Snehapriya.com

June 8, 2025

ಬದುಕುವ ಆಸೆ ಹುಟ್ಟಿಸುತ್ತಿದ್ದ ಶಿವಮೊಗ್ಗ ಸುಬ್ಬಣ್ಣ ಹೊರಟು ಹೋದರು

Social Share :

ಶಿವಮೊಗ್ಗೆಯಲ್ಲಿ ಬಾಲ್ಯ ಕಳೆದು ಓದುವಾಗಲೇ ಬೆಂಗಳೂರಿಗೆ ಎಡ ತಾಕಿದ್ದ ನನಗೆ..
ಅದೊಂದು ದಿನ ಏಕೋ ಬದುಕಿನ ಗಾಳಿಪಟ ಹರಿದಂತಹ ಭಾವಗಳು..
ಇಲ್ಲ.. ಮುಗಿಯಿತು ಬದುಕು ಎಂಬಷ್ಟು ಅಸಹಾಯಕತೆ ಕಾಡಿತ್ತು..

ಸಂಜೆ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾನು ಆ ಸಂದರ್ಭದಲ್ಲಿ ವರದಿಗಾಗಿ ರಾಜಕೀಯ ಸಮಾರಂಭವೊಂದಕ್ಕೆ ಹೋಗಿದ್ದೆ.. ವೇದಿಕೆಯಲ್ಲಿದ್ದವರು..
‘ನೋಡಿ ಪ್ರತಿ ಮನುಷ್ಯನಿಗೂ ಅಸಹಾಯಕತೆ ಎಂಬುದು ಎದುರಾಗುತ್ತದೆ.. ಅಂತಹ ಸಂದರ್ಭದಲ್ಲಿ ಧೈರ್ಯ ಕೊಡುವ ಈ ಹಾಡನ್ನು ರಾಷ್ಟ್ರಕವಿ ಕುವೆಂಪು ಬರೆದಿದ್ದಾರೆ..’ ಎಂದು ಹೇಳಿ ಹಾಡಲು ತೊಡಗಿದ್ದರು..

‘ಆನಂದಮಯ.. ಈ ಜಗ ಹೃದಯ
ಏತಕೆ ಭಯ ಮಾಣೋ..
ಸೂರ್ಯೋದಯ, ಚಂದ್ರೋದಯ.. ದೇವರ ದಯೆ ಕಾಣೋ..’

ಅದೇನು ಪವಾಡ ಸಂಭವಿಸಿತೋ.. ಹಾಡು ಅಸಾಮಾನ್ಯ ಧೈರ್ಯ ಕೊಟ್ಟಿತು.. ಬದುಕು ಬೇರೋದು ತಿರುವು ಪಡೆಯಿತು..

ಅಲ್ಲಿ ಆ ವೇದಿಕೆಯಲ್ಲಿ ಹಾಡಿದವರು ನನಗೆ ಪರಿಚಿತರು. ಅವರೇ ಶಿವಮೊಗ್ಗ ಸುಬ್ಬಣ್ಣ..! ಚಿಕ್ಕ ವಯಸ್ಸಿನಲ್ಲಿ ಅವರ ‘ಕಾಡು ಕುದುರೆ.. ಓಡಿ ಬಂದಿತ್ತಾ..’ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವ ವಿಷಯ ತಿಳಿದಿತ್ತು.

ಏಕೆಂದರೆ ನಾನು ಮತ್ತು ಅವರ ಕಿರಿಯ ಸಹೋದರ ಶ್ಯಾಮ್ ಸುಂದರ್ ಸಹಪಾಠಿಗಳಾಗಿದ್ದೆವು. ಶ್ಯಾಮ್ ಶಾಲೆಯಲ್ಲಿ ಆ ಹಾಡನ್ನು ಯಾವಾಗಲೂ ಹಾಡುತ್ತಿದ್ದರು..

ಮೇಲೆ ಹೇಳಿದ ಘಟನೆಯ ಬಳಿಕ ಶಿವಮೊಗ್ಗ ಸುಬ್ಬಣ್ಣ ಅವರು ಯಾವುದೇ ಕಾರ್ಯಕ್ರಮ ಅಥವಾ ವೇದಿಕೆಯಲ್ಲಿ ಸಿಕ್ಕರೂ ‘ಆನಂದ ಮಯ.. ಹಾಡಿಸದೇ ಬಿಡುತ್ತಿರಲಿಲ್ಲ..’ ಅವರೂ ಸಹ ಎಂದಿಗೂ ಬೇಸರ ಪಟ್ಟುಕೊಂಡವರೂ ಅಲ್ಲ. ಆ ಮಟ್ಟಿಗೆ ಅವರು ಸಹೃದಯತೆ ಕಾಯ್ದು ಕೊಂಡಿದ್ದರು.

ಕೆಲವೊಮ್ಮೆ ಸಾರ್ ಕಾಡು ಕುದುರೆ ಹಾಡಿನಲ್ಲಿ ಎಂಥಾ ಅದ್ಭುತ ಸಾರ್ ‘ಸೊಂಟದ ಬುಗುರಿ ತಿರುಗುತ್ತಿತ್ತು..’ ಎಂಬುದು ಸೊಗಸಾಗಿ ಮೂಡಿ ಬಂದಿದೆ ಎಂದು ಒಮ್ಮೆ ಹಿರಿಯ ಗೆಳೆಯರೊಟ್ಟಿಗೆ ರೇಗಿಸಿದ್ದೂ ಉಂಟು..

ಆಗ ಅದನ್ನು ನೀವು ಕಂಬಾರರನ್ನು ಕೇಳಬೇಕು‌ ಎಂದು ಹೇಳಿ ನಕ್ಕಿದ್ದರು. ಸುಬ್ಬಣ್ಣ ಅವರು ಬಹಳಷ್ಟು ಭಾವಗೀತೆ ಹಾಗೂ ಚಿತ್ರಗೀತೆಗಳನ್ನು ಹಾಡಿದ್ದರೂ ಕೆಲವು ಹಾಡುಗಳು ಮಾತ್ರ ನನ್ನ ಹಾಟ್ ಫೇವರಿಟ್ ಆಗಿದ್ದವು.

ಅದರಲ್ಲಿ ಮುಖ್ಯವಾಗಿದ್ದು ‘ತ್ರಿಶೂಲ’ ಚಿತ್ರದಲ್ಲಿ ಕನ್ನಡದ ಹೆಸರಾಂತ ಕವಿ ಡಾ.ಸಿದ್ದಲಿಂಗಯ್ಯ ನವರ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ’ ಎಂಬ ಹಾಡನ್ನು ಕಲ್ಯಾಣ್ ವೆಂಕಟೇಶ್ ರಾಗ ಸಂಯೋಜನೆಯಲ್ಲಿ ಹಾಗೂ ಮತ್ತೊಬ್ಬ ಸುಪ್ರಸಿದ್ಧ ಗಾಯಕ ಸಿ.ಅಶ್ವಥ್ ಅವರ ಜೊತೆ ಸುಬ್ಬಣ್ಣ ಅವರು ಹಾಡಿದ್ದ ಹಾಡು.. ಅದರಲ್ಲಿ ಈ ಇಬ್ಬರು ದಿಗ್ಗಜರು ಜುಗಲ್ಭಂಧಿ ಎಂಬಂತೆ ಹಾಡಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

(ಅದೇ ಹಾಡು ಆನಂತರ ‘ಬಾ ನಲ್ಲೇ ಮಧು ಚಂದ್ರ’ಕ್ಕೆ ಚಿತ್ರದಲ್ಲಿ ಹಂಸಲೇಖ ಅವರು ಬೇರೆ ರೀತಿ ಸಂಯೋಜಿಸಿ ಆ ಹಾಡು ಸೂಪರ್ ಹಿಟ್ ಆಗಿದೆ.)

ಶಿವಮೊಗ್ಗ ಸುಬ್ಬಣ್ಣ ಹಾಡುತ್ತಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ; ಏಕೆಂದರೆ ಅವರದು ಕಂಚಿನ ಕಠ. ಎಂತಹವರೂ ಸಹ ರಾಗದ ಮೋಡಿಗೆ ಸಿಲುಕದೆ ಬೇರೆ ದಾರಿಯೇ ಇರುತ್ತಿಲಿಲ್ಲ.

ಆಗಸ್ಟ್ 12 ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ ಈ ಮಹಾನ್ ಗಾಯಕರ ಕುರಿತು ಇನ್ನು ಬರೆಯಲು ಬೇಕಾದಷ್ಟು ನೆನಪುಗಳಿವೆ..
ಕ್ಷಮಿಸಿ ಕೈ ನಡುಗುತ್ತಿದೆ. ಹೃದಯ ಬಿರಿಯುತ್ತಿದೆ.

🖋ಸ್ನೇಹಪ್ರಿಯ ನಾಗರಾಜ್

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *