ಇದು ಗೊಂದಲ ಮತ್ತು ಅಸ್ವಸ್ಥ ಮನಸ್ಸಿರುವವರ ಕಥೆ. ಅದಕ್ಕೆ ವೈದ್ಯಕೀಯ ಭಾಷೆಯಲ್ಲಿರುವ ಹೆಸರು ಖೆಯೊಸ್..
ಹೌದು ಇಲ್ಲಿ ಚಿತ್ರದ ಹೆಸರೂ ಖೆಯೊಸ್. ಇದು ವೈದ್ಯಕೀಯ ರಂಗದ ಕಥೆ. ಮುಖ್ಯವಾಗಿ ಈ ಚಿತ್ರದ ನಿರ್ದೇಶಕರು ಡಾ.ಜಿ.ವೆಂಕಟೇಶ್ ಪ್ರಸಾದ್ ಎಂಬಿಬಿಎಸ್ ಡಾಕ್ಟರ್.
ಈ ಕಥೆ ಹೇಗೆ ಹುಟ್ಟಿಕೊಂಡಿತೋ ಏನೋ.. ವೈದ್ಯಕೀಯ ವಿದ್ಯಾರ್ಥಿಗಳ ಮನಸ್ಥಿತಿ, ಗೊಂದಲ, ಅವ್ಯವಸ್ಥೆಯ ಸುತ್ತ ನಡೆಯುವ ಕಥೆ. ಅಕ್ಷಿತ್ ಶಶಿಕುಮಾರ್ ಮುಖ್ಯ ಪಾತ್ರದಲ್ಲಿದ್ದಾರೆ.
ಶನಿವಾರ (ಫೆ.11) ನಡೆದ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಎದ್ದು ಕಂಡಿದ್ದು ಸಹ ಅಕ್ಷಿತ್ ಶಶಿಕುಮಾರ್. ಅಚ್ಚರಿಯ ಬೆಳವಣಿಗೆಯಲ್ಲಿ ಸುಪ್ರೀಂಹೀರೋ ಶಶಿಕುಮಾರ್ ಸಹ ಒಂದು ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್ ಬಿಡುಗಡೆಗೆ ಅವರೂ ಸಹ ಬಂದಿದ್ದರು.
ಟ್ರೈಲರ್ ಬಿಡುಗಡೆಯ ವಿಶೇಷ ಅತಿಥಿಗಳಾಗಿ ವಿನೋದ್ ಪ್ರಭಾಕರ್, ನಿರಂಜನ್ ಸುಧೀಂದ್ರ ಹಾಗೂ ಪಾವಗಡ ಮಂಜು ಅವರ ಆಗಮನವಾಗಿತ್ತು.
ಶಶಿಕುಮಾರ್ ಕಾರ್ಯಕ್ರಮ ಉದ್ಘಾಟನೆ ಹಾಗೂ ಇತರ ವಿಷಯಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು. ಕೋರಿಕೆಯ ಮೇರೆಗೆ ‘ಯಜಮಾನ’ ಚಿತ್ರದ ಹಾಡಿಗೆ ಹೆಜ್ಜೆಯನ್ನೂ ಹಾಕಿದರು.
ತಡವಾಗಿ ಬಂದರೂ ಚಿತ್ರತಂಡವನ್ನು ಹುಮ್ಮಸ್ಸಿನ ಅಂಚಿಗೆ ಕೊಂಡೊಯ್ದವರು ವಿನೋದ್ ಪ್ರಭಾಕರ್. ಹೊಸ ತಂಡಕ್ಕೆ ಬೆನ್ನು ತಟ್ಟಿದರು. ನಿರ್ಮಾಪಕಿ ಪರೂಲ್ ಅಗರ್ ವಾಲ್ ಅವರಿಗೆ ಕನ್ನಡ ಹೇಳಿಕೊಟ್ಟರು. ನಾನು ಚಿತ್ರರಂಗಕ್ಕೆ ಬಂದು 20 ವರ್ಷವಾಯ್ತು.. ಇಂದಿನ ಯೂತ್ ಅಂದ್ರೆ ಅಕ್ಷಿತ್ ಮತ್ತು ನಿರಂಜನ್ ಥರದವರು ಎಂದರು.
ಗಾಯಕ ಶಶಾಂಕ್ ಶೇಷಗಿರಿ, ಸಂಗೀತ ನಿರ್ದೇಶಕ ವಿಜಯ್ ಹರಿತ್ಸಾ, ನಟರಾದ ಶಿವಾನಂದ್, ಆರ್.ಕೆ.ಚೆಂದನ್, ಡಾ.ಸುಮಿತ್ ತಲ್ವಾರ್, ನಟಿ ಗಗನ, ಛಾಯಾಗ್ರಾಹಕ ಸಂದೀಪ್ ವೆಲೂರಿ ಮಾತನಾಡಿದರು.
ನಿರ್ಮಾಪಕಿ ಪರೂಲ್ ಅಗರ್ ವಾಲ್ ಚಿತ್ರದ ಆಶಯಗಳನ್ನು ವಿವರಿಸಿದರೆ, ನಿರ್ದೇಶಕ ವೆಂಕಟೇಶ್ ಪ್ರಸಾದ್ ಚಿತ್ರದ ಹೆಸರು ಮತ್ತು ಅದು ಹಾಗೆ ಇರುವುದರ ಹಿಂದಿನ ಬದ್ಧತೆಗಳ ಬಗ್ಗೆ ವಿವರಿಸಿದರು.
ಅಕ್ಷಿತ್ ಶಶಿಕುಮಾರ್ ಪ್ರತಿಯೊಬ್ಬರ ಸಹಕಾರ ನೆನೆಯುತ್ತಾ ಇದು ನನ್ನ ಎರಡನೇ ಚಿತ್ರ. ದಯವಿಟ್ಟು ಪ್ರೋತ್ಸಾಹಿಸಿ ಎಂದರು. ಅಪ್ಪನ ನೆರಳಿನಲ್ಲಿ ಅರಳಿದರೂ ಬೇರೆ ಆಶ್ರಯ ಬೇಕಾಗುತ್ತದೆ. ಈ ವಿಷಯದಲ್ಲಿ ಸ್ನೇಹಿತರು ಅತ್ಯಂತ ಸಹಕಾರ ನೀಡುತ್ತಿದ್ದಾರೆ ಎಂದರು.
ಅಂದ ಹಾಗೆ ‘ಖೆಯೊಸ್’ ಇದೇ ವಾರ ಅಂದರೆ ಫೆಬ್ರವರಿ 17 ರಂದು ತೆರೆ ಕಾಣುತ್ತಿದೆ.