ಚಿತ್ರದಲ್ಲಿ ಬಿಲ್ಡಪ್ ಸಹಿತ ದಕ್ಷಿಣ ಭಾರತದ ಸ್ಟಾರ್ ನಟರ ಪ್ರತಿಬಿಂಬ ಕಂಡರೆ ಅದು ಅಚ್ಚರಿ ಅಲ್ಲ.. ಏಕೆಂದರೆ ಚಿತ್ರದ ಹೆಸರೇ ‘ಸೌತ್ ಇಂಡಿಯನ್ ಹೀರೋ’.
ಹೌದು ಸಿನಿಮಾ ಬಿಡುಗಡೆಗೆ ಸಜ್ಜುಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿ ಚಿತ್ರದ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದೆ.
ಅಲ್ಲದೆ ಈ ಚಿತ್ರವನ್ನು ನೋಡಿದ ರಿಯಲ್ ಸ್ಟಾರ್ ಉಪೇಂದ್ರ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜವಾಗಿ ಚಿತ್ರ ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ. ಅದ್ಭುತ ಸಿನಿಮಾ ಎಂದು ಕೊಂಡಾಡಿದ್ದಾರೆ. ಜೊತೆಗೆ ಟ್ರೈಲರ್ ಬಿಡುಗಡೆಯಲ್ಲಿಯೂ ಪಾಲ್ಗೊಂಡು ಚಿತ್ರತಂಡವನ್ನು ಹುರಿದುಂಬಿಸಿದ್ದಾರೆ.
ನಿರ್ದೇಶಕ ಎಚ್.ಎನ್.ನರೇಶ್ ಕುಮಾರ್ ಈಗಾಗಲೇ ಮೂರು ಚಿತ್ರಗಳ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿ, ಈ ಚಿತ್ರದ ಮೂಲಕ ಗಟ್ಟಿಯಾಗಿ ನೆಲೆಯೂರಲು ಸಿದ್ಧತೆ ನಡೆಸಿದ್ದಾರೆ. ಅವರ ಪತ್ನಿ ಶಿಲ್ಪಾ ನರೇಶ್ ಈ ಚಿತ್ರದ ನಿರ್ಮಾಪಕರು.
ಶುಕ್ರವಾರ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಇಡೀ ಚಿತ್ರತಂಡ ಉಪೇಂದ್ರ ಅವರ ಸಾಧನೆ ಜೊತೆ ಜೊತೆಗೆ ತಮ್ಮ ಚಿತ್ರದ ಮಹತ್ವ ಹೇಳಿಕೊಂಡಿತು. ಅನೇಕ ಗೆಟ್ ಅಪ್ ಗಳಲ್ಲಿ ಕಾಣಿಸಿಕೊಂಡಿರುವ ಸಾರ್ಥಕ್ ಮುಂದೆ ದೊಡ್ಡ ನಟರಾಗಿ ಹೊಮ್ಮುವುದರಲ್ಲಿ ಅನುಮಾನವೇ ಇಲ್ಲ ಎಂಬ ಹೊಗಳಿಕೆ ಕೇಳಿಬಂತು.
ನಟಿ ಖಾಸಿಮಾ ರಫಿಗೆ ‘ಪ್ರಿಯಾಂಕ ಚೋಪ್ರಾ ಥರಾ ಕಾಣ್ತಿರಾ’ ಎಂದು ಉಪ್ಪಿ ಅವರು ನೀಡಿದ ಕಾಪ್ಲಿಮೆಂಟ್ ಶ್ರೀರಕ್ಷೆಯಾಗಲಿದೆ.
ಇದು ಪ್ರತಿ ಹೀರೋ ಪ್ರತಿಬಿಂಬವಾಗಲಿದೆ. ನಾನು ಉಪೇಂದ್ರ ಅವರಿಗೆ ಯಾವಾಗಲೂ ಚಿರ ಋಣಿಯಾಗಿರುವೆ ಎಂದರು ನಿರ್ದೇಶಕ ನರೇಶ್ ಕುಮಾರ್. ಇದು ಅತ್ಯುತ್ತಮ ಚಿತ್ರವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದವರು ಶಿಲ್ಪಾ ನರೇಶ್. ಮುಖ್ಯ ಪಾತ್ರದಲ್ಲಿರುವ ಸಾರ್ಥಕ್ ಹಾಗೂ ಖಾಸಿಮಾ ತಮ್ಮ ಅನುಭವಗಳನ್ನು ಹೇಳಿಕೊಂಡರು.
ಚಿತ್ರಕ್ಕೆ ಹರ್ಷವರ್ಧನ್ ಹಾಗೂ ಸಿ.ಜೆ.ಅನಿಲ್ ಸಂಗೀತ ನಿರ್ದೇಶಕರು. ರಾಜ್ ಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ.
ಚಿತ್ರವನ್ನು ಮಾರ್ಸ್ ಸುರೇಶ್ ವಿತರಣೆ ಮಾಡುತ್ತಿದ್ದು, ಹಿಂದೆ ಉಪೇಂದ್ರ ಅವರ ಚಿತ್ರ ಬೊಂಬಾಟ್ ಗಳಿಕೆ ಮಾಡಿಕೊಟ್ಟ ಸಂದರ್ಭಗಳನ್ನು ವಿವರಿಸಿದರು.
ಉಪೇಂದ್ರ ಅವರೂ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಲ್ಲದೆ; ನರೇಶ್ ಅನುಪಮ ಪ್ರತಿಭಾವಂತ ಎಂದು ಕೊಂಡಾಡಿದರು.
ಮ್ಯಾಜಿಕ್ ರಂಗ ಉಪೇಂದ್ರ ಅವರಿಗೇ ಮ್ಯಾಜಿಕ್ ಕರಾಮತ್ತುಗಳನ್ನು ತೋರಿದ್ದು ವಿಶೇಷವಾಗಿತ್ತು.
ಅಂದ ಹಾಗೆ ಇದೇ ತಿಂಗಳು ಅಂದರೆ ಫೆಬ್ರವರಿ 24ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ.