ಜೇಮ್ಸ್ ಚಿತ್ರದ ಯಶಸ್ಸಿನ ಪ್ರಚಾರ ಸಭೆಯಲ್ಲಿ ನೋವು ಮತ್ತು ನಲಿವು ಇದ್ದವು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮ ನಡುವೆ ಇಲ್ಲ ಎಂಬುದು ಅತ್ಯಂತ ನೋವಿನ ಸಂಗತಿ. ಹಾಗೆಯೇ ಅವರ ಚಿತ್ರ ಎಲ್ಲಾ ದಾಖಲೆಗಳನ್ನು ಮುರಿತು ನೂರು ಕೋಟಿ ಕ್ಲಬ್ ಸೇರಿತು ಎಂಬುದು ನಲಿವಿನ ವಿಷಯವಾಗಿತ್ತು.
ಮೊದಲಿಗೆ ರಂಗಾಯಣ ರಘು ಮಾತನಾಡುತ್ತಿದ್ದಾಗ ಪ್ರತಿಯೊಬ್ಬರ ಕಣ್ಣಾಲಿಗಳು ತುಂಬಿ ಬಂದವು. ದೊಡ್ಮನೆ ಔದಾರ್ಯ ಕೊಂಡಾಡಿದ ರಂಗಾಯಣ ರಘು, ಶಿವಣ್ಣ ಹೆಚ್ಚು ಧೈರ್ಯ ತಂದುಕೊಂಡು ಕನ್ನಡ ಚಿತ್ರರಂಗವನ್ನು ಎಂದಿನಂತೆ ಮುನ್ನಡೆಸುವಂತೆ ಕೋರಿಕೊಂಡರು.
ಅಪ್ಪು ಜನ ಮಾನಸದಲ್ಲಿ ಉಳಿದು ಹೋಗಿದ್ದಾರೆ. ಅವರ ನೆನಪು ಸದಾ ಅಮರ. ಆ ನೆನಪಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಹೋಗೋಣ ಎಂದರು.
ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಮ್ಮ ನಿರೀಕ್ಷೆ ಮೀರಿ ಗಳಿಕೆಯಲ್ಲಿ ದಾಖಲೆ ಮೆರೆದಿರುವುದು ಖುಷಿಕೊಟ್ಟಿದೆ ಎಂದರು. ನಿರ್ದೇಶಕ ಚೇತನ್ ಕುಮಾರ್ ಮತ್ತೆ ಭಾವುಕರಾಗಿ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಅನು ಪ್ರಭಾಕರ್, ತಿಲಕ್ ಹಾಗೂ ಇತರ ಕಲಾವಿದರು, ತಂತ್ರಜ್ಞರು ಅಪ್ಪು ಔದಾರ್ಯ ಕೊಂಡಾಡಿದರು.
ಶಿವಣ್ಣ ಮಾತನಾಡುವಾಗಲೂ ಭಾವುಕತೆ ಆವರಿಸಿತ್ತು. ಅಪ್ಪು ಬಿಟ್ಟು ಹೋದ ಎಂಬುದನ್ನು ಯಾರಿಂದಲೂ ಜೀರ್ಣಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಜೂನಿಯರ್ ಎನ್.ಟಿ.ಆರ್ ಹಗ್ ಹೇಳಿದಂತೆ ಅಪ್ಪುವನ್ನು ನಾವು ಸೆಲೆಬ್ರೆಟ್ ಮಾಡಬೇಕು ಎಂದರು.