Snehapriya.com

June 8, 2025

ಜನಾರ್ಧನರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಅದ್ದೂರಿ ಸೇರ್ಪಡೆ

Social Share :

ರಾಜಕೀಯದಲ್ಲಿ ಹೆಸರು ಮಾಡಿರುವ ವ್ಯಕ್ತಿಗಳ ಮಕ್ಕಳು ಚಿತ್ರರಂಗ ಸೇರುವುದು ಹೊಸದೇನೂ ಅಲ್ಲ; ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಚೆಲುವರಾಯಸ್ವಾಮಿ, ಎಚ್.ಎಂ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ ಪುತ್ರರು ಮತ್ತು ಈಚೆಗೆ ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರಚಿತ್ರರಂಗಕ್ಕೆ ಎಂಟ್ರಿ ಪಡೆದಿರುವುದು ಇತಿಹಾಸ.

ಆದರೆ ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರರಂಗಕ್ಕೆ ಮಾರ್ಚ್ 4ರಂದು ಪಾದಾರ್ಪಣೆ ಮಾಡಿದ್ದು ಗಾಲಿ ಜನಾರ್ಧನರೆಡ್ಡಿ ಅವರ ಪುತ್ರ ಕಿರೀಟಿ.

ತೆಲುಗಿನಲ್ಲಿ ಪ್ರಸಿದ್ಧವಾಗಿರುವ ವಾರಾಹಿ ಚಲನಚಿತ್ರಂ ಹಾಗೂ ಎ ಸಾಯಿಕೊರ್ರಾಪಾಟಿ ಪ್ರೊಡಕ್ಷನ್ ನ ಮೂಲಕ ಕಿರೀಟಿ ಚಿತ್ರರಂಗಕ್ಕೆ ಅದ್ದೂರಿ ಪಾದಾರ್ಪಣೆ ಮಾಡಿದ್ದು, ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ ರಾಜಮೌಳಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಬೆಂಗಳೂರಿನ ತಾಜ್ ವೆಸ್ಟ್ಎಂಡ್ ನ ಅಂಗಳ ಶುಕ್ರವಾರ ಹೋಮ ಹವನಗಳಿಂದ ಕಂಗೊಳಿಸಿತು. ಮುಹೂರ್ತದಲ್ಲಿ ಗಾಲಿ ಜನಾರ್ಧನರೆಡ್ಡಿ ಸಹೋದರರಾದ ಕರುಣಾಕರರೆಡ್ಡಿ, ಸೋಮಶೇಖರರೆಡ್ಡಿ ಹಾಗೂ ಅಸಂಖ್ಯಾತ ಬಂಧುಗಳು ಹಿತೈಷಿಗಳು ಭಾಗವಹಿಸಿದ್ದರು.

ಚಿತ್ರದ ಟೀಸರ್ ನ ಪ್ರಥಮ ಲುಕ್ ನಲ್ಲಿ ಕಿರೀಟಿ ಮಾಡಿದ ಸಾಹಸವನ್ನು ರಾಜಮೌಳಿ ಹೊಗಳಿದರು. ಜೊತೆಗೆ ಚಿತ್ರಕ್ಕೆ ಶುಭ ಹಾರೈಸಿದರು. ಇದೇ ವೇಳೆ ಚಿತ್ರದಲ್ಲಿ ಅಪ್ಪನ ಪಾತ್ರ ನಿರ್ವಹಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಸಮಾರಂಭದಲ್ಲಿ ಭಾಗವಹಿಸಿದರಲ್ಲದೇ ಚಿತ್ರ ತಂಡವನ್ನು ಹೊಗಳಿದರು.

ವಿಮಾನದಲ್ಲಿ ಸಿಕ್ಕಾಗ ಕಿರೀಟಿ ಸಾವಿರ ಪ್ರಶ್ನೆ ಕೇಳಿರಬಹುದು. ಸಿನಿಮಾ ಬಗ್ಗೆ ಆತನಿಗಿರುವ ಆಸಕ್ತಿ ಎಂಥವರಿಗೂ ಅಚ್ಚರಿ ಮೂಡಿಸುತ್ತದೆ ಎಂದರು ಕ್ರೇಜಿಸ್ಟಾರ್.

ನನಗೆ ಸ್ಫೂರ್ತಿಯಾದವರು ಪುನೀತ್ ರಾಜ್ ಕುಮಾರ್ ಎಂದು ಮಾತಿಗಾರಂಭಿಸಿದ ಕಿರೀಟಿ. ಅಪ್ಪು ಸರ್ ಅವರ ಜಾಕಿ ಚಿತ್ರದ ಸಂದರ್ಭದಲ್ಲಿ ಬಳ್ಳಾರಿಗೆ ಬಂದಿದ್ದಾಗ ಅವರಿಂದ ಪಡೆದಿದ್ದ ಸ್ಫೂರ್ತಿ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಪರಿಶ್ರಮದಿಂದ ಚಿತ್ರ ರಂಗದಲ್ಲಿ ಸ್ಥಾನ ಪಡೆಯಬೇಕೆಂಬುದು ಗೊತ್ತಾಗಿದೆ ಎಂದರು ಕಿರೀಟಿ.

ಜೆನಿಲಿಯಾ, ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತಯಾಗುತ್ತಿರುವ ಚಿತ್ರ ಮುಂದೆ ತಮಿಳು ಮತ್ತು ಇತರ ಭಾಷೆಗಳಿಗೆ ಡಬ್ ಆಗಲಿದೆ ಎಂಬ ಮಾಹಿತಿಗಳು ಬಂದವು.

ರಜನಿ ಕೊರಪಾಟಿ ನಿರ್ಮಾಣದ ಚಿತ್ರ ವನ್ನು ಮಾಯಾಬಜಾರ್ ಖ್ಯಾತಿಯ ರಾಧಾಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಕೆ.ಕೆ.ಸೆಂಥಿಲ್ ಕುಮಾರ್ ಛಾಯಾಗ್ರಹಣ ಹಾಗೂ ದೇವಿ ಶ್ರೀಪ್ರಸಾದ್ ಸಂಗೀತವಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *