ಗಂಧದ ಗುಡಿ ಇವೆಂಟ್ @ ಅ.21
ಪವರ್ ಸ್ಟಾರ್ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರು ನಿಜ ಜೀವನದ ಸ್ಟಾರ್ ಆಗಿಯೇ ನಟಿಸಿರುವ ‘ಗಂಧದ ಗುಡಿ’ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
‘ಗಂಧದ ಗುಡಿ’ ಇದೇ ತಿಂಗಳು ಅಂದರೆ ಅಕ್ಟೋಬರ್ 28ರಂದು ಬಿಡುಗಡೆ ಕಾಣುತ್ತಿದ್ದು, ಅದಕ್ಕೆ ಮುಂಚೆ ಅಕ್ಟೋಬರ್ 21ರ ಶುಕ್ರವಾರ ಚಿತ್ರದ ಬಿಡುಗಡೆ ಪೂರ್ವ (ಪ್ರೀ ರಿಲೀಸ್ ಇವೆಂಟ್) ಸಮಾರಂಭ ನಡೆಯಲಿದ್ದು, ಅದಕ್ಕೆ ‘ಪುನೀತ ಪರ್ವ’ ಎಂದು ಹೆಸರಿಡಲಾಗಿದೆ.
ಈ ಪುನೀತ ಪರ್ವ ಕಾರ್ಯಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದ್ದು, ಇದರ ಜೊತೆಗೆ ಭಾರತೀಯ ಚಿತ್ರರಂಗದ ತಾರೆಯರಿಗೂ ಆಹ್ವಾನ ಕೊಡಲಾಗಿದೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಂಗಳವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅವರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.
ದಕ್ಷಿಣ ಭಾರತದ ತಾರೆಯರಾದ ರಜನಿಕಾಂತ್, ಚಿರಂಜೀವಿ, ಸೂರ್ಯ ಮೊದಲಾವರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಪ್ಪು ಅವರಿಗೆ ಆತ್ಮೀಯರಾದ ತಮಿಳು ಹಾಗೂ ತೆಲುಗು ಚಿತ್ರರಂಗದ ತಾರೆಯರು ಭಾಗವಹಿಸುವುದು ನಿಶ್ಚಿತವಾಗಿದೆ.
ಕಳೆದ ವಾರ ಅಪ್ಪು ‘ಗಂಧದ ಗುಡಿ’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ನಿಸರ್ಗದ ನಿಗೂಢಗಳನ್ನು ಶೋಧಿಸುತ್ತ ಹೋಗುವ ದಾರಿಯಲ್ಲಿ ಅಪರಿಮಿತ ಸಾಹಸ ಮಾಡಿರುವುದು ಎದ್ದು ಕಾಣುತ್ತದೆ.
ಪುನೀತ್ ರಾಜ್ಕುಮಾರ್ ಅರಣ್ಯದ ಪ್ರಾಣಿ ಪಕ್ಷಿಗಳ ಜೊತೆ ಬೆರೆತ್ತಿದ್ದಾರೆ. ನೀರಿನಲ್ಲಿ ಈಜುತ್ತಾ ಸಾಹಸ ಮಾಡಿದ್ದಾರೆ. ಕ್ಷಣ ಕ್ಷಣ ರೋಮಾಂಚನ ಮತ್ತು ಭಾವುಕತೆಯನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರುವ ಸಾಧ್ಯತೆಗಳನ್ನು ಚಿತ್ರದ ಟ್ರೈಲರ್ ಹೇಳುತ್ತದೆ.
ಅಪ್ಪು ಅವರು ಕಣ್ಮರೆಯಾಗಿ ಒಂದು ವರ್ಷ ಆಗುತ್ತಿರುವಾಗ ಅವರ ಪುಣ್ಯ ಸ್ಮರಣೆಯ ಒಂದು ದಿನ ಮುಂಚೆ ಅಂದರೆ ಅಕ್ಟೋಬರ್ 28ರಂದು ‘ಗಂಧದ ಗುಡಿ’ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.
ವನ್ಯಜೀವಿ ಛಾಯಾಗ್ರಾಹಕ ಅಮೋಘ ವರ್ಷ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಿಜ ಜೀವನದ ಅಪ್ಪುವಾಗಿ ಪುನೀತ್ ರಾಜ್ಕುಮಾರ್ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.