ಕರುಳ ಸಂಬಂಧ ಮುಖ್ಯವೋ.. ಬಾಂಧವ್ಯದ ಸಖ್ಯ ಮುಖ್ಯವೋ ಎಂಬುದರ ತೊಳಲಾಟದಲ್ಲಿ ಬಾಂಧವ್ಯ ಗೆಲ್ಲುತ್ತದೆ.. ಕರುಳ ಸಂಬಂಧವೂ ಸೈ ಎನಿಸಿಕೊಳ್ಳುತ್ತದೆ..
ಅದು ಡಿಎನ್ಎ..! ಅಂದ ಹಾಗೆ ಚಿತ್ರದ ಹೆಸರೇ ಡಿಎನ್ಎ. ‘ ಸಂಬಂಜ ಅನ್ನೋದು ದೊಡ್ಡದು ಕಣ’ ಎಂಬ ದೇವನೂರು ಮಹಾದೇವ ಅವರ ಕುಸುಮಬಾಲೆ ಸಾಲಿನ ಟ್ಯಾಗ್ ಲೈನ್ ಸಹ ಇದೆ.. ಇದು ಮೈಲಾರಿ ನಿರ್ಮಾಣದ ಚಿತ್ರ.
ಪ್ರಕಾಶ್ ರಾಜ್ ಮೇಹು ನಿರ್ದೇಶನದ ಈ ಚಿತ್ರದಲ್ಲಿ ಕಾಣುವುದು ಸಂಬಂಧ ಮತ್ತು ಬಾಂಧವ್ಯದ ನೆರಳು. ಒಂದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅದಲು ಬದಲಾಗುವ ಮಕ್ಕಳ ಕಥಾನಕ ಇದು. ಇಲ್ಲಿ ವೇದನೆ ಪಡುವವರು ಆ ಮಕ್ಕಳ ತಂದೆ ತಾಯಿಯರು..
ಡಿಎನ್ಎ ಎಂಬುದಕ್ಕೆ ಅರ್ಥ ನೀಡುವಂತಹ ಸಂಬಂಧ ಅದು. ಏಕೆಂದರೆ ಧೃವ ನಕ್ಷತ್ರ ಆಕಾಶ ಎಂಬುದು ಕುಟುಂಬದ ಸದಸ್ಯರ ಹೆಸರು. ಆನಂದವಾಗಿರುವ ಕುಟುಂಬವನ್ನು ವಿಚಲಿತಗೊಳಿಸುವುದು ಒಂದು ಡಿಎನ್ಎ ಟೆಸ್ಟ್..!
ಪ್ರೇಯಸ್ಸಿಗೆ ಮಕ್ಕಳಾಗುವುದಿಲ್ಲ ಎಂದು ತಿಳಿದ ವ್ಯಕ್ತಿ ಆಕೆಯನ್ನು ತಿರಸ್ಕರಿಸುತ್ತಾನೆ. ಹುಟ್ಟುವ ಮಗುವಿನಲ್ಲಿ ತನ್ನ ರಕ್ತವೇ ಬೆರೆತಿರಬೇಕು ಎಂಬುದು ಆತ ನೀಡುವ ಸಮಜಾಯಿಷಿ. ಆದರೆ ಮಕ್ಕಳು ಆಸ್ಪತ್ರೆಯಲ್ಲಿ ಅದಲು ಬದಲಾದ ವಿಷಯ ತಿಳಿದ ಆ ವ್ಯಕ್ತಿ ರೌದ್ರಾವತಾರ ತಾಳಿ ಆಸ್ಪತ್ರೆಯ ಮೇಲೆ ಮೊಕದ್ದಮೆ ಹೂಡುವುದಷ್ಟೇ ಅಲ್ಲ. ತನ್ನ ಮಗ ಬೆಳೆಯುತ್ತಿರುವ ಕುಟುಂಬವನ್ನೂ ಅಗ್ನಿ ಪರೀಕ್ಷೇಗೆ ಒಡ್ಡಿ ಬಿಡುತ್ತಾನೆ.
ಆಗ ನಡೆಯುತ್ತವೆ ತಾಕಲಾಟಗಳು ಕರುಳ ಸಂಬಂಧ ಮತ್ತು ಬಾಂಧವ್ಯದ ಸತ್ವ ಪರೀಕ್ಷೆಯೇ ನಡೆದು ಹೋಗುತ್ತದೆ. ಮುಖ್ಯವಾಗಿ ಹೆತ್ತ ಕರುಳು ನೋಯುತ್ತದೆ.
ರೋಜರ್ ನಾರಾಯಣ್ ಹಾಗೂ ಎಸ್ತರ್ ನರೋನಾ ಒಂದು ಕಡೆಗಾದರೆ, ಅಚ್ಯುತ್ ಕುಮಾರ್ ಹಾಗೂ ಯಮುನಾ ಒಂದು ಕಡೆ. ಮಕ್ಕಳಾಗಿ ಧ್ರುವ ಮತ್ತು ದೇವ್ ಕಾಣಿಸಿ ಕೊಂಡಿದ್ದಾರೆ.
ಚಿತ್ರದ ಉದ್ದಕ್ಕೂ ವರನಟ ಡಾ.ರಾಜ್ ಕುಮಾರ್ ಸಿನಿಮಾ ಮತ್ತು ಪಾತ್ರಗಳು ಎದುರಾಗುತ್ತವೆ. ಕಥೆಯ ಆತ್ಮ ‘ಬಂಗಾರದ ಪಂಜರ’ ಎಂಬುದು ನೆನಪಾಗುತ್ತದೆ.. ಕೊನೆಯಲ್ಲಿ ಧ್ರುವ ಹಾಡುವ ಹಾಡಿನಲ್ಲಿಯೂ ಅಮ್ಮನೇ ದೇವರು.. ಅಪ್ಪನೇ ದೇವರು.. ಶಿಕ್ಷಕ ದೇವರು.. ಅಭಿಮಾನಿಗಳೇ ದೇವರು ಎನ್ನುವ ಮೂಲಕ ಡಾ.ರಾಜ್ ನೆನಪು ನುಸುಳುತ್ತದೆ..
ತಾಯಂದಿರಾಗಿ ಎಸ್ತರ ನರೋನಾ ಹಾಗೂ ಯಮುನಾ ಅವರದು ಮನೋಜ್ಞ ಅಭಿನಯ. ರೋಜರ್ ನಾರಾಯಣ್, ಅಚ್ಯುತ್ ಕುಮಾರ್, ಪುಟಾಣಿಗಳಾದ ಮಾಸ್ಟರ್ ಆನಂದ್ ಪುತ್ರ ಕೃಷ್ಣ ಚೈತನ್ಯ ಹಾಗೂ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರ ಪುತ್ರ ಧ್ರುವ ಮೇಹು ಅತ್ಯುತ್ತಮವಾಗಿ ನಟಿಸಿದ್ದಾರೆ.
ರವಿಕುಮಾರ್ ಸನಾ ಛಾಯಾಗ್ರಹಣ ದಲ್ಲಿ ಪ್ರತಿ ಫ್ರೇಮ್ ಆಕರ್ಷಕವಾಗಿದೆ. ಚೇತನ್ ಸೋಸ್ಕ ಸಂಗೀತ ಭಾವುಕತೆ ಕಟ್ಟಿ ಕೊಡುತ್ತದೆ.. ಅಪರೂಪಕ್ಕೆ ಇಡೀ ಕುಟುಂಬ ನೋಡುವ ಚಿತ್ರ ಮೂಡಿ ಬಂದಿದೆ..
-ಸ್ನೇಹಪ್ರಿಯ ನಾಗರಾಜ್