ಐರಾ ಎಂಬುದು ಸಂಸ್ಕೃತ ಪದವಾಗಿದೆ. ಪ್ರಕೃತಿಯಲ್ಲಿ ಏನಾದರೂ ಒಂದು ಕ್ರಿಯೆ ನಡೆಯುವ ಮುನ್ನ ವಿಚಿತ್ರ ಶಬ್ಧವೊಂದು ಕೇಳಿಬರುತ್ತದೆ. ಆ ಶಬ್ಧವನ್ನೇ ಐರಾ ಎಂದು ಹೇಳುವುದಾಗಿ ಹೇಳಿಕೊಂಡರು ಚಿತ್ರದ ನಿರ್ದೇಶಕ ರಾಜ್ ಉದಯ್.
ಅಂದ ಹಾಗೆ ಐರಾ ಚಿತ್ರದ ಟೀಸರ್ ಬಿಡುಗಡೆಗೆ ಉದ್ಯಮದ ಗಣ್ಯರಾದ ಜಾಕ್ ಮಂಜು, ನಟರಾದ ಮೋಹನ್, ಧರ್ಮ ಮೊದಲಾದವ ಉಪಸ್ಥಿತಿ ಇತ್ತು. ಚಿತ್ರತಂಡ ಬಹಳ ಉತ್ಸಾಹದಿಂದಲೇ ವಿವರಗಳನ್ನು ನೀಡಿತು.
ಸುರೇಶ್ ಸುಬ್ರಮಣ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶಿವು ಹಾಗೂ ಮೀನಾಕ್ಷಿ ಈ ಚಿತ್ರದಲ್ಲಿ ತಾಯಿ, ಮಗನಾಗಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೌಶಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಚಿತ್ರದ ಛಾಯಾಗ್ರಾಹಕ.
ಮಾಸ್ತಿಗುಡಿ ದುರಂತದಲ್ಲಿ ಮಡಿದ ಉದಯ್ ಸ್ವಂತ ಭಾಮೈದ ಹಾಗಾಗಿ ಉದಯ್ಗಾಗೇ ಈ ಕಥೆ ರೆಡಿ ಮಾಡಿಕೊಂಡಿದ್ದೆ ಎಂದರು ನಿರ್ದೇಶಕ ರಾಜ್ ಉದಯ್. ಐರಾ ನನ್ನ ಕನಸು, ಈ ಕಥೆಯನ್ನು ನೂರಾರು ನಿರ್ಮಾಪಕರ ಬಳಿ ತೆಗೆದುಕೊಂಡು ಹೋಗಿದ್ದೆ. ಕಥೆಯನ್ನು ಇಷ್ಟಪಟ್ಟರೂ, ಹೀರೋ ಹೆಸರು ಕೇಳಿದ ಕೂಡಲೇ ನೋಡೋಣ ಎನ್ನುತ್ತಿದ್ದರು. ಆದರೆ ಸುರೇಶ್ ಸುಬ್ರಮಣ್ಯ ಚಿತ್ರ ಅರ್ಧದಲ್ಲೇ ನಿಲ್ಲುವ ಸ್ಥಿತಿಯಲ್ಲಿದ್ದಾಗ ಮುಂದೆ ಬಂದರು. ಅನಾಥ ಹುಡುಗನೊಬ್ಬನ ಸುತ್ತ ನಡೆವ ಕಥೆ ಇದು. ಆತ ಏಕೆ ಹುಚ್ಚನಾದ, ಅದರ ಹಿನ್ನೆಲೆ ಏನು ಎಂಬುದೇ ಈ ಚಿತ್ರದ ತಿರುಳು.
ವಿಶೇಷವಾಗಿ ತಾಯಿ ಸಂಟಿಮೆಟ್ ಹಾಡನ್ನು ಜೋಗಿಪ್ರೇಮ್ ಹಾಡುತ್ತಿದ್ದಾರೆ. 15 ದಿನಗಳ ಕಾಲ ಬನಶಂಕರಿಯ ಸ್ಮಶಾನದಲ್ಲಿ ನಂತರ ಆಂದ್ರಹಳ್ಳಿ ದೇವಸ್ಥಾನವೊಂದರಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೇ ಎರಡನೇ ಹಂತದ ಶೂಟಿಂಗ್ ಆರಂಭವಾಗುತ್ತದೆ ಎಂದು ಹೇಳುತ್ತಾ ಹೋದರು ನಿರ್ದೇಶಕರು.
ಹುಚ್ಚನ ಪಾತ್ರವನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ; ಶಿವು ಅದನ್ಬು ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದರು.
ಕನಸುಗಳನ್ನು ಹೊತ್ತ ತಂಡ ಇಲ್ಲಿದೆ, ಇವರೆಲ್ಲರ ಕನಸು ಈಡೇರಲಿ ಎಂದರು ನಿರ್ಮಾಪಕ ಜಾಕ್ ಮಂಜು. ಎಲ್ಲರೂ ಮಾತಾಡುವಾಗ ನನ್ನ ಮೊದಲ ಚಿತ್ರ ಡೆಡ್ಲಿಸೋಮ ನೆನಪಾಯ್ತು ಎಂದರು. ನಟ ಮೋಹನ್ ಹಾಗೂ ಧರ್ಮ ಕೂಡ ಶುಭ ಹಾರೈಸಿದರು.
ತಾಯಿ ಪಾತ್ರ ಮಾಡಿರುವ ಮೀನಾಕ್ಷಿ, ಮತ್ತೊಬ್ಬ ಪ್ರಮುಖ ಪಾತ್ರಧಾರಿ ಕಾರ್ತೀಕ್ ವರ್ಣೇಕರ್ ಚಿತ್ರದ ಕುರಿತಂತೆ ತಮ್ಮ ಅನುಭವ ಹಂಚಿಕೊಂಡರು.
ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ, ನಿಜವಾದ ಸ್ಮಶಾನದಲ್ಲಿ ಶೂಟ್ ಮಾಡಿರುವುದು ಮತ್ತು ನಿಜವಾದ ಹೆಣದ ಜತೆಗೇ ಶಿವು ನಟನೆ ಮಾಡಿರುವುದು ಜೀವನದಲ್ಲಿ ಮರೆಯಲಾದ ಘಟನೆ. ಅದು ಖಂಡಿತವಾಗಿ ಪ್ರೇಕ್ಷಕನಿಗೆ ಬೆಚ್ಚಿ ಬೀಳಿಸುತ್ತದೆ ಎಂದರು.
ಹಿರಿಯ ನಟ ಅನಂತವೇಲು ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.