ಕನ್ನಡಿಗರ ಜನಮಾನಸದ ಹೃದಯಗಳಲ್ಲಿ ದೇವರ ಸ್ಥಾನ ಪಡೆದಿರುವ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರು ಅದೇನು ಪವಾಡವೋ ಎಂಬಂತೆ ದೇವರ ಪಾತ್ರದಲ್ಲಿ ನಟಿಸಿದ್ದಾರೆ.
ಅದು ಲಕ್ಕಿಮ್ಯಾನ್..!
ಹೌದು ಸೆಪ್ಟೆಂಬರ್ 9ರಂದು ತೆರೆ ಕಾಣುತ್ತಿರುವ ‘ಲಕ್ಕಿಮ್ಯಾನ್’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಿಂತ ಅಚ್ಚರಿಯ ವಿಷಯವೆಂದರೆ ಭಾರತೀಯ ಚಿತ್ರರಂಗದಲ್ಲಿ ‘ಎಲುಬಿಲ್ಲದ ಅದ್ಭುತ..’ ಎಂದೇ ಕರೆಸಿಕೊಳ್ಳುವ ಪ್ರಭುದೇವ ಅವರೊಂದಿಗೆ ಅದ್ಭುತ ಹೆಜ್ಜೆಗಳನ್ನು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ಚಿತ್ರದ ಟ್ರೈಲರ್ ಮತ್ತು ಹಾಡುಗಳ ಬಿಡುಗಡೆ ಅದ್ದೂರಿ ಸಮಾರಂಭದಲ್ಲಿ ನೆರೆದ ಗಣ್ಯರನ್ನು ವಿಸ್ಮಯಗೊಳಿಸಿದ್ದು ಈ ಇಬ್ಬರು ಲೆಜೆಂಡ್ ಮಾಡಿದ ಅದ್ಭುತ ಡ್ಯಾನ್ಸ್.. ಮತ್ತು ವರನಟ ಡಾ.ರಾಜಕುಮಾರ್ ಅವರನ್ನು ಗುಣಗಾನ ಮಾಡುವ ಹಾಡು..
ರಾಘವೇಂದ್ರ ರಾಜ್ ಕುಮಾರ್, ಕಿಚ್ಚಸುದೀಪ್, ರಾಕ್ ಲೈನ್ ವೆಂಕಟೇಶ್, ಮೂಗೂರು ಸುಂದರಂ, ರಾಜ ಸುಂದರಂ, ಪ್ರಭುದೇವಾ, ಸಾಧು ಕೋಕಿಲ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿರುವುದು ಡಾರ್ಲಿಂಗ್ ಕೃಷ್ಣ. ಅವರ ಜೊತೆ ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ನಟಿಸಿದ್ದಾರೆ. ವಿಶೇಷವೆಂದರೆ ಅಭಿಮಾನಿಗಳ ದೇವರು ಪುನೀತ್ ರಾಜ್ ಕುಮಾರ್ ಅವರು ಚಿತ್ರದಲ್ಲಿ ಭಗವಾನ್ ವಿಷ್ಣು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿಜಕ್ಕೂ ಚಿತ್ರದ ಲಕ್ಕಿ ಅಂಶವೆಂದರೆ ಇದೇನೇ.. ಹಾಗಾಗಿ ಚಿತ್ರದ ನಟ ಡಾರ್ಲಿಂಗ್ ಕೃಷ್ಣ, ನಿರ್ಮಾಪಕ ಸುಂದರ ಕಾಮರಾಜ್, ನಿರ್ದೇಶಕ ನಾಗೇಂದ್ರ ಪ್ರಸಾದ್ ಎಲ್ಲರೂ ಇಲ್ಲಿ ‘ಲಕ್ಕಿಮ್ಯಾನ್’.
ಪುನೀತ್ ರಾಜ್ಕುಮಾರ್ ಹಾಗೂ ಪ್ರಭುದೇವಾ ಡ್ಯಾನ್ಸ್ ಇರುವ ಹಾಡನ್ನು ರಾಘವೇಂದ್ರ ರಾಜ್ ಕುಮಾರ್ ಬಿಡುಗಡೆ ಮಾಡಿದರು. ಚಿತ್ರದ ಹೆಸರು ಲಕ್ಕಿಮ್ಯಾನ್, ಅದೃಷ್ಟವಂತ. ಅಪ್ಪು ಬಹಳ ಕನಸು ಕಾಣುವ ಅಪರೂಪದ ವ್ಯಕ್ತಿ. ಈಗ ಅಪ್ಪು ಹೇಳಿಕೊಂಡಿದ್ದ ವಿಷಯಗಳು ನೆನಪಾಗುತ್ತಿವೆ ಎಂದರು ರಾಘಣ್ಣ.
ಅಪ್ಪಾಜಿ ಜೊತೆ ಅಭಿನಯಿಸಬೇಕು, ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕು, ಆ ಚಿತ್ರಕ್ಕೆ ಆರ್.ರೆಹಮಾನ್ ಅವರು ಮ್ಯೂಜಿಕ್ ಮಾಡಬೇಕು ಹಾಗೂ ಪ್ರಭುದೇವಾ ಜೊತೆ ಡ್ಯಾನ್ಸ್ ಮಾಡಬೇಕು ಎಂದೆಲ್ಲಾ ಹೇಳುತ್ತಿದ್ದ ಅಪ್ಪು ಪ್ರಭುದೇವ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎಂಬುದನ್ನು ಈಡೇರಿಸಿಕೊಂಡಿದ್ದಾನೆ ಎಂದು ಹೇಳುತ್ತಾ ಭಾವುಕರಾದರು ರಾಘಣ್ಣ.
ಇಂತಹ ಸಂದರ್ಭಗಳು ಬರಬಾರದು; ಎಲ್ಲರೂ ಲಕ್ಕಿಮ್ಯಾನ್ ಮೂಲಕ ದೇವರನ್ನು ನೋಡಿಬಿಡಿ ಎಂದವರು ಕಿಚ್ಚ ಸುದೀಪ್.
ಹಿಂದೆ ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿದ್ದು ನನ್ನ ಪುಣ್ಯ ಎಂದು ಪುನೀತ್ ರಾಜ್ಕುಮಾರ್ ಹೇಳಿಕೊಂಡಿದ್ದರು. ಈಗ ಅವರ ಜೊತೆ ಡ್ಯಾನ್ಸ್ ಮಾಡಿರುವುದು ನನ್ನ ಪುಣ್ಯ ಎಂದರು ಪ್ರಭುದೇವ.
ಮೊದಲ ಚಿತ್ರವನ್ನು ಮಾತೃ ಭಾಷೆಯಲ್ಲೇ ನಿರ್ದೇಶನ ಮಾಡಿದ ಹೆಮ್ಮೆ ನನ್ನದು ಎಂದರು ನಿರ್ದೇಶಕ ನಾಗೇಂದ್ರ ಪ್ರಸಾದ್. ಈ ಚಿತ್ರ ನಿರ್ಮಾಣವಾಗಲು ಪುನೀತ್ ರಾಜ್ಕುಮಾರ್ ಅವರೇ ಕಾರಣ. ಅವರು ದೇವರ ಪಾತ್ರ ಮಾಡುವ ಒಪ್ಪಿಗೆ ಕೊಟ್ಟ ನಂತರವೇ ನಾನು ನಿರ್ದೇಶನ ಮಾಡುವುದು ಪಕ್ಕಾ ಆಗಿದ್ದು, ಸುಮಾರು 45 ನಿಮಿಷಗಳು ಅವರು ದೇವರ ರೂಪದಲ್ಲಿ ಇರುತ್ತಾರೆ. ಹಾಗಾಗಿ ನಾನು ನಿಜಕ್ಕೂ ಲಕ್ಕಿಮ್ಯಾನ್ ಎಂದು ಹೇಳಿಕೊಂಡರು ನಾಗೇಂದ್ರ ಪ್ರಸಾದ್.
ಈ ಚಿತ್ರದ ಟೈಟಲ್ ಲಕ್ಕಿಮ್ಯಾನ್.. ನಾವು ಅದೃಷ್ಟವಂತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಆದರೆ ಅದೇನು ದೈವೇಚ್ಚೆಯೋ ಇಲ್ಲಿ ಅಪ್ಪು ದೇವರಾಗಿ ಕಾಣಿಸಿಕೊಂಡಿದ್ದಾರೆ. ಅವರ ಬಗ್ಗೆ ಯಾವಾಗ ಮಾತನಾಡಲು ಹೊರಟರೂ ದುಃಖ ಉಮ್ಮಳಿಸಿ ಬರುತ್ತದೆ ಎಂದವರು ರಾಕ್ ಲೈನ್ ವೆಂಕಟೇಶ್.
ಅಪ್ಪು ಸರ್ ಜೊತೆ ಹುಡುಗರು, ಜಾಕಿಯಲ್ಲಿ ಮಾಡಿದ್ದೆ. ಈ ಚಿತ್ರದಲ್ಲಿ ಅವರಿದ್ದಾರೆ ಎಂಬುದೇ ನಮ್ಮ ಸುದೈವ. ನಾನು ನಟಿಸುವಾಗ ಭಯಪಟ್ಟಿದ್ದೆ. ಅಪ್ಪು ಸರ್ ಧೈರ್ಯ ತುಂಬಿದ್ದರು ಎಂದರು ಡಾರ್ಲಿಂಗ್ ಕೃಷ್ಣ.
ಸಾಧು ಕೋಕಿಲ ಅವರೂ ಸಹ ಪುನೀತ್ ರಾಜ್ಕುಮಾರ್ ಅವರ ಗುಣಗಾನ ಮಾಡಿದರು. ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ನಟಿಸುವಾಗಿನ ಅನುಭವ ಹೇಳಿಕೊಂಡರು.
ಜೀವಾಶಂಕರ್ ಛಾಯಾಗ್ರಹಣವಿರುವ ಚಿತ್ರವನ್ನು ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ಪಿ.ಆರ್. ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ನಿರ್ಮಾಣ ಮಾಡಿದ್ದಾರೆ. ವಿ2 ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗೂ ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದಾರೆ.