ಅದೇನೋ ಗೊತ್ತಿಲ್ಲ.. ಮಕ್ಕಳ ವಿಷಯದಲ್ಲಿ ಅಪ್ಪ.. ಅಪ್ಪನ ವಿಷಯದಲ್ಲಿ ಮಕ್ಕಳು ಪರಸ್ಪರ ಭಾವುಕರಾಗುತ್ತಾರೆ..
ಬಹುಶಃ ಅಪ್ಪನ ವಿಷಯದಲ್ಲಿ ಮಾತು ಕೇಳಲಿಲ್ಲ.. ಎಂಬ ಭಾವದಲ್ಲಿ ಮಗ ಅಥವಾ ಮಗನ ಆಸಕ್ತಿಗೆ ನಾನು ಪೂರಕವಾಗಿ ಸ್ಪಂದಿಸಲಿಲ್ಲ.. ಎಂಬ ಅಪ್ಪನ ಆತ್ಮ ವಿಮರ್ಶೆಯಾ ಅಥವಾ ಮಗನ ಸಾಧನೆ ಕಂಡು ಹೆಮ್ಮೆಯೋ ಗೊತ್ತಿಲ್ಲ..
ಆ ಸಮಾರಂಭದಲ್ಲಿ ಅಪ್ಪ ಮಾತನಾಡುವಾಗ ಮಗ, ಮಗ ಮಾತನಾಡುವಾಗ ಅಪ್ಪ ಭಾವುಕರಾದರು.. ಕಣ್ಣೀರು ಒರೆಸಿಕೊಂಡರು..
ಅಂದ ಹಾಗೆ ಅದು ಝೈಹಿದ್ ಖಾನ್ ಮುಖ್ಯ ಪಾತ್ರದಲ್ಲಿರುವ ‘ಬನಾರಸ್’ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಕ್ರಮ. ಅಲ್ಲಿ ಅನೀಕ್ಷಿತವಾಗಿ ಆಗಮಿಸಿ ಮಗನ ಸಾಧನೆ ಕಂಡು ಕಣ್ಣೀರು ಹಾಕಿದವರು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್.
ಹುಬ್ಬಳ್ಳಿಯ ರೈಲ್ವೆ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ‘ಬನಾರಸ್’ ಅದ್ದೂರಿ ಪ್ರಚಾರ ಕಾರ್ಯಕ್ರಮದಲ್ಲಿ ಜಮೀರ್ ಹಾಗೂ ಅವರ ಪುತ್ರ ಝೈಹಿದ್ ಇಬ್ಬರೂ ಪರಸ್ಪರ ಭಾವುಕರಾಗಿದ್ದು ಕಂಡು ಬಂತು..
ನಿರ್ದೇಶಕ ಜಯತೀರ್ಥ, ನಿರ್ಮಾಪಕ ತಿಲಕ್ ಬಲ್ಲಾಳ್, ನಟಿ ಸೋನಾಲ್ ಸೇರಿದಂತೆ ಇಡೀ ಚಿತ್ರತಂಡ ಮತ್ತು ಅತಿಥಿಗಳಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮರಿ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಲವ್ಲಿಸ್ಟಾರ್ ಪ್ರೇಮ್ ಕಂಡು ಬಂದರು.
ಚಿತ್ರದ ಹೊಸ ಹಾಡು ಬಿಡುಗಡೆಗೊಂಡು ಅಭಿಮಾನಿಗಳು ಪುಳಕ ಭಾವಗಳನ್ನು ಅನುಭವಿಸಿದರು..
ಜಮೀರ್ ಅಹಮದ್ ಇಲ್ಲಿಯವರೆಗೂ ಮಗನ ಚಿತ್ರದ ಯಾವ ಕಾರ್ಯಕ್ರಮಗಳಿಗೂ ಬಂದಿರಲಿಲ್ಲ. ಆದರೆ ಹುಬ್ಬಳ್ಳಿಯ ಮೈದಾನದಲ್ಲಿ ಮಗನ ಸಾಧನೆ ಕಂಡು ಹೆಮ್ಮೆಯ ಭಾವಗಳನ್ನು ಹೊರ ಹಾಕಿದರು.
ಚಿತ್ರದ ಟ್ರೈಲರ್ ಹಾಡು ಎಲ್ಲಾ ನೋಡುವಾಗ ಇದು ನನ್ನ ಮಗನ ಎಂದು ಒಂದು ಯೋಚಿಸುವಂತೆ ಆತ ಸಾಧನೆ ಮಾಡಿದ್ದಾನೆ. ಅದು ನನಗೆ ಹೆಮ್ಮೆಯ ವಿಷಯವಾಗಿದೆ; ಆದರೆ ಆತ ಪಿಕ್ಚರ್ ಮಾಡುವುದು ನನಗೆ ಇಷ್ಟ ಇರಲಿಲ್ಲ ಎಂದರು.
ನನಗೆ ಎಲ್ಲವೂ ಅಪ್ಪನೇ.. ಅವರು ಚಿತ್ರರಂಗಕ್ಕೆ ಹೋಗುತ್ತೇನೆ ಎಂದಾಗ ಬೇಡ ಎಂದರು. ಈ ವಿಷಯದಲ್ಲಿ ನಾನು ಹಠ ಮಾಡಿ ಬಂದೇ ಎಂದರು ಝೈಹಿದ್ ಖಾನ್.