ಇದು ಒಂದು ರೀತಿ ಭಾವುಕ ಸನ್ನಿವೇಶ..!
ಹೌದು ಇಡೀ ಚಿತ್ರತಂಡ ಮನಸ್ಸಿನಲ್ಲಿ ವೇದನೆಗಳನ್ನು ಬಚ್ಚಿಟ್ಟುಕೊಂಡು ಮಾತನಾಡಿತು. ಉಮ್ಮಳಿಸಿ ಬರುವ ದುಃಖವನ್ನು ತಡೆದು ಅನುಭವಗಳನ್ನು ಹೇಳಿಕೊಂಡಿತು..
ಅದು ‘ಜೇಮ್ಸ್’ ಪ್ರಚಾರ ಸಭೆ..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಟ್ಟು ಹೋಗಿರುವ ಪ್ರೀತಿ, ವಿಶ್ವಾಸ, ತ್ಯಾಗಮಹಿ ವ್ಯಕ್ತಿತ್ವ ಎಲ್ಲವೂ ಪ್ರಶಂಸೆಗೆ ಒಳಪಡುತ್ತಾ ಹೋಗುತ್ತಿರುವಾಗ ಅವರ ಕೊನೆಯ ಚಿತ್ರ ಬಿಡುಗಡೆ ಕಾಣುತ್ತಿದೆ. ಅದೂ ಅವರ ಹುಟ್ಟುಹಬ್ಬದ ದಿನ. ಆದರೆ ಯಾರಿಗೂ ಬಿಡುಗಡೆಯ ಸಂಭ್ರಮ ಎದುರಿಸದಂತಹ ಸಂದರ್ಭ. ಏಕೆಂದರೆ ಪ್ರೀತಿಯ ಅಪ್ಪು ಈಗ ಜೊತೆಗಿಲ್ಲ..!
ಭಾನುವಾರ ಸಂಜೆ (ಮಾರ್ಚ್ 6) ಸ್ಟಾರ್ ಹೊಟೇಲ್ ನಲ್ಲಿ ನಡೆದ ಪ್ತಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಅತ್ಯಂತ ಭಾವುಕರಾಗಿದ್ದರು. ಇಂತಹ ಸಂದರ್ಭ ಬರುತ್ತದೆ ಎಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ; ಅಪ್ಪು ಚಿಕ್ಕವನಾಗಿ ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದ; ಅವನಿಗೆ ನಾನು ಧ್ವನಿ ನೀಡಿದ್ದೇನೆ; ಇದು ಎಷ್ಟು ಸರಿ ಹೊಂದುವುದೋ ತಿಳಿದಿಲ್ಲ. ಆದರೆ ಒಬ್ಬ ನಟನ ಸಂವೇದನೆ ಅವನಿಗೆ ಮಾತ್ರ ತಿಳಿದಿರುತ್ತದೆ. ಅದರಲ್ಲೂ ಅಪ್ಪುಗೆ ಡಬ್ಬಿಂಗ್ ಮಾಡುವುದು ಸುಲಭವಲ್ಲ; ನಾನು ನನಗೆ ಡಬ್ಬಿಂಗ್ ಮಾಡಿಕೊಳ್ಳುವುದು ಕಷ್ಟವೇ ಅಲ್ಲ. ಅಪ್ಪು ಉತ್ಕೃಷ್ಟ ನಟ. ಅವನಿಗೆ ಡಬ್ ಮಾಡಿರುವೆ. ಇಂತಹ ಸಂದರ್ಭಗಳು ಯಾರಿಗೂ ಬರಬಾರದು ಎಂದು ಭಾವುಕರಾಗಿಯೇ ಹೇಳಿದರು ಶಿವಣ್ಣ.
ನಿರ್ದೇಶಕ ಚೇತನ್ ಕುಮಾರ್ ಅಪ್ಪು ಔದಾರ್ಯ ಕೊಂಡಾಡಿದರಲ್ಲದೆ; ಪ್ರತಿಯೊಬ್ಬ ತಂತ್ರಜ್ಞರ ಕೆಲಸವನ್ನು ಸ್ಮರಿಸಿದರು. ಶಿವಣ್ಣ ಹಿತೈಷಿಯಾಗಿ ನಿಂತು ಡಬ್ಬಿಂಗ್ ಮಾಡಿಕೊಟ್ಟಿದ್ದನ್ನು ಎಂದಿಗೂ ಮರೆಯಲಾರೆ ಎಂದರು.
ನಿರ್ಮಾಪಕ ಕಿಶೋರ್ ಪಾತಿಕೊಂಡ ಸಹ ಅಪ್ಪು ಚಿತ್ರಕ್ಕೆ ಸಹಕರಿಸಿದ ರೀತಿ ಮತ್ತು ಅಪರೂಪದ ವ್ಯಕ್ತಿತ್ವವನ್ನು ಕೊಂಡಾಡಿದರು. ಚಿತ್ರವು ಐದು ಭಾಷೆಗಳಲ್ಲಿ ದೇಶದ 4 ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆ ಕಾಣುತ್ತಿರುವುದು ಹೆಮ್ಮೆ ಎಂದರು.
ಸಾಹಸ ನಿರ್ದೇಶಕ ರವಿವರ್ಮ, ಚೇತನ್ ಡಿಸೋಜ, ಸಂಗೀತ ನಿರ್ದೇಶಕ ಚರಣ್ ರಾಜ್, ಕಲಾ ನಿರ್ದೇಶಕ ರವಿ ಸಂತೆಹಕ್ಲು, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಇನ್ನಿತರರು ಅಪ್ಪು ಅವರನ್ನು ಸ್ಮರಿಸುತ್ತಲೇ ಚಿತ್ರದ ತಾಂತ್ರಿಕ ವಿಷಯಗಳ ಬಗ್ಗೆ ಮಾತನಾಡಿದರು.