ಬದುಕಿನಲ್ಲಿ ಅನನ್ಯ ಸಾಧನೆ ಮಾಡಿದರೂ ಕೆಲವರು ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿ ಸಾವಿನಲ್ಲೂ ಬದುಕುತ್ತಾರೆ. ಅಂತಹವರ ಸಾಲಿಗೆ ರಾಷ್ಷ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಖಂಡಿತಾ ಸೇರುತ್ತಾರೆ.
ಸಂಚಾರಿ ವಿಜಯ್ ಅಸಮಾನ್ಯ ನಟ ಎಂಬುದನ್ನು ಸಾವಿನ ನಂತರವೂ ನಿರೂಪಿಸುತ್ತಲೇ ನಡೆದಿದ್ದು.. ಈ ವಾರ ತೆರೆಗೆ ಬರುತ್ತಿರುವ ತಲೆದಂಡ ಚಿತ್ರವು ಅದಕ್ಕೆ ಇನ್ನೊಂದು ನಿದರ್ಶನವಾಗುತ್ತಿದೆ.
ಈಚೆಗೆ ನಡೆದ ಪ್ರಚಾರ ಸಭೆಯಲ್ಲಿ ನಿರ್ದೇಶಕ ಪ್ರವೀಣ್ ಕೃಪಾಕರ್ ಸುದೀರ್ಘವಾಗಿ ಮಾತನಾಡಿ ವಿಜಯ್ ಗುಣಗಾನ ಮಾಡಿದರು. ಸಾಕಷ್ಟು ವರ್ಷಗಳಿಂದ ಕನ್ನಡದ ಹಿರಿಯ ನಿರ್ದೇಶಕ ದ್ವಾರಕೀಶ್ ಸೇರಿದಂತೆ ಅನೇಕರ ಜೊತೆ ಕೆಲಸ ಮಾಡಿದ ಅನುಭವ. ಹಾಗಾಗಿ ಚಿತ್ರ ನಿರ್ದೇಶನದ ಆಸೆ ಇತ್ತು. ಆ ಆಸೆಗೆ ಪ್ರೋತ್ಸಾಹ ನೀಡಿದ್ದು ಪತ್ನಿ ಹೇಮಮಾಲಿನಿ. ಅವರೇ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಆ ನಂತರ ಗೆಳೆಯ ಅರುಣ್ ಕುಮಾರ್ ಬೆಂಬಲ ಸಿಕ್ಕಿತ್ತು. ಕೊರೋನ ಕಷ್ಟಗಳ ನಡುವೆ ನಮ್ಮ ಚಿತ್ರ ಮುಗಿಯಿತು. ಅರೆ ಬುದ್ದಿಮಾಂಧ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಹುಬ್ಬಲ್ಲಿನ ಹುಡುಗನಾಗಿ ಎಲ್ಲರ ಗಮನ ಸೆಳೆಯುತ್ತಾರೆ. ಸಾಯುವ ಮುನ್ನ ನಮ್ಮ ಚಿತ್ರದ ಡಬ್ಬಿಂಗ್ ಸಹ ವಿಜಯ್ ಮುಗಿಸಿದ್ದರು. ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಕಡಿಮೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಮುಖ್ಯ ಪಾತ್ರವಾದ ಸಾಕಿ ಪಾತ್ರದಲ್ಲಿ ಚೈತ್ರಾ ಆಚಾರ್, ವಿಜಯ್ ತಾಯಿಯಾಗಿ ಮಂಗಳ(ರಂಗಾಯಣ ರಘು ಮಡದಿ), ತಂದೆಯ ಪಾತ್ರದಲ್ಲಿ ರಮೇಶ್ ಪಂಡಿತ್, ಎಂ.ಎಲ್.ಎ ಆಗಿ ಮಂಡ್ಯ ರಮೇಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಿ.ಸುರೇಶ್ ಇದ್ದಾರೆ.
ವೇಗದ ಬದುಕಿನ ಹುಚ್ಚಾಟದಲ್ಲಿ ಪ್ರಕೃತಿ ಹೇಗೆ ಹಾಳಾಗುತ್ತದೆ ಎಂಬುದು ಕಥಾಹಂದರ. ಈವರೆಗೂ ಐದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಚಿತ್ರ ಪ್ರದರ್ಶನ ಕಂಡಿದೆ. ಭಾಷೆ ಬಾರದವರು ಸಹ ವಿಜಯ್ ಅಭಿನಯ ಕಂಡು ಬೆರಗಾಗುತ್ತಿದ್ದಾರೆ. ಹಲವು ದೊಡ್ಡ ದೊಡ್ಡ ಚಿತ್ರಗಳ ನಡುವೆ ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೆ ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಪ್ರವೀಣ್ ಕೃಪಾಕರ್.
ಚೈತ್ರಾ ಆಚಾರ್, ಮಂಗಳ, ರಮೇಶ್ ಪಂಡಿತ್, ಮಂಡ್ಯ ರಮೇಶ್ ಸಂಚಾರಿ ವಿಜಯ್ ನೆನೆದು ಭಾವುಕರಾದರು.
ನಿರ್ಮಾಪಕಿ ಹೇಮಮಾಲಿನಿ ಕೃಪಾಕರ್, ಸಂಗೀತ ನಿರ್ದೇಶಕ ಹರಿಕಾವ್ಯ ಹಾಗೂ ಸಂಕಲನಕಾರ ಬಿ.ಎಸ್.ಕೆಂಪರಾಜ್ ಚಿತ್ರದ ಬಗ್ಗೆ ಮಾತನಾಡಿದರು. ಅಶೋಕ್ ಕಶ್ಯಪ್ ಚಿತ್ರದ ಛಾಯಾಗ್ರಾಹಕ ಎಂಬ ವಿವರಗಳು ಬಂದವು.