ನಟ ಹಾಗೂ ಪತ್ರಕರ್ತ ಯತಿರಾಜ್ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ನಟನೆಯಲ್ಲಿ ತೊಡಗಿರುವಾಗಲೇ ನಿರ್ದೇಶನದತ್ತ ಹೊರಳಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಈಗ ಅವರ ನಿರ್ದೇಶನ ಮಾಡಿರುವ ಚಿತ್ರದ ಹೆಸರು ‘ಸೀತಮ್ಮನ ಮಗ’. ಇದು ಮಕ್ಕಳ ಚಿತ್ರದ ಸಾಲಿನಲ್ಲಿ ನಿಲ್ಲುತ್ತದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರವನ್ನು ನೀಡಿದೆ.
ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಸಲುವಾಗಿ ಈಚೆಗೆ ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ. ‘ಇದು ಸ್ನೇಹಿತ ಇಹಲೋಕ ತ್ಯಜಿಸಿದಾಗ ಆತನ ಅಂತ್ಯಕ್ರಿಯೆ ವೇಳೆ ಹುಟ್ಟಿದ ಕಥೆ’. ತಾಯಿ ಮಗನ ಬಾಂಧವ್ಯ ಎದ್ದು ಕಾಣುತ್ತದೆ ಎಂದರು ನಿರ್ದೇಶಕ ಯತಿರಾಜ್.
ಸೀತಮ್ಮನಾಗಿ ಚೈತ್ರ ಶ್ರೀನಿವಾಸ್, ಅವರ ಮಗನಾಗಿ ಚರಣ್ ಕಾಸಲ ಅಭಿನಯಿಸಿದ್ದಾರೆ. ಸೋನು ಸಾಗರ, ಬುಲೆಟ್ ರಾಜು ಇತರ ತಾರಾ ಬಳಗದಲ್ಲಿ ಇದ್ದಾರೆ. ಮಂಜುನಾಥ್ ನಾಯಕ್ ಕಥೆ ಇಷ್ಟಪಟ್ಟು ನಿರ್ಮಾಣ ಮಾಡಿದ್ದಾರೆ.
ಚಿತ್ರದುರ್ಗದ ಸಮೀಪದ ಪಂಡರಹಳ್ಳಿ ಎಂಬಲ್ಲಿ ಇಡೀ ಚಿತ್ರೀಕರಣ ನಡೆಸಲಾಗಿದೆ. ಸದ್ಯವೇ ಚಿತ್ರ ಬಿಡುಗಡೆ ಕಾಣಲಿದೆ. ಚಿತ್ರದ ನಿರ್ಮಾಪಕ ಮಂಜುನಾಥ್ ನಾಯಕ್ ಶಾಲಾ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸಿದವರು. ಅವರಿಗೆ ಮಕ್ಕಳ ಈ ಚಿತ್ರವನ್ನು ರಾಜ್ಯದ ಪ್ರತಿ ಶಾಲೆಗೆ ತೋರಿಸಬೇಕು ಎಂಬುದು ಹಂಬಲ.
ಚೈತ್ರ ಶ್ರೀನಿವಾಸ್, ಸೋನು ಸಾಗರ, ಚರಣ್ ಕಾಸಲ, ಬುಲೆಟ್ ರಾಜು ತಮ್ಮ ಪಾತ್ರಗಳ ಕುರಿತು ಹೇಳಿಕೊಂಡರು.
ಲಹರಿ ಸಂಸ್ಥೆಯ ಲಹರಿ ವೇಲು ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ತಂಡಕ್ಕೆ ಶುಭ ಕೋರಿದರು.