Snehapriya.com

June 8, 2025

ಕನ್ನಡ ಸಿನಿಮಾ ಸುಮ್ಮನೆ ಅಲ್ಲ ನೈಜ ಚಿತ್ರಗಳಿಗೆ ಇದು ಕಾಲ..

Social Share :

ಕಾಲ ಬದಲಾದಂತೆ ತಾಂತ್ರಿಕತೆ ಮತ್ತು ಪರಿಕರಗಳು ಬದಲಾಗುತ್ತವೆ..
ಇದೇ ವೇಳೆಗೆ ಜನರ ಮನಸ್ಥಿತಿ ಕೂಡ ಬದಲಾಗಿ ಹೋಗುತ್ತದೆ..

ಭಾರತೀಯ ಸಿನಿಮಾ ಸಂದರ್ಭದಲ್ಲಿ ಇಂತಹ ಸಿನಿಮಾ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದು ಗೆಲ್ಲಿಸಿದ ಉದಾಹರಣೆ ಇಲ್ಲ; ಗೆಲುವಿಗೆ ಅದೊಂದು ಪವಾಡ ಅದೃಷ್ಟ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ..

ಆದರೆ ಪ್ರಯತ್ನಗಳು ಖಂಡಿತಾ ನಿಲ್ಲುವುದಿಲ್ಲ.. ಏಕೆಂದರೆ ಪ್ರತಿಯೊಬ್ಬರಲ್ಲೂ ಕನಸುಗಳು ನಿರಂತರ..

ಐವತ್ತು ದಿನಗಳನ್ನು ಪೂರೈಸಿದರೂ ‘ಕಾಂತಾರ’ ಗೆಲುವಿನ ಓಟ ನಿಂತಿಲ್ಲ; ಇತ್ತ ವಾರಕ್ಕೆ ಏಳರಿಂದು ಹತ್ತು ಸಿನಿಮಾ ಬಿಡುಗಡೆ ಕಂಡರೂ ಉತ್ತಮ ಪ್ರತಿಕ್ರಿಯೆ ವಿರಳ..

ಏಕೆ ಹೀಗೆ..

ಸಿನಿಮಾ ಪಂಡಿತರು ಬಹಳಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸಿನಿಮಾ ಮೂಲ ಸ್ಥಳ ಗಾಂಧಿನಗರ. ಅಲ್ಲಿನ ಚಟುವಟಿಕೆ ಸಿನಿಮಾಮಯವಾಗಿರುತ್ತಿದ್ದವು. ಆದರೆ ಈಗ ಎಲ್ಲಿ ಸಿನಿಮಾ ಚಟುವಟಿಕೆ ನಡೆಯುತ್ತದೆ ಎಂಬುದು ನಿಗೂಢ ಮತ್ತು ಆಸಕ್ತಿ ಇರುವ ಪ್ರತಿಯೊಬ್ಬರ ತುಡಿತ ಒಂದು ಸಿನಿಮಾ ಮಾಡಬೇಕು ಎಂಬ ಇಂಗಿತ ಈಗ ಶಾಶ್ವತ..

ಹಾಗಾಗಿ ಸಿನಿಮಾ ನಿರ್ಮಾಣ ಈಗ ಕೈಗೆಟುಕುವ ಕನ್ನಡಿಯೊಳಗಿನ ಗಂಟು..
ಹಾಗಾಗಿ ಹೆಚ್ಚು ಹೆಚ್ಚು ಪ್ರಯತ್ನಗಳು ನಡೆಯುತ್ತವೆ ಮತ್ತು ಹೆಚ್ಚು ಹೆಚ್ಚು ಚಿತ್ರಗಳು ಬಿಡುಗಡೆ ಕಾಣುತ್ತವೆ..

ಆದರೆ ಗೆಲುವಿನ ಭರವಸೆ..!

ಅದೇ ಈಗ ಹುಡುಕಾಟದಲ್ಲಿದೆ. ಕಾಂತಾರ ಸಿನಿಮಾ ಹೇಗೆ ಗೆಲುವು ಸಾಧಿಸಿತು ಎಂಬುದನ್ನು ಒರೆಗೆ ಹಚ್ಚುವ ಪ್ರಯತ್ನಕ್ಕಿಂತ ಆ ಸಿನಿಮಾ ವನ್ನು ದೈವ ಗೆಲ್ಲಿಸಿತು ಎಂಬ ಮಾತುಗಳೇ ಸಿನಿಮಾ ವಲಯದಲ್ಲಿ ಸಮಾಧಾನಕರ ಎನ್ನುವಂತಾಗಿದೆ. ನಿಜವಾಗಿ ಕಾಂತಾರ ಏಕೆ ಗೆಲುವು ಸಾಧಿಸಿತು ಎಂಬ ವಿಶ್ಲೇಷಣೆ ನಡೆದಿದ್ದೆ ಕಡಿಮೆ..

‘ಸಿನಿಮಾ ಒಂದು ಕನಸು’ ಹಿರಿಯರು ಯಾವಾಗಲೋ ಹೇಳಿರುವ ಮಾತು.. ಕನಸುಗಳ ಸೃಷ್ಟಿ ಕೆಲವೊಮ್ಮೆ ಅತಿ ಎನಿಸುವಷ್ಟು ರೋಚಕ. ನೂರು ಜನರನ್ನು ಒಬ್ಬನೇ ಕುಟ್ಟಿ ಕೆಡವುವುದನ್ನು ಎಷ್ಟು ದಿನಾಂತಾ ನೋಡುವುದು..

ಅದಕ್ಕೆ ಈಗ ಪ್ರೇಕ್ಷಕ ನೈಜತೆಯನ್ನು ಬಯಸಿದ್ದಾನೆ. ಸುತ್ತಲೂ ನಡೆಯುವ ಥ್ರಿಲ್ಲಿಂಗ್ ವಿಷಯಗಳು ಕಥೆಯಾದರೆ ಅದರ ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾನೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ, ಬಿಲ್ಡಪ್ ಸಿನಿಮಾಗಳಿಗಿಂತ ನೈಜವೆನಿಸುವ ಸಿನಿಮಾಗಳು ದಾಖಲೆ ಮಾಡಿವೆ..

ಕಾಂತಾರ ಗೆಲುವು ಕೂಡ ಅದೇ.. ಜೊತೆಗೆ ಒಂದು ಸಿನಿಮಾ ಅಥವಾ ಕಾದಂಬರಿ ನಿರೂಪಣೆಯಲ್ಲಿ ಹಿಡಿತ ಸಾಧಿಸಿದರೆ ಅದು ಓದುಗ ಅಥವಾ ಪ್ರೇಕ್ಷಕನಿಗೆ ರುಚಿಸುತ್ತದೆ..

ಮಲಯಾಳಂನಲ್ಲಿ ನೈಜತೆಗೆ ಒತ್ತು ಕೊಡುವ ಯುಗ 20 ವರ್ಷಗಳ ಹಿಂದೆಯೇ ಆಗಿತ್ತು. ಆ ಚಿತ್ರಗಳ ಸೊಗಸು ಗಲ್ಫ್ ರಾಷ್ಟ್ರಗಳಲ್ಲಿ ಮಾರುಕಟ್ಟೆ ಬಾಗಿಲು ತೆರೆಯಲು ನೆರವಾಗಿತ್ತು.

ಡಬ್ಬಿಂಗ್ ಕಾರಣದಿಂದ ಮಾರುಕಟ್ಟೆ ವಿಸ್ತಾರದ ಕನಸು ಕನ್ನಡದಲ್ಲಿ ಸಾಧ್ಯವಾಗಿರಲಿಲ್ಲ; ಒಂದೊಮ್ಮೆ ಡಬ್ಬಿಂಗ್ ಗೆ ಅವಕಾಶ ಯಾವ ಗಳಿಗೆಯಲ್ಲಿ ಸಿಕ್ಕಿತೋ ಮಾರುಕಟ್ಟೆ ವಿಸ್ತಾರವಾಯಿತು. ಆಗಲೇ ‘ಕೆಜಿಎಫ್’ ನಂತಹ ಚಿತ್ರ ಮಾರುಕಟ್ಟೆ ಸೀಮೋಲ್ಲಂಘನ‌ ಮಾಡುವುದು ಸಾಧ್ಯವಾಯಿತು..

ಸುಮಾರು 90 ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗದ ಸಾಧನೆ ಯಾವತ್ತೋ ವಿಶ್ವ ತಲುಪಿ ಆಗಿತ್ತು. ಆದರೆ ಮಾರುಕಟ್ಟೆ ವಿಸ್ತಾರ ಮಾಡುವ ವಿಷಯದಲ್ಲಿ ಹೆಚ್ಚಿನ ಗಮನ ಹರಿಸಿರಲಿಲ್ಲ ಅಷ್ಟೇ..

ಇನ್ನೂ ವಿಸ್ತಾರವಾಗಿ ಹೇಳಬಹುದಾದರೆ, 80 ರ ದಶಕದಲ್ಲಿ ಬಿಡುಗಡೆ ಕಂಡ ವರನಟ ಡಾ.ರಾಜ್ ಕುಮಾರ್ ಅವರ ‘ಶಂಕರ್ ಗುರು’ ಚಿತ್ರ ಬಿಡುಗಡೆಯಾದಾಗ ಅದನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು. ಅದನ್ನು ಹೆಚ್ಚು ಹೆಚ್ಚು ನೋಡುವುದೇ ಘನತೆಯ ವಿಷಯವಾಗಿತ್ತು.

ಆಗ ಮಾರುಕಟ್ಟೆ ವಿಸ್ತಾರ ಎನ್ನುವುದಿದ್ದರೆ ಅದರ ದಾಖಲೆ ಇಂದಿಗೂ ಮುರಿಯುವುದು ಅಸಾಧ್ಯವಾಗಿರುತ್ತಿತ್ತೋ ಏನೋ..
ಆದರೆ ಆ ಚಿತ್ರ ನೋಡಿದ ಅತಿರಥ ಮಹಾರಥರೂ ಬೆಚ್ಚಿ ಬಿದ್ದಿದ್ದರು..

‘ಶಂಕರ್ ಗುರು’ ಹಿಂದಿಯಲ್ಲಿ ‘ಮಹಾನ್’ ಆಯಿತು.. ಸ್ವತಃ ಅಮಿತಾಬ್ ಬಚ್ಚನ್ ಡಾ.ರಾಜ್ ನಿರ್ವಹಿಸಿದ್ದ ತ್ರಿಪಾತ್ರ ಮಾಡಿದ್ದರು. ತಮಿಳಿನಲ್ಲಿ ಶಿವಾಜಿ ಗಣೇಶನ್ ಮಾಡಿದ್ದರು. ಅಷ್ಟು ಆಕರ್ಷಣೆ ಆ ಚಿತ್ರಕ್ಕಿತ್ತು.

ವರನಟ ಡಾ.ರಾಜ್ ಕುಮಾರ್ ಅವರ ಮತ್ತೊಂದು ಚಿತ್ರ ತೆಲುಗು, ತಮಿಳಿನಲ್ಲಿ ವಿಜೃಭಿಸಿತು. ಅದು ‘ಅನುರಾಗ ಅರಳಿತು’. ತೆಲುಗಿನಲ್ಲಿ ‘ಘರಾನಾ ಮೊಗಡು’ ಆಗಿ ಜಿರಂಜೀವಿ ಅವರಿಗೆ ಮತ್ತು ತಮಿಳಿನಲ್ಲಿ ‘ಮನ್ನನ್’
ಆಗಿ ರಜನೀಕಾಂತ್ ಅವರಿಗೆ ಹೊಸದಾದ ಇಮೇಜ್ ನೀಡಿದ ಚಿತ್ರಗಳವು..

ಕನ್ನಡದ ಸಿನಿಮಾ ಚರಿತ್ರೆ ಸಾಮಾನ್ಯವಲ್ಲ.. ಹಾಗಾಗಿ ಕೇವಲ ಒಂದು ಚಿತ್ರ ಕನ್ನಡ ಚಿತ್ರರಂಗವನ್ನು ಎಲ್ಲಿಗೋ ತೆಗೆದುಕೊಂಡು ಹೋಯಿತು ಎಂಬ ಈಗಿನ ಮಾತು ಸರಿಯೂ ಅಲ್ಲ..

ಕನ್ನಡ ಚಿತ್ರರಂಗ ಬೆಳೆದಿದೆ ಮತ್ತು ಬೆಳೆಯುತ್ತಿದೆ. ಈ ಮಾರ್ಗದಲ್ಲಿ ಕೆಲವು ಚಿತ್ರಗಳಿಗೆ ದಾಖಲೆ ನಿರ್ಮಿಸುವ ಅವಕಾಶ ಸಿಕ್ಕಿದೆ ಅಷ್ಟೇ..

ಸಿನಿಮಾ-ಗಾಸಿಪ್
Social Share :

1 thought on “ಕನ್ನಡ ಸಿನಿಮಾ ಸುಮ್ಮನೆ ಅಲ್ಲ ನೈಜ ಚಿತ್ರಗಳಿಗೆ ಇದು ಕಾಲ..”

  1. ಬಸವರಾಜು. ಬಿ

    ಅದ್ಭುತವಾದ ಚಿತ್ರ ಇತಿಹಾಸದ ಪುಟಗಳನ್ನು ದಾಖಲಿಸಿದ್ದಿರಿ ಸರ್
    ಅಭಿನಂದನೆಗಳು

Leave a Comment

Your email address will not be published. Required fields are marked *