ಮಾಯಾಮೃಗ ಎಂದ ತಕ್ಷಣವೇ ಒಂದು ಸಿರಿಯಲ್ ನೆನಪಾಗುತ್ತದೆ. ಟಿ.ಎನ್.ಸೀತಾರಾಮ್ ಕೂಡ ನೆನಪಿಗೆ ಬರುತ್ತಾರೆ. ಆದರೆ ಇಲ್ಲಿ ಮಾಯಾಮೃಗವನ್ನು ನೆನಪಿಸಿದವರು ನಟ, ನಿರ್ದೇಶಕ ಯತಿರಾಜ್.
ಯತಿರಾಜ್ ಈಗಾಗಲೇ ನಿರ್ದೇಶನದ ಕಡೆಗೂ ಹೆಚ್ಚು ವಾಲಿದ್ದಾರೆ. ಜೊತೆಗೆ ನಟನೆಯೂ ಬಿಡದ ನಂಟು. ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಾ ನಿರ್ದೇಶನ ಕೂಡ ಮಾಡುತ್ತಿರುವುದು ವಿಶೇಷ. ಈಚೆಗೆ ಲವ್ ಮಾಕ್ ಟೈಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ‘ಮಾಯಾಮೃಗ’ ಚಿತ್ರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ರಾಮಾಯಣದಲ್ಲಿ ರಾಕ್ಷಸ ಮಾರೀಚ ಜಿಂಕೆಯಾಗುವ ಮಾಯಮೃಗ ಪ್ರಸಂಗ ಬರುತ್ತದೆ. ಗಂಡನಿಗಾಗಿ ಅಷ್ಟು ವೈಭೋಗಗಳನ್ನು ತ್ಯಾಗ ಮಾಡಿ ಬಂದ ಮಹಾ ಪತಿವ್ರತೆ ಸೀತಾದೇವಿ. ಕಾಡಿನಲ್ಲಿ ಮಾಯಾಮೃಗಕ್ಕೆ ಆಸೆಪಟ್ಟಿದ್ದು, ಅದನ್ನು ಬೆನ್ನಟ್ಟಿ ರಾಮ ಹೋಗಿದ್ದು, ಇದರಲ್ಲಿ ಏನೋ ಇದೆ ಎಂದು ಲಕ್ಷ್ಮಣ ಹೇಳಿದ್ದು. ಕೊನೆಗೆ ಅದು ಮಾರೀಚ ಎಂದು ತಿಳಿದ್ದಿದ್ದು, ಈ ವಿಷಯವನ್ನು ಈಗಿನ ಸಂದರ್ಭಕ್ಕೆ ತಕ್ಕ ಹಾಗೆ ಹೊಂದುವಂತೆ ಕಥೆ ಸಿದ್ದ ಮಾಡಿಕೊಳ್ಳಲಾಗಿದೆ. ಈ ಹಿಂದೆ ಕನ್ನಡ ಸೇರಿದಂತೆ ಇತರ ಭಾಗಗಳಲ್ಲಿ ತೀರ ಅಪರೂಪ ಎನ್ನಬಹುದಾದ ಕೆಲವು ಸಿನಿಮಾಗಳು ಬಂದಿದ್ದವು. ಗಂಡು ಹೆಣ್ಣಿನ ನಡುವಣ ವಯಸ್ಸಿನ ಅಂತರವಿರುವ ಸಿನಿಮಾ. ಆ ಪಾತ್ರದ ಬಯಕೆ, ನಿರೀಕ್ಷೆ ಏನು? ನನ್ನ ಪಾತ್ರದ ಬಯಕೆ ನಿರೀಕ್ಷೆ ಏನು? ಕೊನೆಗೆ ಯಾವ ಹಂತ ತಲುಪುತ್ತದೆ ಎಂಬುದೇ ಕಥಾಹಂದರ. ಈ ಯುಗಾದಿ ಕಳೆದ ಮೇಲೆ ಚಿತ್ರೀಕರಣ ಆರಂಭವಾಗುತ್ತಿದೆ ಎಂಬ ಮಾಹಿತಿ ನೀಡುತ್ತಾ ಹೋದರು ಯತಿರಾಜ್.
ಜಯಲಕ್ಷ್ಮಿ ನಿರ್ಮಾಣ ಮಾಡುತ್ತಿದ್ದು, ‘ಸೀತಮ್ಮನ ಮಗ” ಚಿತ್ರದ ಮುಖ್ಯ ಪಾತ್ರದಲ್ಲಿದ್ದ ಸೋನು ಸಾಗರ ಈ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚಾಲನೆ ನೀಡಿದ ಡಾರ್ಲಿಂಗ್ ಕೃಷ್ಣ ಅವರಿಗೆ ತುಂಬು ಹೃದಯದ ಕೃತಜ್ಞತೆ ಗಳು ಎಂದರು.
ಸೋನುಸಾಗರ, ಅರವಿಂದ ರಾವ್. ನಿರ್ಮಾಪಕಿ ಜಯಲಕ್ಷ್ಮಿ, ಸಂಗೀತ ನಿರ್ದೇಶಕ ವಿನು ಮನಸ್ಸು, ಸಹ ನಿರ್ದೇಶಕ ಶಶಿ ಮಾತನಾಡಿದರು.