ಸ್ಟಾರ್ಟ್ ಅಪ್ ಸಮಸ್ಯೆಯೇ ರಂಜನೆ
ಯಾರೇ ಆದರೂ ಹೊಸ ಉದ್ಯಮ ಸ್ಥಾಪಿಸುವುದು ಸಾಮಾನ್ಯ ವಿಷಯವಲ್ಲ; ಅದಕ್ಕೆ ಅದಮ್ಯ ಸಂಕಲ್ಪ ಮತ್ತು ಎದೆಗಾರಿಕೆ ಬೇಕಾಗುತ್ತದೆ..
ಬೆಂಗಳೂರು ಐಟಿ ತವರು ಎಂಬ ಪರಿಕಲ್ಪನೆಯಲ್ಲಿ ಉಂಟಾಗಿರುವ ಬದಲಾವಣೆಯಲ್ಲಿ ಇರುವ ಉದ್ಯೋಗ ಬಿಟ್ಟು ಸ್ಟಾರ್ಟ್ ಅಪ್ ಕಲ್ಚರ್ ಗೆ ಸೇರುವ ಅದರ ಉದ್ಯೋಗಿಗಳಿಗೆ ಎದುರಾಗುವ ಸಂಕಷ್ಟಗಳೇ ಈ ಮೇಡ್ ಇನ್ ಬೆಂಗಳೂರು..
ಇರುವ ಚೆಂದದ ಕೆಲಸ ಬಿಟ್ಟು ಉದ್ಯಮ ಸ್ಥಾಪನೆಯ ಕನಸು ಹೊತ್ತ ಸುಹಾಸ್ ನ ಸಾಹಸ ಯಾತ್ರೆ, ಇಲ್ಲಿ ನೈಜವಾಗಿ ಅಭಿವ್ಯಕ್ತಗೊಂಡಿರುವುದು ವಿಶೇಷ.
ಉದ್ಯಮ ಸ್ಥಾಪಿಸಲು ಬೇಕಾಗುವ ಕನಿಷ್ಟ ಜ್ಞಾನ ಹೊಂದದ ಗೆಳೆಯರ ಗುಂಪು ಐ ಫೋನ್ ಮತ್ತು ಫೇಸ್ಬುಕ್ ಜನಕ, ಮೈಕ್ರೋಸಾಫ್ಟ್ ಕಂಪನಿಯ ಸಾಧಕನಂತೆ ಚಿಂತನೆ ನಡೆಸುವುದು ಮತ್ತು ಅದರ ಪೀಕಲಾಟಗಳು ಮನರಂಜನೆ ಉಣಬಡಿಸುತ್ತವೆ..
ಇದೇ ವೇಳೆಗೆ ಸಾಲ ಪಡೆಯುವ ದಾರಿಯ ಹೆಣಗಾಟಗಳು ನಿಜದ ತಲೆಯ ಮೇಲೆ ಹೊಡೆದಂತೆ ಮತ್ತು ಕೆಲಮೊಮ್ಮೆ ಹಾಸ್ಯಾಸ್ಪದವಾಗಿ ಕಾಣುತ್ತವೆ..
ಸುಹಾಸ್ ಹುಚ್ಚು ಪ್ರಯತ್ನಕ್ಕೆ ಗೆಳೆಯರ ಸಾಥ್ ಸಿಗುತ್ತದೆ ಎಂಬುದು ನಿಜವಾದರೂ ಹೊಸದಾಗಿ ಸೇರ್ಪಡೆಗೊಂಡವರಿಂದ ಆತ ಮೋಸ ಹೋಗುತ್ತಾನೆ. ಕೊನೆಗೆ ಪಾತಾಳ ತಲುಪಿದ ಸಾಹಸಿ ಎಂತಹ ಹೀನ ಸಾಹಸಕ್ಕೂ ಮುಂದಾಗಿ ಬಿಡುತ್ತಾನೆ ಎಂಬಷ್ಟರಲ್ಲಿ ಅದೂ ಸುಖಾಂತ್ಯ ಕಾಣುತ್ತದೆ.
ಐಟಿ ಉದ್ಯಮಕ್ಕಿಂತಲೂ ಇಡ್ಲಿ ತಯಾರಿಸಿ ಪೂರೈಸುವು ದೊಡ್ಡ ವಿಷಯವಾಗಿ ಚಿತ್ರ ಮುಗಿಯುತ್ತದೆ..
ಆದರೆ ಉದ್ಯಮ ಆರಂಭಿಸುವ ಮುನ್ನ ಎಚ್ಚರ.. ಅರೆ ಜ್ಞಾನದಲ್ಲಿ ದುಡುಕಬೇಡಿ ಎಂಬ ಸಂದೇಶ ಯುವ ಸಮೂಹಕ್ಕೆ ದೊರೆಯುತ್ತದೆ.
ನಿರ್ದೇಶಕ ಪ್ರದೀಕ್ ಕೆ. ಶಾಸ್ತ್ರಿ ಇನ್ನೂ ಒಂದಷ್ಟು ಕತ್ತರಿ ಪ್ರಯೋಗಿಸಿ ಒಂದಷ್ಟು ಸನ್ನಿವೇಶಗಳು ಇಲ್ಲದಂತೆ ಮಾಡಿದ್ದರೆ ಚಿತ್ರವು ಇನ್ನಷ್ಟು ಸಹ್ಯವಾಗಿತ್ತಿತ್ತು ಎಂದು ಕೊನೆಗೆ ಅನಿಸಲು ಕಾರಣ ಅದರ ದೀರ್ಘ ಸಮಯ.
ಮುಖ್ಯ ಪಾತ್ರದಲ್ಲಿರುವ ಮಧುಸೂಧನ್ ಹಾಗೂ ಪುನೀತ್ ಮಾಂಜ, ವಂಶಿ, ಹಿಮಾಂಶಿ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅದೇ ರೀತಿ ಸಾಯಿಕುಮಾರ್, ಅನಂತ್ ನಾಗ್, ರಮೇಶ್ ಭಟ್ ಹಾಗೂ ಪ್ರಕಾಶ್ ಬೆಳವಾಡಿ ಅವರದು ಮಾಗಿದ ನಟನೆ. ಹಾಗೆಯೇ ಅಶ್ವಿನ್ ಪಿ.ಕುಮಾರ್ ಸಂಗೀತ ಚಿತ್ರಕ್ಕೆ ಪೂರಕ.
ಹೊಸಬರ ಈ ಪ್ರಯೋಗದಲ್ಲಿ ಒಂದು ಅತ್ಯುತ್ತಮ ಸಂದೇಶ ಹೇಳುವ ಚಿತ್ರವಾಗಿ ‘ಮೇಡ್ ಇನ್ ಬೆಂಗಳೂರು’ ಗಮನ ಸೆಳೆಯುತ್ತದೆ.