ಜಯಂತ್ ಕಾಯ್ಕಿಣಿ ತಮ್ಮ ಗೀತ ರಚನೆಯ ಸಾಲುಗಳಲ್ಲಿ ಪ್ರೇಮದ ಅನಂತ ಸಾಧ್ಯತೆಗಳನ್ನು ಕಟ್ಟಿ ಕೊಡುತ್ತಾರೆ.. ಹಾಗಾಗಿ ಅದು ನೈಜ ಪ್ರೇಮದ ಸಾಲುಗಳಾಗಿ ಕೇಳುಗನ ಅಥವಾ ನೋಡುಗನನ್ನು ತಣಿಸುತ್ತವೆ..
ಆದರೆ ಯೋಗರಾಜ್ ಭಟ್ ಅದನ್ನು ಅನುಭವಿಸುತ್ತಾರೆ ಮತ್ತು ಪಾತ್ರದ ಮೇಲೆ ಪ್ರಯೋಗ ಮಾಡುತ್ತಾರೆ. ಹಾಗಾಗಿ ತಮ್ಮ ಮನದಾಳದ ಇಚ್ಚೆಯ ಭಾವ ಭಂಗಿಗಳನ್ನು ಪಾತ್ರಗಳ ಮೇಲೆಯೇ ಹೇರುತ್ತಾರೆ..
ಹಾಗಾಗಿ ಅವರ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗುತ್ತವೆ. ಇಲ್ಲೊಂದು ಹಾಡು ನೈಜ ಪ್ರೇಮದ ರೀತಿಯಲ್ಲಿದೆ; ಗೋಲ್ಡನ್ ಸ್ಟಾರ್ ಗಣೇಶ್ ಅವರ ಮೇಲೆ ನಡೆದಿದೆ ಭಟ್ಟರ ಪ್ರಯೋಗ..
ಅದು ‘ಗಾಳಿಪಟ-2’ ಚಿತ್ರದ ಪ್ರೇಮಗೀತೆ. ವಿಶೇಷವೆಂದರೆ ಈ ಹಾಡಿನಲ್ಲಿ ದೊಡ್ಡ ಇಸ್ತ್ರಿ ಪೆಟ್ಟಿಗೆ ಮತ್ತು ಶ್ರೀಕೃಷ್ಣ ಬೆಣ್ಣೆ ಹುಡುಕುವ ಮಡಕೆ.. ವಿಶಿಷ್ಟ ರೀತಿಯಲ್ಲಿ ಕಾಣುತ್ತವೆ.
ಅಂದ ಹಾಗೆ ಖರ್ಚು ಮಾಡುವುದರಲ್ಲಿ ಧಾರಾಳತನ ಮೆರೆಯುವ ವಿರಳ ನಿರ್ಮಾಪಕ ರಮೇಶ್ ರೆಡ್ಡಿ ಯಾವುದೇ ಕೊರತೆ ಮಾಡದೆ ಹಾಡಿಗಾಗಿ ಎಲ್ಲವನ್ನು ಕೊಟ್ಟಿದ್ದಾರೆ ಮತ್ತು ತಮ್ಮ ಮೆಚ್ಚಿನ ಆ ಹಾಡನ್ನು ಪ್ರತಿ ದಿನವೂ ಕೇಳುತ್ತಿದ್ದಾರೆ.
ಜುಲೈ ಒಂದರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ. ಆದರೆ ಆ ಸಂದರ್ಭದಲ್ಲಿ ಕುಟುಂಬದ ಜೊತೆ ಹೊರಗಡೆ ಗಣೇಶ್ ಪ್ರಯಾಣ ಕೈಗೊಳ್ಳುವುದರ ಹಿನ್ನೆಲೆಯಲ್ಲಿ ಮುಂಚಿತವಾಗಿ ‘ಗಾಳಿಪಟ-2’ ತಂಡ ಬುಧವಾರ ಮಾಧ್ಯಮಗಳ ಮುಂದೆ ಬಂದಿತ್ತು.
‘ನಾನಾಡದ ಮಾತೆಲ್ಲವ ಕದ್ದಾಲಿಸು..
ಆದರೂ ನೀ ಹೇಳದೆ ನೀ ಒದ್ದಾಡಿಸು..’ ಎಂಬ ಹಾಡು ಕಿವಿ ಮನಸ್ಸು ಎರಡನ್ನೂ ತುಂಬುತ್ತದೆ ಮಾತ್ರವಲ್ಲ; ಹೃದಯದ ಸಂವೇದನೆಯನ್ನು ಹೆಚ್ಚಿಸುತ್ತದೆ..
ಮುಖ್ಯವಾಗಿ ಈ ಹಾಡು ಪರಿಸರ; ಸುಂದರ ಸೆಟ್ ಮತ್ತು ಪರಿಕರಗಳ ಮೂಲಕ ಮತ್ತೊಂದು ಜಗತ್ತಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ..
ಇದು ‘ಗಾಳಿಪಟ’ದಲ್ಲಿರುವ ‘ಮಿಂಚಾಗಿ ನೀನು ಬರಲು..’ ಹಾಡಿಗೆ ಸಮವಾಗುತ್ತದೆ ಎಂದು ನಾವು ನಂಬುವುದಿಲ್ಲ; ಆದರೆ ಅದನ್ನು ಮೀರಿದ ರೀತಿಯಲ್ಲಿಯೂ ಜನಪ್ರಿಯತೆ ಪಡೆಯ ಬಹುದು. ಏಕೆಂದರೆ ಕಾಯ್ಕಿಣಿ ಗೀತರಚನೆ, ಅರ್ಜುನ್ ಜನ್ಯ ಸಂಗೀತ, ಗಣೇಶ್ ಅವರ ನೈಜ ನಟನೆ ಇವೆಲ್ಲಾ ಮೇಳೈಸಿದ ಮೇಲೆ ಹಿಟ್ ಆಗದಿರಲು ಸಾಧ್ಯವೇ.. ನಮ್ಮ ನಿರ್ಮಾಪಕರಂತೂ ಪ್ರತಿ ದಿನವೂ ಕೇಳುತ್ತಿದ್ದಾರೆ. ಅಂದ ಮೇಲೆ ಅದರ ಜನಪ್ರಿಯತೆಯನ್ನು ಊಹಿಸಿಕೊಳ್ಳಿ ಎಂದು ಎದುರಿಗಿದ್ದವರಿಗೆ ಸವಾಲು ಹಾಕಿದರು ಯೋಗರಾಜ್ ಭಟ್.
ನಾನು ಮತ್ತು ನನ್ನ ಮಗಳು ಪ್ರತಿ ದಿನವೂ ಈ ಹಾಡು ಕೇಳುವಾಗ ಥ್ರಿಲ್ ಆಗುತ್ತದೆ. ಇನ್ನು ಪಡ್ಡೆ ಹುಡುಗರಿಗೆ ಹೇಗೆಲ್ಲಾ ಇಷ್ಟ ಆಗಬಹುದು ಎಂಬುದು ಊಹಾತೀತ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.
ಗೋಲ್ಡನ್ ಸ್ಟಾರ್ ಗಣೇಶ್ ಬರ್ತಡೆಯ ಮೂಡ್ ನಲ್ಲಿಯೇ ಇದ್ದರು. ಅಭಿಮಾನಿಗಳು ಮನೆಯ ಬಳಿ ಅಥವಾ ಎಲ್ಲಿಗೂ ಬರುವುದು ಬೇಡ. ಈ ಬಾರಿ ನಾನು ಊರಿನಲ್ಲಿ ಇರುವುದಿಲ್ಲ. ಬೇರೆ ಬೇರೆ ಊರುಗಳಿಂದ ಅನಗತ್ಯ ಪ್ರಯಾಣ ಮಾಡಿ ಖರ್ಚು ಮಾಡಬೇಡಿ ಎಂದು ಮನವಿ ಮಾಡಿಕೊಂಡರು.
ಇನ್ನು ಹಾಡಿನ ವಿಷಯಕ್ಕೆ ಬಂದಾಗ ಈ ಭಟ್ಟರು ನನ್ನ ಮೇಲೆ ರೋಮ್ಯಾಂಟಿಕ್ ವಿಷಯಗಳನ್ನು ಹೇರಿ ತಮ್ಮ ಆಸೆಗಳನ್ನು ತೀರಿಸಿಕೊಳ್ಳುತ್ತಾರೆ. ಸೆಟ್ ನಲ್ಲಿ ಅವರ ಒಳಗೊಳ್ಳುವಿಕೆ ಏನು ಎಂಬುದು ನನಗೆ ಮಾತ್ರ ಗೊತ್ತು ಎಂದು ಚಟಾಕಿ ಹಾರಿಸಿದರು.
ಛಾಯಾಗ್ರಾಹಕ ಸಂತೋಷ್ ಕುಮಾರ್ ಪಾತಾಜೆ, ಹಾಡಿನ ಚಿತ್ರೀಕರಣದ ಸಾಹಸಗಳ ಬಗ್ಗೆ ಹೇಳಿದರು.
ಸೋನು ನಿಗಮ್ ಅವರ ಕಂಠ ಸಿರಿಯ ಬಗ್ಗೆ ಹೊಗಳಿಕೆಗಳು ಬಂದವು. ಜಯಂತ್ ಕಾಯ್ಕಿಣಿ ವೀಡಿಯೋ ಬೈಟ್ ಮೂಲಕ ಭಟ್ಟರ ಹಾಗೂ ಚಿತ್ರತಂಡದ ಬಾಂಧವ್ಯಗಳನ್ನು ನೆನಪಿಸಿಕೊಂಡರು.