ರೆಬೆಲ್ ಸ್ಟಾರ್ ಅಂಬರೀಷ್ ಅವರ ಸಹೋದರಿಯ ಪುತ್ರ ಈಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೆಸರು ಅಭಿಷೇಕ್ ಸಿ.ಕೆ
ಚಿತ್ರದ ಹಾಡುಗಳು ಹಾಗೂ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್ ಹಾಗೂ ರಾಕ್ ಲೈನ್ ವೆಂಕಟೇಶ್ ಭಾಗವಹಿಸಿದ್ದು ವಿಶೇಷವಾಗಿತ್ತು.
ಅಂದ ಹಾಗೆ ‘ನಿರ್ಮುಕ್ತ’ ಎಂಬ ಈ ಚಿತ್ರವನ್ನು ನಿರ್ಮಾಣ ಮಾಡಿ ನಿರ್ದೇಶನ ಕೂಡ ಮಾಡಿರುವುದು ಮಹಿಳೆಯರು ಎಂಬುದು ಗಮನ ಸೆಳೆದ ವಿಚಾರ.
ರಮ್ಯಾ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ ರೂಪಾಸ್ವಾಮಿ ಅವರ ಜೊತೆಗೂಡಿ ನಿರ್ಮಾಣವನ್ನೂ ಮಾಡಿದ್ದಾರೆ.
ಚಿತ್ರದ ಟೀಸರ್ ಬಿಡುಗಡೆ ಮಾಡಿದ ಸಂಸದೆ ಸುಮಲತಾ ಅವರು ಕನ್ನಡ ಚಿತ್ರರಂಗದಲ್ಲಿ ಈಗ ಉತ್ತಮ ಬೆಳವಣಿಗೆ. ಬೆರಳೆಣಿಕೆಯಷ್ಟಿದ್ದ ನಿರ್ದೇಶಕಿಯರ ಸಂಖ್ಯೆ ಹೆಚ್ಚುತ್ತಿದೆ. ಸಾಕಷ್ಟು ಮಹಿಳೆಯರು ನಿರ್ದೇಶನದತ್ತ ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಇದು ನಮ್ಮ ಕುಟುಂಬದ ಕಾರ್ಯಕ್ರಮ. ಅಭಿಷೇಕ್ ಸಿ.ಕೆ ಅಂಬರೀಷ್ ಅವರ ತಂಗಿ ರಜನಿ ಅವರ ಪುತ್ರ. ಚಿತ್ರರಂಗದಲ್ಲಿ ಅವರೂ ಬೆಳೆದು ಸಾಧನೆ ಮಾಡಲಿ ಎಂದು ಇದೇ ವೇಳೆ ಶುಭ ಹಾರೈಸಿದರು.
ಅಭಿಷೇಕ್ ಸಿ.ಕೆ ನನ್ನ ಸಹೋದರನಂತೆ; ಅವರಿಗೆ ಶುಭವಾಗಲಿ ಎಂದು ಅಭಿಷೇಕ್ ಅಂಬರೀಷ್ ಹಾರೈಸಿದರು. ಚಿತ್ರತಂಡಕ್ಕೆ ಶುಭಕೋರಿದ ರಾಕ್ ಲೈನ್ ವೆಂಕಟೇಶ್, ಅಂಬರೀಷ್ ಅವರನ್ನು ನೆನೆದು ಭಾವುಕರಾದರು.
ಮೂಲತಃ ವೈದ್ಯರಾಗಿರುವ ಡಾ||ರೂಪಾಸ್ವಾಮಿ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.
ಇದೊಂದು ಮೆಡಿಕಲ್ ಕಾಲೇಜ್ ನಲ್ಲಿ ನಡೆಯುವ ಕಥೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ ಎಂದರು ನಿರ್ದೇಶಕಿ ರಮ್ಯಾ ಶ್ರೀನಿವಾಸ್. ಈ ಚಿತ್ರ ನಿರ್ದೇಶನ ಮಾಡಲು ಪತಿ ಶ್ರೀನಿವಾಸ್ ಸಹಕಾರವೇ ಕಾರಣ ಎಂಬುದನ್ನು ನೆನೆಯುತ್ತಾ ಇಡೀ ತಂಡಕ್ಕೆ ಧನ್ಯವಾದ ಎಂದರು.
ಅಭಿಷೇಕ್ ಗೆ ಜೋಡಿಯಾಗಿ ನವ್ಯ ಪೂಜಾರಿ ನಟಿಸಿದ್ದಾರೆ. ಹಾಡು ಬರೆದಿರುವ ಸ್ವಾಮಿ ಹಾಗೂ ಸಂಗೀತ ನಿರ್ದೇಶಕ ಸಾಮ್ರಾಟ್ ಹಾಜರಿದ್ದರು.