ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲಂಸ್ ನ ಹೊಸಪರ್ವ ಆರಂಭವಾಗಿದೆ. ಈಗಾಗಲೇ ಕೆಜಿಎಫ್ ಸರಣಿಗಳ ಯಶಸ್ಸು ಮತ್ತು ಆ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಮಾಡಿರುವ ದಾಖಲೆಗಳ ಹಿನ್ನೆಲೆಯಲ್ಲಿ ಖುಷಿಯಿಂದ ಬೀಗುತ್ತಿರುವ ಸಂಸ್ಥೆ ಬುಧವಾರ ಹೊಸ ಯುಗದ ಮುನ್ನುಡಿ ಬರೆದಿದೆ.
ಈಗ ಈ ಸಂಸ್ಥೆಯಿಂದ ಹೊಸ ಚಿತ್ರಗಳ ನಿರ್ಮಾಣದ ಸರಣಿ ಆರಂಭವಾಗಿದೆ. ಮೊದಲಿಗೆ ದೊಡ್ಮನೆಯ ನಾಲ್ಕನೇ ತಲೆಮಾರಿನ ಕುಡಿಯನ್ನು ಪರಿಚಯಿಸಲು ಸಂಸ್ಥೆ ಮುಂದಾಗಿದೆ.
ರಾಜ್ ವಂಶದ ಕುಡಿ ಯುವ ರಾಜ್ ಕುಮಾರ್ ನಟನೆಯ ನೂತನ ಸಿನಿಮಾ ಆರಂಭಿಸುವುದಾಗಿ ಸಂಸ್ಥೆ ಟ್ವೀಟ್ ಮೂಲಕ ಬುಧವಾರ ಜಾಹಿರುಗೊಳಿಸಿದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಈ ಚಿತ್ರದ ನಿರ್ದೇಶಕರು.
ರಾಜ್ ಕುಟುಂಬದ ಬಗ್ಗೆ ಮೊದಲಿನಿಂದಲೂ ಗೌರವಾದರಗಳನ್ನು ಹೊಂದಿರುವ ನಿರ್ಮಾಪಕ ವಿಜಯ್ ಕಿರಗಂದೂರ್ ಆ ಕುಟುಂಬದ ಸದಸ್ಯರ ಬಗ್ಗೆ ಅಪಾರ ಪ್ರೀತಿ. ಏಕೆಂದರೆ ಹೊಂಬಾಳೆ ರಾಜ್ ಕುಟುಂಬದ ಸಾಂಗತ್ಯದಿಂದಲೇ ಸಂಸ್ಥೆಯ ಮೊದಲ ಚಿತ್ರವಾಗಿ ಪುನೀತ್ ರಾಜ್ ಕುಮಾರ್ ಅವರ ‘ನಿನ್ನಿಂದಲೇ’ ನಿರ್ಮಾಣವಾಗಿತ್ತು. ನಂತರ ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ಅವರು ಅಭಿನಯಿಸಿದ್ದ ‘ರಾಜಕುಮಾರ’ ಚಿತ್ರ ಹಲವು ದಾಖಲೆಗಳನ್ನೇ ನಿರ್ಮಾಣ ಮಾಡಿತ್ತು. ಹಾಗೆಯೇ ‘ಯುವರತ್ನ’ ಚಿತ್ರ ಸಹ ಎಲ್ಲರ ಮನ ಗೆದ್ದಿತ್ತು. ಸಂತೋಷ್ ಆನಂದರಾಮ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಒಡನಾಟದಲ್ಲಿ ಮತ್ತೊಂದು ಹೊಸ ಚಿತ್ರ ಆರಂಭಕ್ಕೆ ಸಿದ್ದತೆ ನಡೆದಿತ್ತು. ಆದರೆ ಪುನೀತ್ ಕಾಲನ ಕರೆಯಿಂದ ಎಲ್ಲರನ್ನು ಬಿಟ್ಟು ಹೋದರು. ಈಗ ಅದೇ ಕುಟುಂಬದ ಯುವ ರಾಜ್ ಕುಮಾರ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಾಹಸ ಪ್ರಧಾನ ಚಿತ್ರವನ್ನು ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ. ಸಂತೋಷ್ ಆನಂದರಾಮ್ ಅವರೇ ನಿರ್ದೇಶಿಸುತ್ತಿದ್ದಾರೆ ಎಂಬುದು ಹೊಸ ಮಾಹಿತಿ.
ಕನ್ನಡ ಚಿತ್ರರಂಗದಲ್ಲಿ ಕೋಟಿ ಕೋಟಿ ಗಳಿಕೆಯ ಹೊಸ ಸಾಧ್ಯತೆಗಳನ್ನು ತೆರೆದು ತೋರಿದ ಧೀರ ಸಂಸ್ಥೆಯಾಗಿ ಹೊಂಬಾಳೆ ಮೆಚ್ಚುಗೆ ಪಡೆಯುತ್ತಿದೆ. ಆ ಮೂಲಕ ವಿಜಯ್ ಕಿರಗಂದೂರು ಕನ್ನಡದ ನಿರ್ಮಾಪಕ ಸಾಲಿನಲ್ಲಿ ಅನನ್ಯ ಸಾಧಕರಾಗಿ ಮಿಂಚುತ್ತಿದ್ದಾರೆ.