Snehapriya.com

June 9, 2025

ಅರ್ಜುನ ಸನ್ಯಾಸಿ ಚಿತ್ರವಿಮರ್ಶೆ

Social Share :

ನಿರ್ಮಾಣ : ಪೋಲಂಕಿ ಫ್ಯಾಷನ್ ಪಿಕ್ಚರ್ಸ್

ನಿರ್ಮಾಪಕರು : ಈಶ್ವರ್ ಪೊಲಂಕಿ

ಮೊದಲ ರಾತ್ರಿ ಸಮಸ್ಯೆಯ ಸುತ್ತ
ತಮಾಷೆ ಅನುಮಾನದ ಹುತ್ತ..

ಕೆಳ ಮಧ್ಯಮ ವರ್ಗದ ಬದುಕು ಕೆಲವೊಮ್ಮೆ ಸಮಸ್ಯೆಗಳ ಆಗರವಾಗಿರುತ್ತದೆ; ಮತ್ತು ಕೆಲವೊಮ್ಮೆ ಭಾವುಕತೆಯ ತೊಳಲಾಟವನ್ನು ಒಳಗೊಂಡಿರುತ್ತದೆ..

ಈ ಎರಡೂ ಅಂಶಗಳನ್ನು ಒಳಗೊಂಡಿರುವ ‘ಅರ್ಜುನ ಸನ್ಯಾಸಿ’ ಬಡ ಜನರ ಬವಣೆಯನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ.

ಹೆತ್ತವರ ಜೊತೆ ಒಂದೇ ಕೋಣೆ ಇರುವ ಮನೆಯಲ್ಲಿ ವಾಸಿಸುವ‌ ಆಟೋ ಚಾಲಕ ಅರ್ಜುನ್ ಮದುವೆ ಮಾಡಿಕೊಂಡ ಕ್ಷಣವೇ ಸಮಸ್ಯೆ ಉದ್ಭವಿಸುತ್ತದೆ. ಮದುವೆ ನಂತರದ ಮೊದಲ ರಾತ್ರಿ ಅನುಭವ ಪಡೆಯುವ ಆಶಯದಲ್ಲಿ ತಿಣುಕುವ ಅರ್ಜುನ್ ಗೆ ಅಪ್ಪ ಅಮ್ಮ ವರ ಮತ್ತು ಶಾಪ ಎರಡೂ ಆಗಿ ಪರಿಣಮಿಸುತ್ತಾರೆ.

ನವ ದಂಪತಿಗಳನ್ನು ಮನೆಯೊಳಗೆ ಬಿಟ್ಟು ಹೊರಗೆ ಮಲಗಲು ಹೋಗುವ ಅವರಿಗೆ ಮಳೆ ಕಾಟ ಕೊಡುತ್ತದೆ. ಇತ್ತ ಇನ್ನೂ ಒಲಿಯದೆ ಮುನಿಸು ತೋರುವ ನವವಧು ಕೂಡ ಅರ್ಜುನನಿಗೆ ಶಾಪವಾಗುತ್ತಾಳೆ..

ಇತ್ತ ಪತ್ನಿಯನ್ನು ಒಲಿಸಿಕೊಳ್ಳಲಾಗದೆ, ಅತ್ತ ಅಪ್ಪ ಅಮ್ಮನನ್ನು ಬಿಟ್ಟು ಮಲಗಲು ಆಗದೆ ಅರ್ಜುನ ಅನುಭವಿಸುವ ತೊಳಲಾಟ ನೋಡುಗರಿಗೆ ತಮಾಷೆಯಾಗಿ ಕಾಣುತ್ತದೆ. ಆಗ ನೆನಪಾಗುವುದು ದಿವಂಗತ ಕಾಶಿನಾಥ್ ಅವರು.

80-90ರ ದಶಕದಲ್ಲಿ ಲೈಂಗಿಕತೆ ಮತ್ತು ಸಂಕೋಚಗಳ ಸುತ್ತ ಚಿತ್ರಗಳನ್ನು ಮಾಡುತ್ತಾ ತಮಾಷೆಯ ಹೂರಣವನ್ನೇ ಕಟ್ಟಿ ಕೊಡುತ್ತಿದ್ದ ಕಾಶಿ ನಾಥ್ ಮಾದರಿಯಲ್ಲೇ ಅರ್ಜುನ ನಾಚುತ್ತಾನೆ, ಸಂಕೋಚ ಪಡುತ್ತಾನೆ. ಕೆಲವು ಸನ್ನಿವೇಶಗಳಲ್ಲಿ ಮನೋ ವೇದನೆ ಅನುಭವಿಸುತ್ತಾನೆ.

ಅಂತೂ ಸಿಂಗಲ್ ಬೆಡ್ ರೂಮ್ ಇರುವ ಮನೆ ಮಾಡುವ ತೀರ್ಮಾನ ಮಾಡುವ ಅರ್ಜುನನಿಗೆ ಗೆಳೆಯ ನೆರವಾಗುತ್ತಾನೆ. ಗೆಳೆಯ ಹಣ ಹೊಂದಿಸಿಕೊಡುವ ಮತ್ತು ಅಪ್ಪ ಅಮ್ಮ ಇವನ ಮೊದಲ ರಾತ್ರಿಗೆ ತ್ಯಾಗ ಮಾಡಿ ಮನೆ ಹೊರಗೆ ಮಳೆಯಲ್ಲಿ ನೆನೆಯುವ ದೃಶ್ಯಗಳು ಅತ್ಯಂತ ಭಾವುಕವಾಗಿವೆ.

ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈಶ್ವರ್ ಪೋಲಂಕಿ ನೈಜತೆಯನ್ನು ಮೊಗೆದುಕೊಡುವ ಪಾತ್ರಗಳನ್ನು ಸೃಷ್ಟಿಸಿಕೊಡುವಲ್ಲಿ ಯಶಸ್ವಿಯಾಗಿ ಭವಿಷ್ಯದಲ್ಲಿ ಉತ್ತಮ ಚಿತ್ರಗಳನ್ನು ನೀಡುವ ಭರವಸೆ ಹುಟ್ಟಿಸಿದ್ದಾರೆ.

ಆದರೆ ಕಥೆ ಹೇಳುವ ಸಲುವಾಗಿ ವೇಶ್ಯಾವಾಟಿಕೆ ಮನೆಯ ವಾತಾವರಣ ಸೃಷ್ಟಿ ಏಕೆ ಮತ್ತು ಅದು ಕನ್ನಡದ ನೇಟಿವಿಟಿಗೆ ಹೊಂದುತ್ತದೆಯೇ ಎಂಬುದು ಮಾತ್ರ ಪ್ರಶ್ನೆಯಾಗಿ ಕಾಡುತ್ತದೆ.

ಆಟೋ ಚಾಲಕ ಅರ್ಜುನನ ಪಾತ್ರದಲ್ಲಿ ಸಿ.ಸಿ.ರಾವ್ ಗಮನ ಸೆಳೆಯುವಂತೆ ನಟಿಸಿದ್ದು, ಅಪ್ಪ, ಅಮ್ಮನ ಪಾತ್ರದಲ್ಲಿ ನಾಗೇಂದ್ರ ಶಾ ಹಾಗೂ ಅಭಿನಯ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಸ್ನೇಹಿತನ ಪಾತ್ರ (ಕಾಮಿಡಿ ಕಿಲಾಡಿ ಸೂರಜ್) ಕೂಡ ಗಮನಾರ್ಹ.

ಸುಮಾರು 70ರ ದಶಕದಲ್ಲಿ ಪುಟ್ಟಣ ಕಣಗಾಲ್ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ‘ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ.. ಹುಸಿ ನಗೆಯ ಹೊರ ಸೂಸಿ ಬಂದ ಕಳ್ಳ ವೇಷ ಧರಿಸಿ..’ ಎಂಬ ಹಾಡು ನಿರ್ದೇಶಕರಿಗೆ ಆಪ್ತವಾಗಿ ಕಥೆ ಹುಟ್ಟಿರುವುದು ಅಚ್ಚರಿ.

ಆಟೋ ಚಾಲಕರ ನಿಜವಾದ ಬವಣೆಯನ್ನು ಅಭಿವ್ಯಕ್ತಿಸುವಲ್ಲಿ ಈ ಚಿತ್ರ ಖಂಡಿತವಾಗಿ ಯಶಸ್ವಿಯಾಗಿದೆ. ಇದು ಮನೆ ಮಂದಿ ಕುಳಿತು ನೋಡಬಹುದಾದ ಚಿತ್ರ.

🖋ಸ್ನೇಹಪ್ರಿಯ ನಾಗರಾಜ್

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *