ಎಂಬುದನ್ನು ನಿರೂಪಿಸುವುದೇ ಕಥಾ ವೈಶಿಷ್ಟ್ಯ.
ಜೊತೆಗೆ ಕಾಲೇಜು ವಿದ್ಯಾರ್ಥಿಗಳ ಕಿರುಕುಳ ವ್ಯವಸ್ಥೆಯೂ ತಳುಕು ಹಾಕಿಕೊಳ್ಳುತ್ತದೆ. ಕೊನೆಗೆ ಗಡಿ ಭಾಗದಲ್ಲಿ ಕನ್ನಡ ಬಾವುಟ ಹಾರುವಲ್ಲಿಗೆ ತಂಟೆ ಕೊನೆಗೊಳ್ಳುತ್ತದೆ. ಸುಖಾಂತವಾಗುತ್ತದೆ.
ಅಭಿ ಮತ್ತು ಆದಿ ಪಾತ್ರದಲ್ಲಿ ಆರ್ಯ ಮತ್ತು ಅಲಂಕಾರ್ ನಟಿಸಿದ್ದಾರೆ. ಜೊತೆಯಲ್ಲಿ ಆರತಿ ಮತ್ತು ಇಶಾನ ಪಾತ್ರವಿದೆ. ಇನ್ನುಳಿದಂತೆ ಹಿರಿಯ ನಟ ಕೀರ್ತಿರಾಜ್, ವಾಣಿಶ್ರೀ, ಹನುಮಂತೇಗೌಡ, ಅಫ್ಜಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಿರ್ದೇಶಕ ಸಂತೋಷ್ ಕುಮಾರ್ ಸಿನಿಮ್ಯಾಟಿಕ್ ಗುಣಗಳನ್ನು ಹೊಂದಿಸುವುದರಲ್ಲಿ ಮತ್ತಷ್ಟು ಪರಿಶ್ರಮ ಹಾಕಬಹುದಿತ್ತು ಎನಿಸುತ್ತದೆ. ಏಕೆಂದರೆ ಸಂಭಾಷಣೆ, ಹಿನ್ನೆಲೆ ಸಂಗೀತ ಎಲ್ಲವೂ ಬೇರೆ ಬೇರೆ ಟ್ರ್ಯಾಕ್ ಗಳಲ್ಲಿ ಸಂಚರಿಸುವುದು ಎದ್ದು ಕಾಣುತ್ತದೆ.
ಮನಾಲಿಯಲ್ಲಿ ತೆಗೆದ ಹಾಡು ಸೇರಿದಂತೆ ಅಲ್ಲಲ್ಲಿ ಸುಂದರ ಪರಿಸರ ಕಟ್ಟಿಕೊಟ್ಟಿರುವುದು ವಿಶೇಷವಾಗಿದೆ.