Snehapriya.com

June 9, 2025

ಕೃಷ್ಣೇಗೌಡರ ನಾನು ಕುಸುಮಾ ಪನೋರಮಾದಲ್ಲಿ ಮಿಂಚಿದ್ದು..

Social Share :


ಕನ್ನಡದ ಸಿನಿಮಾವೊಂದು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವುದು ಹೊಸದೇನೂ ಅಲ್ಲ; ಆದರೆ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವಿಭಾಗದಲ್ಲಿ ಪ್ರದರ್ಶಿಸಲ್ಪಟ್ಟಿದ್ದು ವಿಶೇಷ ಮತ್ತು ಅಚ್ಚರಿ..

ಅದು ನಾನು ಕುಸುಮಾ..!

ಕನ್ನಡದ ಸೂಕ್ಷ್ಮ ಸಂವೇದಿ ಕಥೆಗಾರರೆಂದು ಹೆಸರಾಗಿರುವ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ರಂಗಭೂಮಿ ಹಾಗೂ ಸಿನಿಮಾ ನಂಟಿರುವ ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶನ‌ ಮಾಡಿರುವ ಚಿತ್ರವಿದು..

ಈ ಚಿತ್ರವು ಈಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ‘ಯುನೆಸ್ಕೋ ಗಾಂಧಿ ಪದಕ ಪ್ರಶಸ್ತಿ’ ವಿಭಾಗದಲ್ಲಿ ಪ್ರದರ್ಶನ ಗೊಂಡಿದ್ದು ವಿಶೇಷ ಮತ್ತು ಆ ಪ್ರತಿಷ್ಠಿತ ವಿಭಾಗದಲ್ಲಿ ಪ್ರದರ್ಶನಗೊಂಡ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ದಾಖಲಿಸಿದೆ.

ಹೌದು ಅಷ್ಟಕ್ಕೂ ‘ನಾನು ಕುಸುಮಾ’ದ ಹೆಗ್ಗಳಿಕೆ ಏನು ಎಂಬುದನ್ನು ಹುಡುಕುತ್ತಾ ಹೋದರೆ, ವಿಶೇಷತೆಗಳ ಗುಚ್ಛವೇ ಎದ್ದು ಕಾಣುತ್ತದೆ. ಬೆಸಗರಹಳ್ಳಿ ರಾಮಣ್ಣ ಅವರಂತಹ ಮೇರು ಕಥೆಗಾರರ ಕಥೆ ಎಂಬುದು ಒಂದು ಕಡೆಗಾದರೆ, ಅವರ ಕಥೆಯನ್ನು ಅತ್ಯಂತ ಸೂಕ್ಷ್ಮವಾಗಿ ನಿರೂಪಿಸಲಾಗಿದೆ..

ನಿರ್ದೇಶಕ ಕೃಷ್ಣೇಗೌಡ ಸ್ತ್ರೀ ಅಭಿವ್ಯಕ್ತಿ ಮತ್ತು ಸಂವೇದನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿರುವುದು ವಿಶೇಷ. ಹಾಗೆಯೇ ಸ್ತ್ರೀ ಮೂಲಭೂತ ಸಮಸ್ಯೆ ಮತ್ತು ಅದನ್ನು ಪ್ರಶ್ನೆ ಮಾಡುವ ರೀತಿ ವಿಭಿನ್ನ..

ಹಾಗಾಗಿ ‘ನಾನು ಕುಸುಮಾ’ ಪ್ರದರ್ಶನ ಮತ್ತು ಅದರ ಹೆಚ್ಚುಗಾರಿಕೆ ಗೋವಾ ಸಿನಿಮೋತ್ಸವದಲ್ಲಿ ಕನ್ನಡದ ಕೀರ್ತಿ ಪತಾಕೆ ಎತ್ತಿ ಹಿಡಿಯಿತು ಎಂದರೂ ತಪ್ಪಲ್ಲ.

ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರಿಯ ನಟ ದೊಡ್ಡಣ್ಣ, ಹಿರಿಯ ನ್ಯಾಯವಾದಿ ಎಂ.ವಿ.ರೇವಣ್ಣ ಸಿದ್ದಯ್ಯ, ರೇಖಾರಾಣಿ, ಕುಮಾರ್ ಶ್ರೀನಿವಾಸ್ ಹಾಗೂ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ ಅಶೋಕ್ ಕಶ್ಯಪ್ ಅವರು ಸಿನಿಮಾದ ಆಶಯಗಳನ್ನು ಕೊಂಡಾಡಿದರು.

‘ಅಶೋಕ್ ಕಶ್ಯಪ್ ಅವರ ಒತ್ತಾಯದ ಮೇರೆಗೆ ನಾವು ಏನೋ ಅಂದು ಕೊಂಡು ಸಿನಿಮಾ ಮಂದಿರಕ್ಕೆ ಹೋಗಿ ಕುಳಿತೆವು. ಆದರೆ ಹದಿನೈದು ನಿಮಿಷದ ಬಳಿಕ ಆ ಸಿನಿಮಾ ನಮ್ಮನ್ನು ಒಳಗೆಳೆದುಕೊಂಡ ರೀತಿ ನಮಗೇ ಅಚ್ಚರಿ ಉಂಟು ಮಾಡಿತು.. ನಾವು ಕೂಡ ಭಾವುಕರಾಗಿ ಹೊರ ಬಂದೆವು..’ ಎಂದು ಬೆಂಗಳೂರಿನಲ್ಲಿ ಗೆ ಮರಳಿದ ಬಳಿಕವೂ ಮೆಲುಕು ಹಾಕಿದವರು ದೊಡ್ಡಣ್ಣ ಹಾಗೂ ಎಂ.ವಿ.ರೇವಣ್ಣ ಸಿದ್ದಯ್ಯ..

ಚಿತ್ರದಲ್ಲಿ ಕೃಷ್ಣೇಗೌಡರು ನಿರ್ವಹಿಸಿರುವ ಪಾತ್ರವೂ ವಿಶೇಷವಾಗಿದೆ. ಇದು ಕನ್ನಡದ ಹೆಮ್ಮೆ ಎಂಬುದು ಕನ್ನಡದ ಬರಹಗಾರರೊಬ್ಬರ ಪ್ರತಿಕ್ರಿಯೆಯಾಗಿತ್ತು.

‘ನಾನು ಕುಸುಮಾ’ ಗೋವಾದಲ್ಲಿ ಮಾಡಿರುವ ಸಾಧನೆಗೆ ಸ್ಯಾಂಡಲ್ ವುಡ್ ಬೆರಗಾಗಿದೆ. ಪ್ಯಾರರೆಲ್ ಚಿತ್ರಗಳೆಂದರೆ ಏನು ಎಂದು ಕೇಳುತ್ತಿದ್ದವರು, ಈಗ ಆ ಚಿತ್ರವನ್ನು ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಂದು ಚಿತ್ರ ಕಮರ್ಷಿಯಲ್ ಆಗಿ‌ ಗೆದ್ದರೆ ಅದು ಕನ್ನಡದ ಹೆಮ್ಮೆ. ಅದೇ ರೀತಿ ಒಂದು ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರೆ ಅದೂ ಕನ್ನಡದ ಕೀರ್ತಿ ಪತಾಕೆಯನ್ನು ದಿಗಂತಕ್ಕೆ ಎತ್ತಿ ಹಿಡಿದಂತೆ..

ಈ ದಾರಿಯಲ್ಲಿ ಕೃಷ್ಣೇಗೌಡ ಹಾಗೂ ಅವರ ತಂಡ ಯಶಸ್ವಿಯಾಗಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *