ಸುಮಾರು ನಲವತ್ತೆಂಟು ವರ್ಷ ಸಾಂಸ್ಕೃತಿಕ ಜಗತ್ತಿನಲ್ಲಿ ಕೀರ್ತಿ ಪತಾಕೆ ಹಾರಿಸಿರುವ ಲಹರಿ ಮ್ಯೂಜಿಕ್ ಸಂಸ್ಥೆಗೆ ಈಗ ಹೊಗಳಿಕೆಯ ಮಹಾಪೂರ..
ಸ್ವತಃ ಮುಖ್ಯಮಂತ್ರಿಗಳೇ ಸಂಸ್ಥೆಯ ಗುಣಗಾನ ಮಾಡಿದರು. ಸಂದರ್ಭ; ರಿಕ್ಕಿಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ..
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ವಿ.ರವಿಚಂದ್ರನ್, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಸಚಿವ ಸುಧಾಕರ್, ಲಹರಿಯ ಮನೋಹರ್ ನಾಯ್ಡು, ಲಹರಿ ವೇಲು ಹೀಗೆ ಆ ಸಂತೋಷಕೂಟದಲ್ಲಿ ಗಣ್ಯರ ಸಾಲು ಸಾಲು..
ರಿಕ್ಕಿಕೇಜ್ ಅವರ ‘ಡಿವೈನ್ ಟೈಡ್’ ಆಲ್ಬಂಗೆ ಜಾಗತಿಕ ಮಟ್ಟದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ದಕ್ಕಿದ್ದು ಇತಿಹಾಸ. ಅದೂ ಅವರಿಗೆ ಎರಡನೇ ಬಾರಿಗೆ ಗ್ರ್ಯಾಮಿ ಬಂದಿದೆ ಎಂಬುದು ಹೆಗ್ಗಳಿಕೆ. ಈ ಡಿವೈನ್ ಟೈಡ್ ಹೊರತಂದಿರುವುದು ಲಹರಿ ಸಂಸ್ಥೆ.. ಹಾಗಾಗಿ ಖುಷಿ ಹೆಚ್ಚಾಗಿತ್ತು. ಅದೇ ಖುಷಿಯಲ್ಲಿ ನಡೆದ ಸಂತೋಷ ಕೂಟ ಅದು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾರಂಭದಲ್ಲಿ ಲೀಲಾಜಾಲವಾಗಿ ಕಲಾವಿದರ ಜೊತೆ ಬೆರೆತ್ತಿದ್ದು ವಿಶೇಷವಾಗಿತ್ತು. ಕನ್ನಡದ ನೆಲದಲ್ಲಿ ಉತ್ಕೃಷ್ಟ ಸಾಧನೆ ಮಾಡುತ್ತಿರುವ ಲಹರಿ ಸಂಸ್ಥೆಯ ಗುಣಗಾನ ಇತರ ಕಲಾವಿದರಿಂದಲೂ ನಡೆಯಿತು.