ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರಾಗಿರುವ ಕೆ.ಮಂಜು ಬುಧವಾರ (ಫೆ.10) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಕ್ಷಣ ವಿಶೇಷವಾಗಿತ್ತು..
ಏಕೆಂದರೆ ಮಗನ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಅಪ್ಪ ಹೆಚ್ಚಾಗಿ ಮಿಂಚಿದ ಸಂದರ್ಭವದು.. ಮುಖ್ಯವಾಗಿ ಚಿತ್ರದ ಹಾಡಿನೊಂದಿಗೆ ಬೆರೆತ ಹುಟ್ಟುಹಬ್ಬದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು..
ಅಂದ ಹಾಗೆ ಚಿತ್ರದ ಹೆಸರು ‘ರಾಣ’. ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಹಾಗೂ ಸಂಯುಕ್ತ ಹೆಗಡೆ ಮುಖ್ಯ ಪಾತ್ರದಲ್ಲಿದ್ದಾರೆ. ಇವರಿಬ್ಬರ ಡ್ಯಾನ್ಸ್ ಶ್ರಮವನ್ನು ಪರಿಚಯಿಸುವಂತ್ತಿದ್ದ ‘ಮಳ್ಳಿ ಮಿಂಚುಳ್ಳಿ..’ ಎಂಬ ಉತ್ತರ ಕರ್ನಾಟಕ ಭಾಷೆಯ ಸೊಗಡು ಹೊಂದಿದ್ದ ಗೀತೆಯನ್ನು ಬಿಡುಗಡೆಗೊಳಿಸಲು ಆಗಮಿಸಿದ್ದು ಸಲಗ ದುನಿಯಾ ವಿಜಯ್.
ಕೆ.ಮಂಜು ತಮ್ಮ ಸಹಜವಾದ ವಿನೋದದ ಮಾತುಗಳ ಮೂಲಕ ರಂಜಿಸಿದರೆ, ಮಗನ ಹಾಡು ಮತ್ತೇರಿಸುವಂತೆಯೇ ಇತ್ತು. ಶ್ರೇಯಸ್, ಸಂಯುಕ್ತಾ ಹೆಗಡೆ, ಚಿತ್ರದ ನಿರ್ಮಾಪಕ ಪುರುಷೋತ್ತಮ್, ನಿರ್ದೇಶಕ ನಂದ ಕಿಶೋರ್, ಛಾಯಾಗ್ರಾಹಕ ಶೇಖರ್ ಚಂದ್ರ, ನಟಿ ರಜನಿ ಭಾರದ್ವಾಜ್ ಹೀಗೆ ಚಿತ್ರ ತಂಡದ ಸದಸ್ಯರ ಹಾಡು ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದರು.
ಈ ಹಾಡು ಮಾಡಲು ಸಾಕಷ್ಟು ಹಣ ಖರ್ಚಾಗಿದೆ. ಸಿನಿಮಾ ಸೆಟ್ ಹಾಕಲು ಬಹಳ ದಿನಗಳನ್ನು ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ಡ್ಯಾನ್ಸ್ ಗೂ ಸಮಯ ಬಹಳ ಹಿಡಿದಿದೆ ಎಂಬ ಮಾಹಿತಿ ಕೊಟ್ಟವರು ಶ್ರೇಯಸ್ ಮಂಜು.
ಶ್ರೇಯಸ್ ನಲ್ಲಿ ಅರ್ಪಣಾಭಾವ ಎದ್ದು ಕಾಣುತ್ತದೆ. ಹಾಗಾಗಿ ಅವರು ಗೆಲ್ಲುವುದು ನಿಶ್ಚಿತ ಎಂಬ ಆಶಾ ಭಾವನೆಯನ್ನು ಹೊರಹಾಕಿದರು ದುನಿಯಾ ವಿಜಯ್.
ಹಾಡು ಉತ್ತರ ಕರ್ನಾಟಕ ಭಾಗದ ಸೊಗಡಿನಲ್ಲಿದೆ. ‘ಎಕ್ಕಾ ನಿನ್ ಮಗಳು ದೊಡ್ಡೋಳಾಗಲ್ವ..’ಎಂದು ಬರೆದು ಮನೆ ಮಾತಾಗಿದ್ದ ಶಿವು ಭೇರ್ಗಿ ಅವರೇ ಈ ಗೀತೆಯನ್ನೂ ಬರೆದಿರುವುದು ವಿಶೇಷ ಎಂಬ ಮಾಹಿತಿಯೂ ಬಂತು ಚಿತ್ರತಂಡದಿಂದ.
ನಿರ್ಮಾಪಕ ರಮೇಶ್ ರೆಡ್ಡಿ ಅವರು ಚಿತ್ರಕ್ಕೆ ಶುಭ ಹಾರೈಸಿದರು. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಗೈರು ಹಾಜರಾಗಿದ್ದರು.