ಚಿತ್ರದ ಹೆಸರು ಚಾರ್ಜ್ ಶೀಟ್. ಖಂಡಿತಾ ಪೊಲೀಸರು ನೆನಪಾಗಬಹುದು. ಆದರೆ ಇದು ಅನಿವಾರ್ಯ ಶೀರ್ಷಿಕೆ. ಏಕೆಂದರೆ ಇದು ಸಸ್ಪೆನ್ಸ್ ಮತ್ತು ಕ್ರೈಮ್ ಥ್ರಿಲ್ಲರ್ ಚಿತ್ರ. ಪೊಲೀಸರು ಹಾಕುವ ಚಾರ್ಜ್ ಶೀಟ್ ಎಂದರೆ ಪೋಲೀಸ್ ಭಾಷೆಯಲ್ಲಿ ತನಿಖಾವರದಿ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವಕರ ತಂಡವೊಂದು ಚಾರ್ಜ್ ಶೀಟ್ ಹೆಸರಿನಲ್ಲಿ ಚಿತ್ರವೊಂದನ್ನು ಆರಂಭಿಸಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಥಿಯೇಟರ್ ಆವರಣದಲ್ಲಿ ಈಚೆಗೆ ನಡೆದ ಮುಹೂರ್ತದಲ್ಲಿ ಗೀತರಚನೆಕಾರ ಡಾ.ವಿ.ನಾಗೇಂದ್ರಪ್ರಸಾದ್ , ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಪಾಲ್ಗೊಂಡಿದ್ದರು.
ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಬಾಲಾಜಿಶರ್ಮ, ಸಾಗರ್ ಹಾಗೂ ಚೈತ್ರಾ ಕೋಟೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ.
ಡಾ. ಸುನಿಲ್ ಕುಂಬಾರ್ ಚಿತ್ರದ ನಿರ್ಮಾಪಕ. ಕಥೆಯನ್ನು ಕೂಡ ಅವರೇ ಬರೆದಿದ್ದು, ಜೊತೆಗೆ ಪಾತ್ರವೊಂದರಲ್ಲೂ ಕಾಣಿಸಿಕೊಳ್ಳುತಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಕಥೆಯಾಗಿಸುವ ಆಸೆ ಹುಟ್ಟಿತು. ಏಕೆಂದರೆ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಹಾಗಾಗಿ ಕಥೆ ಮಾಡಿ ಗೆಳೆಯರಿಗೆ ಹೇಳಿದಾಗ ಅವರೂ ಒಪ್ಪಿ ನನ್ನ ಜೊತೆ ಕೈ ಜೋಡಿಸಿದ್ದಾರೆ. ಪಶ್ಚಿಮ ಬೆಂಗಾಳದ ಉಮಾ ಚಕ್ರಬೋರ್ತಿ ಹಾಗೂ ಚೆನ್ನೈನ ಎಸ್.ಆರ್.ರಾಜನ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂದರು ನಿರ್ಮಾಪಕ ಡಾ.ಸುನಿಲ್ ಕುಂಬಾರ್.
ನಿರ್ಮಾಪಕರು ಹೇಳಿದ ಕಥೆಗೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದಾಗಿ ಹೇಳಿಕೊಂಡರು ನಿರ್ದೇಶಕ ಗುರುರಾಜ್ ಕುಲಕರ್ಣಿ.ಒಂದು ಶಾಲೆಯಲ್ಲಿ ಹುಡುಗಿಯೊಬ್ಬಳ ಕೊಲೆಯಾಗಿರುತ್ತದೆ. ಆ ಕೊಲೆಯ ತನಿಖೆಯ ಸುತ್ತ ನಡೆಯುವ ಕಥೆಯೇ ಚಾರ್ಜ್ ಶೀಟ್. ಬಹಳ ದಿನಗಳಿಂದ ನನಗೆ ನಾಗೇಂದ್ರ ಅರಸ್ ಅವರ ಜೊತೆ ಕೆಲಸ ಮಾಡಬೇಕೆಂದು ಆಸೆಯಿತ್ತು. ಈ ಚಿತ್ರದಲ್ಲಿ ಅವರು ಕ್ರೈಂ ಕಥೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನಟಿ ಸಂಜನಾ ನಾಯ್ಡು ಅವರು ಸ್ಪೆಷಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ವಿವರ ಕೊಟ್ಟರು ನಿರ್ದೇಶಕರು.ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಉತ್ತಮ ಕಲಾವಿದರಿದ್ದು, ಅವರನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ನಟಿ ಚೈತ್ರ ಕೋಟೂರು ಪಾತ್ರದ ಬಗ್ಗೆ ವಿವರ ಕೊಟ್ಟರು. ಮೂಲತಃ ಛಾಯಾಗ್ರಾಹಕರಾಗಿರುವ ಬಾಲಾಜಿಶರ್ಮ ಅವರಿಗೂ ಇಲ್ಲಿ ಪೊಲೀಸ್ ಪಾತ್ರವಿದೆಯಂತೆ..! ಮತ್ತೊಬ್ಬ ನಟ ಸಾಗರ್ ಗೆ ಥ್ರಿಲ್ಲರ್ ಮಂಜು ಜೊತೆ ಕೆಲಸ ಮಾಡುವ ಖುಷಿಯಂತೆ..! ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಛಾಯಾಗ್ರಾಹಕ ರಂಗಸ್ವಾಮಿ, ಸಂಗೀತ ನಿರ್ದೇಶಕ ಎಂ.ತಿರ್ಥೋ, ಕಲಾವಿದರಾದ ಬಲ ರಾಜವಾಡಿ, ಮಹೇಶ್, ಶೈಲೇಶ್, ಸುನಂದಾ,ಗಿರೀಶ್ ಜತ್ತಿ, ಆಪ್ಜಲ್, ಗುರುರಾಜ್ ಹೊಸಕೋಟೆ ಈ ಸಂದರ್ಭದಲ್ಲಿ ಹಾಜರಿದ್ದರು.