ರೌಡಿಸಂ ಎಂದರೆ ಒಂದು ದೊಡ್ಡ ರಿಷ್ಕ.. ಅದು ಹೇಗೆ ಸಂಭವಿಸಿತು ಎಂಬುದು ಆ ಲೋಕದೊಳಗೆ ಪ್ರವೇಶ ಪಡೆಯುವ ಎಷ್ಟೋ ಜನರಿಗೆ ಅರಿವಿಗೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ..
ಇಲ್ಲಿ ಅಣ್ಣಾ ತಂಗಿಯ ಕಥೆ ಇದೆ.. ಇಬ್ಬರ ವಿಭಿನ್ನ ದಾರಿಗೆ ಗಟ್ಟಿಯಾದ ಕಾರಣಗಳಿವೆ.. ಅದೇ ‘ನಾನ್ ರೌಡಿ’.
ಈ ಹಿಂದೆ ‘ಮನಸಿನಾ ಪುಟದಲಿ’ ಹಾಗೂ ‘ಬ್ರಾಂಡ್’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಪ್ರಶಾಂತ್ ಕೆ.ಶೆಟ್ಟಿ ಈಗ ಈ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ.
ಇದು ಹೊಸ ಜಾನರ್ ಚಿತ್ರ ಎಂದು ಹೇಳಿಕೊಂಡರು ನಿರ್ದೇಶಕರು. ಚಿತ್ರವು ಬಿಡುಗಡೆಗೆ ಸಿದ್ಧವಿದೆ . ಕನ್ನಡ, ತೆಲುಗು, ಹಿಂದಿ ಸೇರಿ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವುದೂ ಪ್ರಶಾಂತ್ ಕೆ.ಶೆಟ್ಟಿ. ಇವರಿಗೆ ಜೋಡಿಯಾಗಿ ಮುಂಬೈ ಮೂಲದ ತನುಶ್ರೀ ಚಟರ್ಜಿ ನಟಿಸಿದ್ದಾರೆ. ಅಲ್ಲದೆ ಐಟಂ ಹಾಡಿಗೆ ಸಮೀರಾ ಖಾನ್ ಹೆಜ್ಜೆ ಹಾಕಿದ್ದಾರೆ.
ಪ್ರಚಾರ ಕೊರತೆಯಿಂದ ಎರಡು ಚಿತ್ರಗಳೂ ಕೈ ಹಿಡಿಯಲಿಲ್ಲ.. ಆ ಕಾರಣದಿಂದ ಸಿನಿಮಾ ಸಹವಾಸ ಬೇಡವೆಂದು ಸುಮ್ಮನಿದ್ದೆ. ಆದರೆ ಈ ವಿಷಯ ತುಂಬಾ ಕಾಡಿದ್ದರಿಂದ ಮತ್ತೆ ಸಿನಿಮಾ ಮಾಡಿರುವುದಾಗಿ ಹೇಳಿಕೊಂಡರು.
ನೂರಾರು ಕನಸುಗಳನ್ನು ಹೊತ್ತು ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ಬರುವ ಯುವಕನ ಜೀವನ ಮುಂದೆ ಯಾವ ರೀತಿ ತಿರುವುಗಳನ್ನು ಪಡೆಯಿತು ಎಂಬ ಮಾಮೂಲಿ ಕಥೆಯೇ ಇದು. ಆದರೆ ತಿರುವುಗಳು ಗಮನಾರ್ಹ ಎಂಬುದು ನಿರ್ದೇಶಕರ ಸಮರ್ಥನೆ.
ಬೆಂಗಳೂರು, ದಾವಣಗೆರೆ, ಚನ್ನಗಿರಿ ಹಾಗೂ ಬಾಂಬೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ತನುಶ್ರೀ ಅವರು ಈಗಾಗಲೇ ಭೋಜ್ಪುರಿ, ಗುಜರಾತಿ ಅಲ್ಲದೆ ಬೆಂಗಾಳಿ ಸೇರಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬ ಮಾಹಿತಿಗಳು ಬಂದವು.
ಅದು ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಹಿರಿಯ ಜಾನಪದ ಗಾಯಕ ಗುರುರಾಜ ಹೊಸಕೋಟೆ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಮಾತ್ರವಲ್ಲ; ಸಾಹಿತ್ಯ ರಚನೆಯ ಮಾಡಿ ಹಾಡಿಗೆ ಧ್ವನಿಯಾಗಿದ್ದಾರೆ. ವಿನುಮನಸು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ ಹಾಗೂ ಐಟಂ ಸಾಂಗ್ ನ್ನು ಸ್ಟೀಫನ್ ಮಾಡಿದ್ದಾರೆ ಎಂಬ ವಿವರ ಬಂತು.
ಮೌಲ್ಯಚೇತನ್ ವಿತರಣೆಯ ಜವಾಬ್ದಾರಿ ಹೊತ್ತಿದ್ದು, ಅಣಜಿ ನಾಗರಾಜ್ ಛಾಯಾಗ್ರಹಣ, ರಾಜೇಶ್ ಚೌಹಾಣ್ ಸಂಕಲನ ಚಿತ್ರಕ್ಕಿದೆ.