ಇಲ್ಲಿ ಖಳನದೇ.. ಹವಾ.. ಆತ ದರೋಡೆಕೋರ.. ಹಳ್ಳಿಯೊಂದನ್ನು ಸಹಚರರ ಜೊತೆ ದೋಚುವ ಹಾದಿನಲ್ಲಿ ನಡೆಯುವ ಘಟನೆಗಳಿಂದ ಆತ ಪರಿವರ್ತನೆ ಹೊಂದುತ್ತಾನೆ..
ಅದೇ ಮಾರಿಗುಡ್ಡದ ಗಡ್ಡಧಾರಿಗಳು ಕಥೆಯ ಸಾರಾಂಶ. ರಾಜೀವ್ ಚಂದ್ರಶೇಖರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಬಂಡವಾಳ ಹಾಕಿ ಮುಖ್ಯ ಪಾತ್ರದಲ್ಲಿ ನಟಿಸಿದವರು ಸಲಗ ಸೂರಿ.
ಆಪ್ತ ವಲಯದಲ್ಲಿ ಸೂರಿ ಅಣ್ಣ ಎಂದೇ ಕರೆಸಿಕೊಳ್ಳುವ ಸೂರಿ ಪಾತ್ರ ನೆಗೆಟಿವ್ ಶೇಡ್ ನಲ್ಲೇ ಮುಂದುವರಿಕೆಯಾಗಿದೆ. ದರೋಡೆ ಮಾಡುವ ಗುಂಪಿನ ನಾಯಕನಾಗಿ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿಕೊಂಡರು ಸಲಗ ಸೂರಿ.
ಈಚೆಗೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಅತ್ಯುತ್ಸಾಹದಿಂದ ಪಾಲ್ಗೊಂಡಿತ್ತು. ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಲವ್ಲಿಸ್ಟಾರ್ ಪ್ರೇಮ್, ಅಂಚೆಹಳ್ಳಿ ಶಿವಕುಮಾರ್ ಹಾಗೂ ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು.
ಚಿತ್ರೀಕರಣ ಸಂದರ್ಭದಲ್ಲಿ ಕಲ್ಲು ಕ್ವಾರಿಯ ಬಳಿ ಎದುರಾದ ಅಪಾಯಗಳನ್ನು ವಿವರಿಸಿದರು ಸಲಗ ಸೂರಿ. ಇದೊಂದು 80ರ ದಶಕದಲ್ಲಿ ನಡೆಯುವ ಕಾಲ್ಪನಿಕ ಕಥೆ. ಇಲ್ಲಿ ನೆಗೆಟಿವ್ ಪಾತ್ರದಲ್ಲಿರುವ ನಾಯಕ ನಟ ಕೊನೆಯದಾಗಿ ಒಳ್ಳೆಯತನಕ್ಕೆ ಮರಳುತ್ತಾನೆ ಎಂದು ವಿವರಿಸಿದರು ನಿರ್ದೇಶಕ ಆರ್.ಚಂದ್ರಶೇಖರ್.
ಈ ಚಿತ್ರ ಬಹಳವೇ ಕ್ಲಿಷ್ಟಕರ ಸನ್ನಿವೇಶಗಳನ್ನು ಒಳಗೊಂಡಿದೆ ಮತ್ತು ಅದನ್ನು ಚಿತ್ರೀಕರಣ ಮಾಡುವಾಗ ಅಪಾಯಗಳನ್ನು ಎದುರಿಸಿದೆ ಎಂಬ ವಿವರಗಳನ್ನು ನೀಡಿತು ಚಿತ್ರತಂಡ.
ಏಕೆಂದರೆ ಕ್ವಾರಿಗಳಲ್ಲಿ ಆಗುವ ಸ್ಫೋಟಗಳನ್ನು ನೈಜವಾಗಿ ಚಿತ್ರೀಕರಿಸಲಾಗಿದೆ. ಒಂದು ಹಾಡಿನಲ್ಲೇ ಇದರ ಶ್ರಮ ಎದ್ದು ಕಾಣುತ್ತದೆ ಎಂಬ ವಿವರವೂ ಬಂತು.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಕೆ.ಎಂ.ಇಂದ್ರ ಸಂಗೀತ ನೀಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತವಿದೆ. ಸತ್ಯ ಹಾಗೂ ಎಂ.ಬಿ.ಹಳ್ಳಿಕಟ್ಟಿ ಅವರ ಛಾಯಾಗ್ರಹಣವಿದೆ.
ಚಿತ್ರದಲ್ಲಿ ನಟಿಸಿರುವ ನಂಜುಂಡ, ಶಿವು, ಪ್ರವೀಣ್ ರಾಜ್, ನಮ್ರತಾ ಹೊಸಮನೆ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ರಮೇಶ್ ಭಟ್ ಅವಿನಾಶ್, ಗಣೇಶ್ ರಾವ್, ಪ್ರಶಾಂತ್ ಸಿದ್ಧಿ ಮೊದಲಾದ ಕಲಾವಿದರ ತಾರಾಬಳಗವಿರುವ ಚಿತ್ರ ಸದ್ಯದಲ್ಲೇ ಬಿಡುಗಡೆ ಕಾಣಲಿದೆ ಎಂಬ ವಿವರಗಳು ಬಂದವು.