ಇದೇ ಶನಿವಾರ ಮತ್ತು ಭಾನುವಾರ ಅಂದರೆ ಮೇ 7 ಮತ್ತು 8ರಂದು ಡಾ.ವಿಷ್ಣುವರ್ಧನ್ ಸ್ಮರಣೆಯ ಯಜಮಾನ ಪ್ರೀಮಿಯರ್ ಲೀಗ್ (ವೈಪಿಎಲ್) ಪಂದ್ಯಗಳು ನಡೆಯಲಿವೆ..
ಈಗಿನ ಕುತೂಹಲದ ಐಪಿಎಲ್ ಹಂಗಾಮದ ನಡುವೆ ವೈಪಿಎಲ್ ಪಂದ್ಯಗಳು ನಡೆಯುತ್ತಿರುವುದು ವಿಶೇಷವಾಗಿದೆ. ಕೆಪಿಎಲ್ (ಕರ್ನಾಟಕ ಪ್ರೀಮಿಯರ್ ಲೀಗ್) ಗೊತ್ತು ಮತ್ತು ಸಿಸಿಎಲ್ (ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಸಹ ಗೊತ್ತಿದೆ. ಆದರೆ ಇದು ಯಾವುದು ವೈಪಿಎಲ್ ಎಂಬ ಪ್ರಶ್ನೆ ಸಹಜವಾಗಿದ್ದರೆ ಉತ್ತರ ಯಜಮಾನ ಪ್ರೀಮಿಯರ್ ಲೀಗ್ ಆಗಿರುತ್ತದೆ.
ವಿಷ್ಣುಸೇನಾ ಸಮಿತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಇದೇ 7 ಮತ್ತು 8ರಂದು ನಡೆಯಲಿರುವ ವೈಪಿಎಲ್ ಟೂರ್ನಿಮೆಂಟ್ ಗಾಗಿ ವಿಷ್ಣುಸೇನಾ ಸಮಿತಿ ಬುಧವಾರ ಥೀಮ್ ಸಾಂಗ್ ಬಿಡುಗಡೆಗೊಳಿಸಿತು.
ಥೀಮ್ ಸಾಂಗ್ ಗೆ ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದು, ಹೇಮಂತ್ ಜೋಯಿಸ್ ಸಂಗೀತವಿದೆ. ಚೇತನ್ ನಾಯ್ಕ್ ಹಾಡಿದ್ದಾರೆ.
ಈ ಪ್ರೀಮಿಯರ್ ಲೀಗ್ ಜವಾಬ್ದಾರಿಯನ್ನು ಬೆಂಗಳೂರು ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ಯದುನಂದನ್ ಗೌಡ , ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಆನಂದ್ ವಹಿಸಿಕೊಂಡಿದ್ದಾರೆ. ಕ್ರಿಕೆಟ್ ಎಂಬುದನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸಿದವರು ಡಾ.ವಿಷ್ಣು ವರ್ಧನ್. ಅವರಿಗೆ ಕ್ರಿಕೆಟ್ ಮೇಲೆ ಅಪಾರ ಒಲವು. ಕ್ರಿಕೆಟ್ ಆಡಿ ದಂತಕಥೆಯಾದ ಅನೇಕರ ಜೊತೆ ವಿಷ್ಣುದಾದಗೆ ಸಂಪರ್ಕವಿತ್ತು.
ನಾಗರಹಾವು ಕ್ರಿಕೆಟ್ ಟೂರ್ನಮೆಂಟ್ ಮಾಡಿದಾಗ ಕಪಿಲ್ ದೇವ್ ಸಹ ಭಾಗಿಯಾಗಿ ಗಮನ ಸೆಳೆದಿದ್ದರು. ಅನೇಕ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ಯಜಮಾನ ಪ್ರೀಮಿಯರ್ ಲೀಗ್ ಸಹಾಯವಾಗಲಿದೆ ಎಂದರು ವೀರಕಪುತ್ರ ಶ್ರೀನಿವಾಸ್.
ಸುಮಾರು 12 ತಂಡಗಳು ವೈಪಿಎಲ್ ಲೀಗ್ ನಲ್ಲಿ ಭಾಗಿಯಾಗಲಿವೆ. ಸಿನಿಮಾ ಉದ್ಯಮದ ಜನರ ಜೊತೆಗೆ ಅಭಿಮಾನಿಗಳು ಸಹ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಹಿಂದೆ ಸ್ನೇಹಲೋಕ ಕೂಡ ಕ್ರಿಕೆಟ್ ಪದ್ಯಗಳನ್ನು ಆಯೋಜಿಸಿದ ಸಂದರ್ಭಗಳನ್ನು ಅವರು ಮೆಲುಕು ಹಾಕಿದರು.