ಮಾಸ್ತಿಗುಡಿ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ ನಟ ಉದಯ್ ಅವರ ಕೊನೆಯ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ..
ಅದೇ ಅಂತರಂಗ..!
ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಲಕ್ಷ್ಮಿ ನಾರಾಯಣ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅವರೇ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಉದಯ್ ಅವರನ್ನು ಕಳೆದು ಕೊಂಡ ದುರ್ಘಟನೆ, ಕೊರೊನಾ ಮತ್ತಿತರ ಕಾರಣಗಳಿಂದ ಚಿತ್ರ ಬಿಡುಗಡೆ ಕಾಣುವುದು ತಡವಾಗಿದ್ದು, ಮುಂದಿನ ತಿಂಗಳು ಬಿಡುಗಡೆ ಮಾಡಲು ಪ್ರಯತ್ನ ನಡೆಸಲಾಗಿದೆ ಎಂದರು ಲಕ್ಷ್ಮಿ ನಾರಾಯಣ್.
ಅದು ಚಿತ್ರದ ಹಾಡು ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ. ಕಲಾ ಸಾಮ್ರಾಟ್ ಎಸ್.ನಾರಾಯಣ್, ನಟಿ ರೂಪಿಕಾ ಹಾಗೂ ಕೀರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಿನಿಮಾ ನಿರ್ಮಾಣ ಕಷ್ಟದ ಕೆಲಸವೇ ಆದರೂ ಶಿಸ್ತು ಮತ್ತು ಶ್ರದ್ಧೆಯಿಂದ ಮಹತ್ವದ ಸಾಧನೆ ಮಾಡಬಹುದು ಎಂಬುದನ್ನು ಎಸ್.ನಾರಾಯಣ್ ವಿವರಿಸಿದರು.
ಒಂದು ಕಾಲದಲ್ಲಿ ನಾಯಕ ನಟ ಹೀಗೆ ಇರಬೇಕು ಎಂಬ ಸಿದ್ಧ ಸೂತ್ರದ ಚೌಕಟ್ಟನ್ನು ಹೊಡೆದು ಹಾಕಿದವನು ನಾನು. ‘ಚೈತ್ರದ ಪ್ರೇಮಾಂಜಲಿ’ ಚಿತ್ರಕ್ಕೆ ಅಣುಕಿಸಿದವರಿಗೆ ಲೆಕ್ಕವೇ ಇಲ್ಲ.. ಆದರೆ ಆ ಚಿತ್ರ ಮಾಡಿದ ದಾಖಲೆ ಮಾತ್ರ ಮರೆಯಲಾಗದ ಸತ್ಯ ಎಂದು ವಿವರಿಸಿದರು ನಾರಾಯಣ್.
ಶೂಟಿಂಗ್ ನಲ್ಲಿ ಶಿಸ್ತು ಪಾಲನೆ ಮಾಡುತ್ತಿದ್ದಾಗ, ರಜನಿಕಾಂತ್ ಅವರಂತಹ ಸೂಪರ್ ಸ್ಟಾರ್ ಎದುರಾಗಿದ್ದ ಸಂದರ್ಭಗಳನ್ನು ಎಸ್.ನಾರಾಯಣ್ ವಿವರಿಸಿದರು.
ಈ ಚಿತ್ರತಂಡ ಕೂಡ ಬಹಳಷ್ಟು ಶ್ರಮ ಪಟ್ಟಿರುವುದು ಕಾಣುತ್ತದೆ.. ಚಿತ್ರ ತಂಡಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ನಟಿ ರೂಪಿಕಾ ಮಾತನಾಡುವಾಗ ಗುರುಗಳಾದ ಎಸ್.ನಾರಾಯಣ್ ಅವರನ್ನು ಹೊಗಳಿದರು. ಇಂತಹ ಗುರುವನ್ನು ಪಡೆದ ನಾನು ಧನ್ಯ ಎಂದರು.
ವಿಜಯ್ ಸೂರ್ಯ ಚಿತ್ರದ ನಿರ್ದೇಶಕ. ಅಂತರಂಗ ಎಂಬುದು ಇಲ್ಲಿ ಮನವರಿಕೆ ಆಗುವುದು. ಮುಖ್ಯ ಪಾತ್ರಧಾರಿಗೆ ದ್ವಿಮುಖ ಗುಣವಿರುತ್ತದೆ ಎಂಬುದನ್ನು ತೋರಿಸಲಾಗಿದೆ ಎಂದರು.
ಉದಯ್ ಅವರು ಮರೆಯಾದರು ಎಂಬುದು ನಮಗೆ ಹೊಡೆತ ಕೊಟ್ಟಿತು. ಅವರ ಧ್ವನಿಗೆ ಬೇರೆಯವರ ಕಡೆಯಿಂದ ಡಬ್ಬಿಂಗ್ ಮಾಡಿಸಲಾಗಿದೆ. ಇತ್ತೀಚೆಗೆ ಅಗಲಿದ ಮೋಹನ್ ಜುನೇಜಾ ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ ಎಂಬ ವಿವರ ನೀಡಿದರು ನಿರ್ದೇಶಕ ವಿಜಯ್ ಸೂರ್ಯ.
ಶ್ರೇಯಾ ಪಾವನಾ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದು, ನನ್ನದು ಬರಹಗಾರನ ಹೆಂಡತಿ ಪಾತ್ರ ಎಂಬ ವಿವರ ಬಂತು.
ತೂತು ಮಡಿಕೆ ಚಿತ್ರದ ನಿರ್ದೇಶಕ ಮತ್ತು ನಟ ಕೀರ್ತಿ, ಛಾಯಾಗ್ರಾಹಕ
ಹರೀಶ್, ಪ್ರಚಾರಕರ್ತ ಬಾಬು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಕೋರಿದರು.