Snehapriya.com

June 9, 2025

ಬಾಂಡ್; ಕಾದಂಬರಿ ಚಿತ್ರಗಳ ಸರದಾರ ಎಸ್.ಕೆ.ಭಗವಾನ್

Social Share :

ಎಸ್.ಕೆ.ಭಗವಾನ್ ಇನ್ನಿಲ್ಲ..

ಕನ್ನಡದ ಜನಪ್ರಿಯ ಚಿತ್ರಗಳ ನಿರ್ದೇಶಕ ಎಸ್.ಕೆ.ಭಗವಾನ್ (90) ಸೋಮವಾರ (ಫೆ.20) ಇಹಲೋಕ ತ್ಯಜಿಸಿದ್ದಾರೆ.

ಮೂಲತಃ ಬೆಂಗಳೂರಿನವರೇ ಆಗಿದ್ದ ಎಸ್.ಕೆ.ಭಗವಾನ್ 1933ರ ಜುಲೈ 5 ರಂದು ಜನಿಸಿದರು. ಬೆಂಗಳೂರಿನಲ್ಲಿಯೇ ಹೈಸ್ಕೂಲು ಶಿಕ್ಷಣ ಮುಗಿಸಿದರು.

ಬಳಿಕ ಹಿರಣಯ್ಯ ಮಿತ್ರ ಮಂಡಳಿ ನಾಟಕ ಕಂಪನಿಯಲ್ಲಿ ಕೆಲ ಕಾಲ ಇದ್ದ ಅವರು, 1956 ರಲ್ಲಿ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರಿಗೆ ಸಹಾಯಕರಾಗಿ ‘ಭಾಗ್ಯೋದಯ’ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದರು.

1966ರಲ್ಲಿ ಎ.ಸಿ.ನರಸಿಂಹ ಮೂರ್ತಿ ಅವರ ಜೊತೆ ‘ಸಂಧ್ಯಾ ರಾಗ’, 1967ರಲ್ಲಿ ಅವರ ಜೊತೆಯಲ್ಲೇ ‘ರಾಜ ದುರ್ಗದ ರಹಸ್ಯ’ ಚಿತ್ರಗಳನ್ನು ಮಾಡಿದರು. ಮುಂದೆ 1968 ರಲ್ಲಿ ದೊರೈ ಅವರ ಜೊತೆ ಸೇರಿ ಮಾಡಿದ ‘ಜೇಡರ ಬಲೆ’ ಈ ಜನಪ್ರಿಯ ಜೋಡಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾರಣವಾಯಿತು.

ಬಾಂಡ್ ಶೈಲಿಯ ಚಿತ್ರಗಳ ಮೂಲಕ ಹೆಸರಾದ ದೊರೈ-ಭಗವಾನ್ ಖ್ಯಾತಿಯ ನಿರ್ದೇಶಕ ಜೋಡಿ ಮುಂದೆ ಕಾದಂಬರಿ ಆಧಾರಿತ ಚಿತ್ರಗಳ ಮೂಲಕ ಮನೆ ಮಾತಾಗಿದ್ದು ಇತಿಹಾಸ.

ಕನ್ನಡ ಕಂಠೀರವ ಡಾ.ರಾಜ್ ಕುಮಾರ್ ಅವರ ಸೂಪರ್ ಹಿಟ್ ಚಿತ್ರಗಳು ಹಾಗೂ ಅನಂತ್ ನಾಗ್ ಲಕ್ಷ್ಮಿ ಜೋಡಿಯ ಜನಪ್ರಿಯ ಚಿತ್ರಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಈ ಜೋಡಿಯದು..

‘ಗೋವಾದಲ್ಲಿ ಸಿಐಡಿ 999’, ‘ಆಪರೇಷನ್ ಜಾಕ್ ಪಾಟ್’, ‘ಜೇಡರ ಬಲೆ’ಯಂತಹ ಜೇಮ್ಸ್ ಬಾಂಡ್ ಮಾದರಿಯ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದ ಜೋಡಿ, ಮುಂದೆ ವರನಟ ಡಾ.ರಾಜ್ ಕುಮಾರ್ ಅವರ ‘ಕಸ್ತೂರಿ ನಿವಾಸ’ ಚಿತ್ರದ ಮೂಲಕ ಮನೆ ಮಾತಾಯಿತು.

ಬಾಂಡ್ ಶೈಲಿಯ ‘ಆಪರೇಷನ್ ಡೈಮಂಡ್ ರಾಕೇಟ್’ ಸೇರಿದಂತೆ ‘ಎರಡು ಕನಸು’, ‘ಬಯಲು ದಾರಿ’, ‘ಗಾಳಿ ಮಾತು’, ‘ಚಂದನದ ಗೊಂಬೆ’, ‘ಹೊಸ ಬೆಳಕು’, ‘ಬೆಂಕಿಯ ಬಲೆ’, ‘ಜೀವನ ಚೈತ್ರ’ ಹೀಗೆ ಅತ್ಯಂತ ಸೂಪರ್ ಹಿಟ್ ಗಳ ಮೂಲಕ ದೊರೈ-ಭಗವಾನ್ ಜೋಡಿ ಹೆಸರಾಗಿತ್ತು. ಎರಡು ತಮಿಳು ಚಿತ್ರ ಸೇರಿದಂತೆ 32 ಚಿತ್ರಗಳನ್ನು ಈ ಜೋಡಿ ನಿರ್ದೇಶನ ಮಾಡಿದೆ.

1996ರಲ್ಲಿ ತೆರೆ ಕಂಡ ಬಾಳೊಂದು ಚದುರಂಗ’ ಈ ಜೋಡಿಯ ಕೊನೆಯ ಚಿತ್ರ. 2000ನೇ ಇಸವಿಯಲ್ಲಿ ದೊರೈ ಅವರು ಇಹಲೋಕ ತ್ಯಜಿಸಿದ ಬಳಿಕ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ಮುಟ್ಟಾಗಿಯೇ ಓಡಾಡಿಕೊಂಡಿದ್ದ ಎಸ್.ಕೆ.ಭಗವಾನ್ 2019ರಲ್ಲಿ ‘ಆಡುವ ಗೊಂಬೆ’ ಚಿತ್ರವನ್ನು ನಿರ್ದೇಶನ ಮಾಡಿದ್ದರು ಮತ್ತು ಅದು ಅವರ 50ನೇ ಚಿತ್ರವಾಗಿತ್ತು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *