ಹಿರಿಯರ ಚಾವಡಿ ಭರಪೂರ ಕಾಮಿಡಿ
ರೇಟಿಂಗ್ 4/5
ಹಿರಿಯರ ಚಾವಡಿಯಲ್ಲಿ ಏನಿರುತ್ತದೆ..
ಬದುಕಿನ ಮೆಲುಕು.. ಹೊರಗಿನ ಥಳಕು.. ಒಳಗಿನ ಸರಕು..
ಬದುಕಿನ ಸಂತೆಯಲ್ಲಿ ತಿಳಿದವನೇ ಜಾಣ.. ಆರಂಭದಲ್ಲೇ ಅದು ಬರಬಾರದು.. ಬಂದರೆ ಆ ಬದುಕು ಅಯೋಮಯ..
ಇಲ್ಲಿನ ನಾಯಕನಿಗೂ ಬದುಕು ಆರಂಭಕ್ಕೆ ಮುನ್ನವೇ ‘ಶುಗರ್ ಲೆಸ್’ ಆಗುವ ಪರಿಸ್ಥಿತಿ. ಅತಿಯಾಗಿ ಸಿಹಿ ತಿನ್ನುವ ಪ್ರಾಣಿಯನ್ನು ಹಿಡಿದು ಕಟ್ಟಿ ಹಾಕಿ ಸಪ್ಪೆಯಾದುದನ್ನು ಅಥವಾ ಕಹಿಯಾದುದನ್ನು ನೀಡಿದರೆ ಏನಾಗುತ್ತದೆ..
ಅದು ಕುಣಿದಾಡಿ, ಎಳೆದಾಡಿ ಅವಾಂತರ ಮಾಡುತ್ತದೆ.. ಅದು ನೋಡುವುದಕ್ಕೆ ತಮಾಷೆಯ ಹೂರಣವಾಗುತ್ತದೆ. ಅದೂ ಎಲ್ಲವನ್ನೂ ತಮಾಷೆಯಾಗಿ ನೋಡುವ ಶಶಿಧರ್ ಅವರಂತಹ ನಿರ್ದೇಶಕರ ಕೈಗೆ ಸಿಕ್ಕಿದರೇ..?
ಸಪ್ಪೆ-ಕಹಿ ತಿಂದ ಪ್ರಾಣಿ ಎಲ್ಲಿಗೆ ಬೇಕೋ ಅಲ್ಲಿಗೆ ಜಿಗಿದಂತೆಯೇ ಇಲ್ಲಿ ವೆಂಕಟೇಶ್ ಎಂಬ ಅಮಾಯಕನ ಪರಿಸ್ಥಿತಿ ಕೂಡ..
ಯಾರಿಗೇ ಆಗಲಿ ಶುಗರ್ ಇದೆ ಎಂದು ತಿಳಿದಾಗ ಆಕಾಶ ತಲೆಯ ಮೇಲೆ ಬಿದ್ದ ಅನುಭವವಾಗುತ್ತದೆ.. ಏನು ಮಾಡಬೇಕು ಎಂಬುದು ಗೊಂದಲ.. ತಿನ್ನುವ ವಿಷಯದಲ್ಲಿ ಗಲಿಬಿಲಿ..
ಶುಗರ್ ಲೆಸ್ ಆದ ವೆಂಕಟೇಶ್ ಆಲಿಯಾಸ್ ವೆಂಕಿ (ಪೃಥ್ವಿ ಅಂಬರ್) ಪರಿಸ್ಥಿತಿ ಕೂಡ ಇದೇ.. ಅದೂ ಮದುವೆ ನಿಶ್ಚಯ ಆದ ಹರೆಯದ ಹುಡುಗನಿಗೆ ಊಟದಲ್ಲಿ ನಿಯಂತ್ರಣ ಹೇರುವುದೆಂದರೇ..
ಸಕ್ಕರೆ ಕಾಯಿಲೆ ಎಂಬುದು ಇಲ್ಲಿ ಸಾಂಕೇತಿಕ. ಆ ಮೂಲಕ ಆಧುನಿಕ ಬದುಕಿನ ಆಸೆಬುರುಕ ಮನುಷ್ಯನ ಎಲ್ಲಾ ಅವಾಂತರಗಳು ಅನಾವರಣ ಗೊಳ್ಳುತ್ತವೆ. ಈ ಬದುಕಿನ ಸಂತೆಯಲ್ಲಿ ಎಲ್ಲರೂ ತಮ್ಮ ಬೇಳೆ ಬೇಯಿಸಿಕೊಳ್ಳುವವರೇ.. ಮೋಸ ವಂಚನೆ ದಗಾಕೋರತನದ ನಡುವೆ ವೆಂಕಟೇಶ್ ನಂತಹ ಒಳ್ಳೆ ಮನಸ್ಸುಗಳು ಇರುತ್ತವೆ. ಅಂತಹವರಿಗೆ ಎದುರಾಗುವ ಆತಂಕಗಳನ್ನು ಉಳಿದವರು ಹೇಗೆ ಎಂಜಾಯ್ ಮಾಡುತ್ತಾರೆ ಎಂಬುದನ್ನು ವಿನೂತನ ರೀತಿಯಲ್ಲೇ ಕಟ್ಟಿಕೊಡುವ ನಿರ್ದೇಶಕ ಕೆ.ಎಮ್.ಶಶಿಧರ್ ಆ ಮೂಲಕ ಪ್ರೇಕ್ಷಕನನ್ನು ನಗೆಗಡಲಿಗೆ ಕೊಂಡೊಯ್ದು ಬಿಡುತ್ತಾರೆ ಹಾಗಾಗಿ ಚಿತ್ರದ ಆರಂಭದಿಂದ ಅಂತ್ಯದವರೆಗೂ ನಗುವಿನಲ್ಲಿ ತೇಲುವ ಪ್ರೇಕ್ಷಕನಿಗೆ ಬೇರೆ ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ.. ಕಚಗುಳಿ ಇಡುವ ಸಂಭಾಷಣೆ ಕೂಡ..
ಭರಮಣ್ಣನಂತಹ ಅಚಾತುರ್ಯ ಗೆಳೆಯ, ಸತ್ಯದ ತಲೆಯ ಮೇಲೆ ಹೊಡೆದು ಅಪಶಕುನದ ಮಾತನಾಡುವ ನವೀನ್ ಪಡೀಲ್, ಹಿರಿಯ ಜೀವದ ಮಾನವೀಯ ಅನುಕಂಪ ನೀಡುವ ದತ್ತಣ್ಣ, ಜೀವನದ ರಸಗಳೇ ಗೊತ್ತಿಲ್ಲದ ರಘು ರಾಮನ ಕೊಪ್ಪ ಮೊದಲಾದವರು ಒಂದು ಕಡೆಗಾದರೆ, ಚಿತ್ರದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತೊಂದು ಕಡೆಗೆ..
ಏಕೆಂದರೆ ಇಲ್ಲಿನ ಪ್ರೇಮೋನ್ಮಾದದ ಸಾರವನ್ನು ಹೀರುವಾಗ ಅನೂಪ್ ಸಂಗೀತ ಮಜಾ ಕೊಡುತ್ತದೆ. ಈ ಸಂಗೀತದ ಸಾರ ಇಲ್ಲದಿದ್ದರೆ ಸಕ್ಕರೆ ಯಂತೆ ಮತ್ತೇನೋ ಕಳೆದುಕೊಂಡ ಅನುಭವ ಖಂಡಿತಾ ಆಗುತ್ತಿತ್ತು. ಆದರೆ ಪ್ರೇಮದ ಹಾಡಿನ ರಿದಂ ‘ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್ ನ ಥೇಟ್ ಅನಿಸುತ್ತೆ ಅಷ್ಟೇ..’
ಹಿರಿಯ ನಿರ್ದೇಶಕ, ನಟ ಎಸ್.ನಾರಾಯಣ್ ಸೇರಿದಂತೆ ಎಲ್ಲರೂ ತಮ್ಮ ಮಿತಿಯಲ್ಲಿ ಅತ್ಯುತ್ತಮವಾಗಿ ನಟಿಸಿದ್ದಾರೆ.
ಹೊರಗಿನ ಮಳೆಯ ಆಹ್ಲಾದಕರ ಅನುಭವಕ್ಕೆ ಒಳಗಿನ ನಗುವೆಂಬ ಸಿದ್ಧೌಷಧ ಬೇಕಾದರೆ ಚಳಿ ಬಿಟ್ಟು ಹೊರಗೆ ಬಂದು ‘ಶುಗರ್ ಲೆಸ್’ ನೋಡಲೇ ಬೇಕು.. ಹಾಗಿದೆ ಸಿನಿಮಾ..
🖋ಸ್ನೇಹಪ್ರಿಯ ನಾಗರಾಜ್