ಕೆಲವೊಮ್ಮೆ ಪ್ರತಿಭಾ ಪಲಾಯನವಾಗುತ್ತದೆ.. ಸಿನಿಮಾ ರಂಗದಲ್ಲಿ ಇದು ಹೆಚ್ಚು ನಡೆಯುತ್ತದೆ. ಇಲ್ಲಿ ಸಲ್ಲದವರು ಅವಕಾಶ ಹುಡುಕಿಕೊಂಡು ಹೊರ ರಾಜ್ಯಗಳಿಗೆ ಹೋಗುವುದು; ಅಲ್ಲಿ ಯಶಸ್ಸು ಗಳಿಸುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ..
ರಜನಿಕಾಂತ್, ಪ್ರಕಾಶ್ ರೈ, ವಿನೋದ್ ಆಳ್ವಾ, ಚರಣ್ ರಾಜ್ ಮೊದಲಾದವರು ನೆರೆ ರಾಜ್ಯಗಳಲ್ಲಿ ಮಿಂಚಿದ ಉದಾಹರಣೆ ಕಣ್ಣ ಮುಂದಿದೆ. ಈಗ ಆ ಸಾಲಿಗೆ ಸೇರುತ್ತಿರುವವರು ನಟ, ನಿರ್ದೇಶಕ ನಾಗ್ ಶೇಖರ್.
‘ಅರಮನೆ’ ‘ಸಂಜು ವೆಡ್ಸ್ ಗೀತಾ’, ‘ಮೈನಾ’, ‘ಅಮರ್’ ನಂತಹ ಅದ್ಭುತ ದೃಶ್ಯಕಾವ್ಯಗಳನ್ನು ಕನ್ನಡ ಬೆಳ್ಳಿ ತೆರೆಗೆ ಕೊಡುಗೆಯಾಗಿ ನೀಡಿದ ನಾಗಶೇಖರ್ ಈಗ ತಮಿಳು ಹಾಗೂ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಈಗಾಗಲೇ ತಮ್ಮ ‘ಮೈನಾ’ ಚಿತ್ರವನ್ನು ತೆಲುಗು, ತಮಿಳು ಭಾಷೆಗಳಿಗೆ ರೀಮೇಕ್ ಮಾಡಿ ಒಗ್ಗಿಸಿರುವ ನಾಗ್ ಶೇಖರ್ ತಮಿಳಿನಲ್ಲಿ ಈಗ ಮತ್ತೊಂದು ಚಿತ್ರವನ್ನು ಮಾಡುತ್ತಿದ್ದು,
‘ನವೆಂಬರ್ ಮಳೆಯಲ್ ನಾನುಂ ಅವಳುಂ’ ಎಂಬುದು ಚಿತ್ರದ ಹೆಸರು.
ಮಾತನಾಡುವಾಗ ಉಗ್ಗುವ ವ್ಯಕ್ತಿಯ ಪಾತ್ರವದು; ಹಾಗಾಗಿ ಮುಖ್ಯ ಪಾತ್ರದಲ್ಲಿ ನಾಗ್ ಶೇಖರ್ ಅವರೇ ನಟಿಸುತ್ತಿದ್ದಾರೆ ಮತ್ತು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ನಡೆಯುತ್ತಿದ್ದು, ಮಾಧ್ಯಮಗಳನ್ನು ಅಲ್ಲಿಗೇ ಆಹ್ವಾನಿಸಿದ್ದರು ನಾಗ್ ಶೇಖರ್.
ಮಳೆಯ ದೃಶ್ಯವೊಂದರ ಚಿತ್ರೀಕರಣ ನಡೆಸಿದ ನಂತರ ತಂಡ ಮಾತಿಗೆ ಕುಳಿತಿತು. ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿಗೆ ಡಬ್ ಆಗಲಿದೆ. ಎಂಬ ಮಾಹಿತಿ ನೀಡಿದರು ನಾಗ್ ಶೇಖರ್. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಸೆನ್ಸಾರ್ ಶಿವು, ಫೋಲೀಸ್ ಕಮೀಷನ್ ಪಾತ್ರ ಮಾಡುತ್ತಿರುವ ಸುಮನ್ ರಂಗನಾಥ್, ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಡೆಲ್ಲಿ ಗಣೇಶ್, ಅರ್ಜುನ್, ರಾಜಶೇಖರ್, ರಾಜಶೇಖರ ರೆಡ್ಡಿ, ಸಹ ನಿರ್ಮಾಪಕ ನಾಗೇಂದ್ರ ಶೆಟ್ಟಿ, ಛಾಯಾಗ್ರಾಹಕ ಸತ್ಯ ಹೆಗಡೆ ಹಾಜರಿದ್ದರು.
ಇದು ಮಳೆಗಾಲದಲ್ಲಿ ನಡೆಯುವ ಪ್ರೇಮಕಥೆ. ತಮಿಳುನಾಡಿನಲ್ಲಿ ನವೆಂಬರ್ ನಲ್ಲಿ ಭಾರೀಮಳೆ; ಹಾಗಾಗಿ ಈ ಚಿತ್ರಕ್ಕೆ ‘ನವೆಂಬರ್ ಮಳೆಯಲ್ ನಾನುಂ ಅವಳುಂ’ ಎಂಬ ಶೀರ್ಷಿಕೆ ಇಡಲಾಗಿದೆ ಎಂಬ ಉತ್ತರ ಕೊಟ್ಟರು.
ಈ ಕಥೆಯಲ್ಲಿ ಬೇರೆಯವರು ಅಭಿನಯಿಸ ಬೇಕಾಗಿತ್ತು ಆದರೆ ಇಲ್ಲಿ ಹೀರೋಗೆ ಸೀಳುತುಟಿ ಇರುತ್ತದೆ ಮತ್ತು ಆತನಿಗೆ ತಾನೊಬ್ಬ ದೊಡ್ಡ ಗಾಯಕ ಆಗಬೇಕೆಂಬ ಕನಸೂ ಇರುತ್ತದೆ. ಹಾಗಾಗಿ ಬಹಳ ಹುಡುಕಾಟ ನಡೆಸಿದ ಬಳಿಕ ಎಲ್ಲರ ಅಭಿಪ್ರಾಯ ಪಡೆದು ನಾನೇ ಅಭಿನಯಿಸುತ್ತಿರುವೆ ಎಂದರು ನಾಗ್ ಶೇಖರ್.
ಸೆನ್ಸಾರ್ ಶಿವು ನಿರ್ಮಾಣ ಮಾಡುತ್ತಿದ್ದಾರೆ. ನಾಗೇಂದ್ರ ಶೆಟ್ಟರೂ ಜೊತೆಗೆ ಕೈಜೋಡಿಸಿದ್ದಾರೆ. ತಮಿಳಲ್ಲಿ ಈ ರೀತಿಯ ಕಥೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಮೊದಲು ತಮಿಳಲ್ಲಿ ಮಾಡುತ್ತಿರುವೆ ಅಲ್ಲದೆ ನವೆಂಬರ್ 11ಕ್ಕೇ ಚಿತ್ರವನ್ನು ಬಿಡುಗಡೆ ಮಾಡುವ ಆಶಯವಿದೆ ಎಂದರು ನಿರ್ದೇಶಕ ಕಮ್ ನಟ.
ಇನ್ನು ಮಲಯಾಳಂನಲ್ಲಿ ಸಿತಾರಾ ಮುಖ್ಯ ಪಾತ್ರ ಮಾಡಿದ್ದು, ಏಳು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಡೆಲ್ಲಿ ಗಣೇಶ್, ದತ್ತಣ್ಣ, ರಂಗಾಯಣ ರಘು ಕೂಡ ಅಭಿನಯಿಸಿದ್ದಾರೆ. ಐಡಿಯಲ್ ಹೋಮ್ಸ್ ನ ರಾಜಶೇಖರ್ ಸಿಎಂ ಪಾತ್ರ ಮಾಡಿದ್ದಾರೆ. ಶಬ್ಬೀರ್ ಸಂಗೀತ ನೀಡಿದ್ದಾರೆ. ಮದನ್ ಕಾರ್ಕಿ(ವೈರಮುತ್ತು ಮಗ) ಸಾಹಿತ್ಯ ಬರೆದಿದ್ದಾರೆ. ವೇಣು ವೇಲ್ ಮುರುಗನ್ ಸಹ ನಿರ್ಮಾಪಕ ಆಗಿದ್ದಾರೆ ಎಂಬ ವಿವರಗಳು ಬಂದವು.
ಇದರ ಜೊತೆಗೆ ‘ಲವ್ ಮಾಕ್ಟೇಲ್’ ನ ತೆಲುಗು ಅವತರಣಿಕೆ ನಾಗ್ ಶೇಖರ್ ಮಾಡಿದ್ದು, ಅದೂ ಕೂಡ ಸಿದ್ಧವಾಗಿದೆ. ಅದರಲ್ಲಿ ಸತ್ಯದೇವ್ ಮುಖ್ಯ ಪಾತ್ರ ನಿರ್ವಹಿಸಿದ್ದು, ಅವರ ಜೊತೆಗೆ ತಮನ್ನಾ ಕಾಣಿಸಿ ಕೊಂಡಿದ್ದಾರೆ. ಭಾವನಾ ರವಿ ಅದರ ನಿರ್ಮಾಪಕರು ಎಂದು ವಿವರಿಸಿದರು.
ಎ2 ಮ್ಯೂಸಿಕ್ ನವರು ಹಾಡುಕೇಳಿ ಅರ್ಧಕೋಟಗೆ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದು, ಮೂರು ಕೋಟಿಗೆ ಹಿಂದಿ ಹಕ್ಕುಗಳು ಮಾರಾಟವಾಗಿವೆ ಎಂಬ ಮಾಹಿತಿಯೂ ಬಂತು.