ಒಂದು ನಿಜವಾದ ಗೆಲುವು ಹೇಗಿರುತ್ತದೆ ಎಂಬುದಕ್ಕೆ ನಿದರ್ಶನದಂತಿದ್ದ ಆ ಸಂತೋಷ ಕೂಟದಲ್ಲಿ ಇಡೀ ಚಿತ್ರತಂಡ ಹೆಮ್ಮೆಯ ಭಾವದಲ್ಲಿ ಬೀಗಿತು..
ಅದು ‘ಗಾಳಿಪಟ2’ರ ಸಂಭ್ರಮ ಹಾಗೂ ಸಂತಸದ ಕೂಟ. ಸ್ಟಾರ್ ಹೊಟೇಲ್ ನಲ್ಲಿ ಇಡೀ ಚಿತ್ರತಂಡ ಸಂಭ್ರಮಿಸಿದ ರೀತಿಯಲ್ಲಿ ನಿರ್ಮಾಪಕ, ನಿರ್ದೇಶಕರ ಬಗ್ಗೆ ಒಲವಿತ್ತು. ಗೆಲುವಿನ ನಗುವಿತ್ತು.
ಕೊರೊನಾ ಕಾಲಘಟ್ಟದ ಬಳಿಕ ಒಂದು ಚಿತ್ರ ತಂಡ ನಿಜವಾಗಿ ಸಂಭ್ರಮದಿಂದ ತೇಲಾಡಿತು. ಪ್ರೇಕ್ಷಕ ಪ್ರಭುವಿನ ಆಶೀರ್ವಾದ ಈ ರೀತಿ ಇರುತ್ತದೆ ಎಂಬುದು ನಿರೀಕ್ಷೆಯನ್ನು ಮೀರಿದ್ದಾಗಿತ್ತು.
ಇದೇ ಕಾರಣದಿಂದ ಚಿತ್ರದ ಮೊದಲ ‘ಪರೀಕ್ಷೆಯ ಹಾಡು’ ಬಿಡುಗಡೆ ಸಮಾರಂಭದಲ್ಲಿ ನಾನು ನಾಲ್ಕು ಪರೀಕ್ಷೆಗಳನ್ನು ಬರೆದೆ; ಒಂದರಲ್ಲಿಯೂ ಪಾಸಾಗಲಿಲ್ಲ ಎಂದು ಹೇಳಿದ್ದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಈಗ ‘ನಾನು ಪಾಸಾಗಿದ್ದೇನೆ.. ಖುಷಿ ಇದೆ; ಹೆಮ್ಮೆ ಇದೆ’ ಎಂದು ಹೇಳಿ ಚಿತ್ರತಂಡವನ್ನು ಪುಳಕಗೊಳಿಸಿದರು.
ರಮೇಶ್ ರೆಡ್ಡಿ ಅವರು ಮಾತನಾಡುವಾಗ ಚಿತ್ರತಂಡ ಸಂಭ್ರಮಿಸುತ್ತಿದ್ದ ರೀತಿ ಆನಂದದ ಕೇಕೇ ಎಲ್ಲವೂ ಒಬ್ಬ ನಿರ್ಮಾಪಕ ಎಲ್ಲರ ಹೃದಯದಲ್ಲಿಯೂ ಈ ಮಟ್ಟದ ಆನಂದದ ಭಾವಗಳನ್ನು ತುಂಬುವುದು ಸಾಧ್ಯವೇ ಎಂಬ ಪ್ರಶ್ನೆ ಅಲ್ಲಿ ನೆರೆದಿದ್ದ ಯಾರಿಗಾದರೂ ಮೂಡುವುದು ಸಹಜವಾಗಿತ್ತು.
ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಧನು ಮಾಸ್ಟರ್, ಕಲಾ ನಿರ್ದೇಶಕ ಮೋಹನ್ ಪಂಡಿತ್, ಇಡೀ ತಂಡದ ಉಸ್ತುವಾರಿ ನೋಡಿಕೊಂಡಿದ್ದ ಮ್ಯಾನೇಜರ್ ಸುರೇಶ್ ಹಾಗೂ ರವಿಶಂಕರ್, ನಟ
ರಂಗಾಯಣ ರಘು, ನಟ ವಿಶ್ವರೆಡ್ಡಿ,
ಪದ್ಮಜಾರಾವ್, ಪ್ರಣಯರಾಜ
ಶ್ರೀನಾಥ್, ಅನಂತ್ ನಾಗ್, ಜಯಂತ್ ಕಾಯ್ಕಿಣಿ, ಶ್ಯಾಮ್ ಆನಂದ್ ಆಡಿಯೋ, ಬುಲೆಟ್ ಪ್ರಕಾಶ್ ಅವರ ಪುತ್ರ, ಕೆ ವಿ ಎನ್ ಪ್ರೊಡಕ್ಷನ್ ನ ಸುಪ್ರೀತ್, ನಟಿ ವೈಭವೀ ಶ್ಯಾಂಡಿಲ್ಯ, ಶರ್ಮಿಳಾ ಮಾಂಡ್ರೆ, ನಿರ್ದೇಶಕ ಯೋಗರಾಜ್ ಭಟ್, ನಟ ಪವನ್ ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಹೀಗೆ ಎಲ್ಲರೂ ವೇದಿಕೆಯಲ್ಲಿ ಗೆಲುವಿನ ಹರ್ಷದ ಹೊನಲನ್ನು ಹರಿಸಿದರು.
ತಾಯಿ ಭುವನೇಶ್ವರಿ ಆಶೀರ್ವಾದ ನಮಗೆ ಸಾಕು ಎಂದು ರಂಗಾಯಣ ರಘು ಹೇಳಿದರು. ಈ ಚಿತ್ರ ಗೆಲ್ಲುವ ಬಗ್ಗೆ ಸಾಕಷ್ಟು ಮಾತನಾಡಿದ್ದಾಗಿ ಅನಂತನಾಗ್ ನೆನಪಿಸಿಕೊಂಡರು. ಪ್ರಣಯರಾಜ ಶ್ರೀನಾಥ್ ಅವರು ತಮಗೆ ಪಾತ್ರ ನೀಡಿದ್ದನ್ನು ಕೃತಜ್ಞತೆಯ ಭಾವದಿಂದ ಸ್ಮರಿಸಿದರು. ಯೋಗರಾಜ್ ಸಿನಿಮಾದಲ್ಲಿ ಅಭಿನಯಿಸಲು ಹತ್ತು ವರ್ಷಗಳು ಬೇಕಾದವು ಎಂದರು.
ಅದೇನೋ ಗೊತ್ತಿಲ್ಲ ಭಟ್ಟರ ನನ್ನ ಸಾಂಗತ್ಯ ನಿಲ್ಲುತ್ತದೆ ಮತ್ತು ಗೆಲ್ಲುತ್ತದೆ. ಭಟ್ಟರು ಬದಲಾಗಬಾರದು. ಅವರ ಹುಚ್ಚುತನವೂ ನಿಲ್ಲಬಾರದು; ಆಗ ನಾನು ಅವರ ಇನ್ನೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಹೋಗಬಹುದು ಎಂದರು ಗೋಲ್ಡನ್ ಸ್ಟಾರ್ ಗಣೇಶ್.
ಸಿನಿಮಾ ಆರಂಭದಿಂದಲೂ ನಿರ್ಮಾಪಕ ರಮೇಶ್ ರೆಡ್ಡಿ ಅವರ ಪ್ರೋತ್ಸಾಹ ಅನನ್ಯವಾಗಿತ್ತು ಎಂಬುದನ್ನು ಯೋಗರಾಜ್ ಭಟ್ ನೆನೆದರು. ವಿದೇಶದ ಕೋಲ್ಡ್ ಪ್ರದೇಶದಲ್ಲಿ ಚಿತ್ರತಂಡ ಕಷ್ಟ ಪಟ್ಟಿದ್ದು ಸಾರ್ಥಕವೆನಿಸಿದೆ ಎಂದರು.
ಭಟ್ಟರಿಗೆ ಸಿನಿಮಾ ಮಂದಿರದಲ್ಲಿ ಅಭಿಮಾನಿಯೊಬ್ಬ ನೀಡಿದ ಚುಂಬನದ ಕ್ಲಿಪಿಂಗ್ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಅವರು ನಾನು ನಾಲ್ಕು ಸಲ ಪರೀಕ್ಷೆ ಬರೆದು ಪಾಸಾಗಲಿಲ್ಲ; ಈಗ ಪಾಸಾಗಿದ್ದೀನಿ ಎಂಬ ವಿಡಿಯೋ ತುಣಕುಗಳು ಹರ್ಷೋದ್ಗಾರಕ್ಕೆ ಕಾರಣವಾದವು.
ಕವಿ ಜಯಂತ್ ಕಾಯ್ಕಿಣಿ ಅವರು ಬರೆಯುವ ಅವಕಾಶಗಳಿಗೆ ಧನ್ಯವಾದ ಹೇಳಿದರೆ; ಸಂತೋಷ್ ಕುಮಾರ್ ಪಾತಾಜೆ ಕ್ಯಾಮೆರಾ ಕೆಲಸವನ್ನು ಎಲ್ಲರೂ ಹೊಗಳಿದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಗೈರು ಹಾಜರಾಗಿದ್ದರು.