ಚೆಡ್ಡಿ ದೋಸ್ತ್ ಕಡ್ಡಿ ಅಲ್ಲಾಸ್ಬುಟ್ಟ ಚಿತ್ರತಂಡದ ಸದಸ್ಯರು ಮತ್ತೆ ಒಂದಾಗಿ ನಿರ್ಮಿಸುತ್ತಿರುವ ಚಿತ್ರದ ಹೆಸರು ‘ಅಥಿ’.
ಅಂದ ಹಾಗೆ ಚೆಡ್ಡಿ ದೋಸ್ತ್ ನಿರ್ಮಾಪಕ ಸೆವೆನ್ ರಾಜ್ ನಿರ್ಮಾಣ ಹಾಗೂ ಆ ಚಿತ್ರದಲ್ಲಿ ಚಿತ್ರಕಥೆ ಸಂಭಾಷಣೆ ಬರೆದು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಲೋಕೇಂದ್ರ ಸೂರ್ಯ ಈ ಚಿತ್ರದಲ್ಲಿಯೂ ಮುಖ್ಯ ಪಾತ್ರದಲ್ಲಿ ನಟಿಸಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಲೋಕೇಂದ್ರ ಸೂರ್ಯ ಜೊತೆಗೆ ಶ್ರಾವ್ಯ ನಟಿಸುತ್ತಿದ್ದು, ಈ ಜೋಡಿ ಹೆಚ್ಚು ಕಾಲ ಚಿತ್ರವನ್ನು ಆವರಿಸಿಕೊಳ್ಳುವ ಕಥಾ ಹಂದರವನ್ನು ಹೊಂದಿದೆ. ಏಕೆಂದರೆ ಇದು ಗಂಡ ಮನೆಯಿಂದ ಹೊರಗೆ ಹೋದ ನಂತರ ನಡೆಯುವ ಕಥೆ. ಆದರೆ ಅದು ಏನು ಎಂಬುದು ನಿಗೂಢ.
ಮನೆ ಮಂದಿ ಕುಳಿತು ನೋಡಬಹುದಾದ ಚಿತ್ರ. ಹಾಗಾಗಿ ಬೇರೆ ಕೆಟ್ಟದ್ದನ್ನು ನಿರೀಕ್ಷಿಸುವಂತಿಲ್ಲ ಎಂಬುದು ನಿರ್ದೇಶಕರ ಆತ್ಮವಿಶ್ವಾಸದ ಮಾತು. ಕಥೆಯ ಒಂದು ಎಳೆಗೇ ಮನಸೋತು ಸೆವೆನ್ ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಟನೆ, ನಿರ್ದೇಶನದ ಜೊತೆಗೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡುತ್ತಿರುವ ಲೋಕೇಂದ್ರ ಸೂರ್ಯ ಅವರದು ಬಹುಮುಖ ಪ್ರತಿಭೆ.
‘ಅಥಿ ಐ ಲವ್ ಯೂʼ ಎಂಬ ಚಿತ್ರವು ಫೆಬ್ರವರಿ 7ರಂದು ರಾಜಾಜಿನಗರದ ವೀರಾಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಸರಳ ಪೂಜಾ ಕಾರ್ಯದೊಂದಿಗೆ ಮುಹೂರ್ತ ಮಾಡಿಕೊಂಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಭಾ ಮ ಗಿರೀಶ್ ಈ ಸಂದರ್ಭದಲ್ಲಿ ಪಾಲ್ಗೊಂಡು ಚಿತ್ರಕ್ಕೆ ಶುಭ ಹಾರೈಸಿದರು. ನಿರ್ಮಾಪಕ ರೆಡ್ & ವೈಟ್ ಸೆವೆನ್ ರಾಜ್ ಹಾಗೂ ಇತರ ಗಣ್ಯರು ಇದ್ದರು.
ಯುಡಿವಿ ವೆಂಕಿ ಸಂಕಲನ, ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ.
ಬೆಂಗಳೂರಿನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆ.