ಕನ್ನಡ ಚಿತ್ರರಂಗದಲ್ಲಿ ಯುವರಾಜ ಎಂದೇ ಗುರುತಿಸಿಕೊಂಡಿರುವ ನಿಖಿಲ್ ಕುಮಾರ್ ಸ್ವಾಮಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೊಸ ಚಿತ್ರದ ಹೊಸ ಲುಕ್ ಬಿಡುಗಡೆಗೊಂಡಿದೆ.
ಅದು ಯದುವೀರ..!
ಕನ್ನಡದ ಹೆಸರಾಂತ ಪ್ರೊಡಕ್ಷನ್ ಹೌಸ್ ಕೆವಿಎನ್ ಸಂಸ್ಥೆಯ ಮೂಲಕ ನಿಖಿಲ್ ಕುಮಾರ್ ಐದನೇ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗೆ ಯದುವೀರ ಎಂದು ಹೆಸರಿಟ್ಟಿರುವುದು ವಿಶೇಷವಾಗಿದೆ.
ಸಿನಿಮಾರಂಗ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಭಿಮಾನಿಗಳು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸಿದ್ದಾರೆ. ನಿಖಿಲ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆಗೊಂಡಿದೆ.
ಮಂಜು ಅಥರ್ವ ನಿರ್ದೇಶನವಿರುವ ಯದುವೀರ ವಿಭಿನ್ನ ಕಥಾ ಹಂದರವನ್ನು ಹೊಂದಿದೆ. ಕಳೆದ ಏಳು ವರ್ಷಗಳಿಂದ ಮಂಜು ಚಿತ್ರರಂಗದಲ್ಲಿ ದುಡಿದ ಅನುಭವ ಹೊಂದಿದ್ದಾರೆ. ಯಶ್ ನಟನೆಯ ‘ಮಾಸ್ಟರ್ ಪೀಸ್’, ಶಿವರಾಜ್ಕುಮಾರ್ ಅಭಿನಯದ ‘ಮಫ್ತಿ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನೆನಪಿರಲಿ ಪ್ರೇಮ್ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೂಡ ಕೆಲಸ ಮಾಡಿದ ಅನುಭವ ಮಂಜು ಅವರಿಗಿದೆ..
ಇದೀಗ ಅವರು ನಿಖಿಲ್ ಅವರ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ.
ಯದುವೀರ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನ ನಿಶಾ ವೆಂಕಟ್ ಕೊನಂಕಿ ಮತ್ತು ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ‘ಮಫ್ತಿ’, ‘ಮದಗಜ’ ಸಿನಿಮಾಗಳ ಸಿನಿಮಾಟೋಗ್ರಾಫರ್ ನವೀನ್ ಕ್ಯಾಮೆರಾ ಕೈ ಚಳಕವಿರಲಿದೆ. ಚಿತ್ರಕ್ಕೆ ಸದ್ಯವೇ ಚಿತ್ರೀಕರಣ ನಡೆಯಲಿದೆ.