Snehapriya.com

June 9, 2025

ಕೆಜಿಎಫ್ ಕನ್ನಡಿಗರ ಹೆಮ್ಮೆ ಮತ್ತು ಚಿತ್ರರಂಗದ ಕನಸುಗಳ ಸಾಕಾರ

Social Share :

ಅದೊಂದು ಕನಸಾಗಿತ್ತು.. ಅದೀಗ ಸಾಕಾರಗೊಂಡಿದೆ..

ಹೌದು ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡ ಬೇಕು.. ನೂರಾರು ಕೋಟಿ ವ್ಯವಹಾರ ಮಾಡಬೇಕು.. ನಾವು ವಿಶ್ವದ ಯಾವುದೇ ಚಿತ್ರರಂಗಕ್ಕೂ ಕಡಿಮೆ ಇಲ್ಲ ಎಂದು ಸಾರಬೇಕು..

ಇದೆಲ್ಲಾ ಕನಸೋ ಏನೋ ಎಂಬಂತೆ ಈಗ ಅದು ನಿಜವಾಗಿದೆ. ಅದೇ ಆ ಒಂದು ಚಿತ್ರದಿಂದ..

ಅದೇ ಕೆಜಿಎಫ್2..!

ರಾಷ್ಟ್ರೀಯ ವಾಹಿನಿಗಳಲ್ಲಿ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಮತ್ತು ನಿರೂಪಕರೂ ಆಗಿರುವ ಕರಣ್ ಜೋಹರ್ ಒಂದು ದಿನ ಕನ್ನಡದ ಚಿತ್ರವೊಂದಕ್ಕೆ ನಿರೂಪಣೆ ಮಾಡಲು ಬರುವರೆಂಬುದು ಯಾರಿಗೆ ತಿಳಿದಿತ್ತು.

ರವೀನಾ ಟಂಡನ್, ಸಂಜಯ್ ದತ್ ಮೊದಲಾದ ಗಣ್ಯರು ಕನ್ನಡದ ನೆಲದಲ್ಲಿ ಕನ್ನಡ ಚಿತ್ರದ ಅಸಾಮಾನ್ಯ ಸಾಧ್ಯತೆಗಳನ್ನು ಹೊಗಳುವರೆಂಬುದನ್ನು ಯಾರು ಊಹಿಸಿದ್ದರು..

ಕನ್ನಡದ ಅಸಾಮಾನ್ಯ ನಿರ್ದೇಶಕರಾಗಿ ಹೊಮ್ಮಿರುವ ಪ್ರಶಾಂತ್ ನೀಲ್, ಅವರ ಕನಸುಗಳಿಗೆ ಹಣವನ್ನು ನೀರಿನಂತೆ ಹರಿಸಿದ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಅಪ್ಪಟ ಕನ್ನಡದ ಪ್ರತಿಭೆಯಾಗಿ ಸಿಕ್ಕಿದ ರಾಂಕಿಂಗ್ ಸ್ಟಾರ್ ಯಶ್ ಇವರುಗಳ ಅನುಪಮ ಕನಸುಗಳು ತೆರೆಯ ಮೇಲೆ ಸಾಕಾರಗೊಳಿಸುವ ಒಂದು ಝಲಕ್ ನ ದಿನವದು.

ಕಳೆದ ಭಾನುವಾರ (ಮಾರ್ಚ್ 27) ಸಂಜೆ ಐದು ರಾಜ್ಯಗಳ ಸಿನಿಮಾ ಪತ್ರಕರ್ತರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆದ ‘ಕೆಜಿಎಫ್2’ನ ಅದ್ದೂರಿ ಟೀಸರ್ ಬಿಡುಗಡೆಯನ್ನು ಇಡೀ ಭಾರತೀಯ ಚಿತ್ರರಂಗ ಅಚ್ಚರಿಯ ಕಣ್ಣುಗಳಿಂದಲೇ ನೋಡಿತು..

ಅದಕ್ಕಿಂತ ಮುಖ್ಯವಾಗಿ ಚಿತ್ರದ ಟೀಸರ್ ಬಿಡುಗಡೆ ಕಂಡ ತಕ್ಷಣವೇ ಕೋಟಿ ಕೋಟಿ ವೀಕ್ಷಕರನ್ನು ತಲುಪಿತು. ಅದು ಯಾವ ಹಾಲಿವುಡ್ ಚಿತ್ರವನ್ನೂ ಸರಿಗಟ್ಟುವಂತೆ ಇತ್ತು ಎಂಬುದು ಮಾತ್ರ ವಿಸ್ಮಯದ ವಿಷಯವೋ ಅಥವಾ ನಮ್ಮಲ್ಲಿ ಅಂತಹ ನಿರ್ದೇಶಕರು, ತಂತ್ರಜ್ಞರು ಇದ್ದಾರೋ ಎಂಬುದು ಅಚ್ಚರಿಯೋ ತಿಳಿಯದಾಯಿತು.

ಕನ್ನಡದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಟೀಸರ್ ಬಿಡುಗಡೆಗೊಳಿಸಿದರು.. ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಅಶ್ವಥ್ ನಾರಾಯಣ್ ಚಿತ್ರದ ಗುರಿ ಮತ್ತು ಆಶಯಗಳನ್ನು ಕೊಂಡಾಡಿದರು.

ಚಿತ್ರದ ವಿತರಣೆ ಪಡೆದು ಸಹಕಾರ ನೀಡುತ್ತಿರುವ ಸಾಯಿಕೊರಪಾಟಿ, ಪೃಥ್ವಿರಾಜ್, ಪ್ರಭು, ಫರಾನ್ ಅಕ್ತಾರ್ ಮೊದಲಾದವರು ಚಿತ್ರದ ಭಾಗವಾಗಿರುವುದೇ ಹೆಮ್ಮೆಯ ವಿಷಯ ಎಂದರು.

ಕೊನೆಯಲ್ಲಿ ಮಾಧ್ಯಮಗಳಿಗೆ ಪ್ರಶಾಂತ್ ನೀಲ್, ವಿಜಯ ಕಿರಗಂದೂರು, ಯಶ್, ಸಂಜಯ್ ದತ್ ಹಾಗೂ ರವೀನ ಟಂಡನ್ ಉತ್ತರ ಕೊಟ್ಟರು. ಅನುಶ್ರೀ ನಿರೂಪಕಿಯಾಗಿ ಬೆಂಬಲ ನೀಡಿದರು.

ಮಾತನಾಡುವಾಗ ಯಶ್ ತಮ್ಮ ಕನಸು ಚಿಕ್ಕದಲ್ಲ ಎಂಬುದನ್ನು ನಿರೂಪಿಸಿದರು ‘ಇಡೀ ವಿಶ್ವ ನನ್ನ ನೆಲೆ’ ಎಂದಿದ್ದು ಗಮನ ಸೆಳೆಯಿತು..

🖋ಸ್ನೇಹಪ್ರಿಯ ನಾಗರಾಜ್

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *