ಚಿತ್ರ ಸಾಹಿತಿ ಅಥವಾ ಗೀತರಚನಕಾರರಾಗಿ ಹೆಸರಾಗಿರುವ ಕಿನ್ನಾಳ್ ರಾಜ್ ಈಗ ನಿರ್ದೇಶಕರಾಗಿದ್ದಾರೆ ಮಾತ್ರವಲ್ಲ; ಅವರು ನಿರ್ದೇಶನ ಮಾಡಿರುವ ಚಿತ್ರ ಇದೇ 12ರಂದು ಬಿಡುಗಡೆ ಕಾಣುತ್ತಿದೆ.
ಇದು ಭೂಗತ ಲೋಕದ ಕಥೆ. ಆದರೆ ಹೆಚ್ಚು ರಕ್ತಪಾತ ನಡೆಯುವುದಿಲ್ಲ, ಮುಖ್ಯವಾಗಿ ಸಮಾಜಕ್ಕೆ ಒಂದು ಗಟ್ಟಿಯಾದ ಸಂದೇಶ ಹೋಗುತ್ತದೆ ಎಂದು ಹೇಳಿಕೊಂಡರು ನಿರ್ದೇಶಕ ಕಿನ್ನಾಳ್ ರಾಜ್.
ಕೆ.ಜಿ.ಎಫ್.ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಹಾಡು ಬರೆದು ಹೆಸರಾಗಿರುವ ಕಿನ್ನಾಳ್ ರಾಜ್ ಈಚೆಗೆ ಬಿಡುಗಡೆ ಕಂಡ ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಅಣ್ಣಾತ್ತೆ’ ಚಿತ್ರದ ಕನ್ನಡ ಅವತರಣಿಕೆಗೆ ಆರು ಹಾಡುಗಳನ್ನು ಬರೆದಿರುವ ಹೆಗ್ಗಳಿಕೆ ಹೊಂದಿದ್ದಾರೆ.
ಅಂದ ಹಾಗೆ ಚಿತ್ರದ ಹೆಸರು ‘ಹಿಟ್ಲರ್’. ಡಿಕ್ಟೇಟರ್ ಆಫ್ ಡಾರ್ಕ್ ವಲ್ಡ್’ ಎಂಬ ಟ್ಯಾಗ್ ಲೈನ್ ಸಹ ಇದೆ. ನಾಯಕ ನಟ ಹೊಸ ಪರಿಚಯ; ಲೋಹಿತ್ ಎಂಬುದು ಅವರ ಹೆಸರು. ಲೋಹಿತ್ ಮುಖ್ಯ ಪಾತ್ರಧಾರಿ. ಜೊತೆಗೆ ಅವರ ಪತ್ನಿ ಮಮತಾ ಲೋಹಿತ್ ನಿರ್ಮಾಪಕಿ.
ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ನಟಿಯ ಹೆಸರು ಸಸ್ಯಾ. ಜನಪ್ರಿಯ ಹಾಸ್ಯನಟ ವಿಜಯ್ ಚೆಂಡೂರ್ ಹಾಗೂ ಕಿರುತೆರೆಯ ಜನಪ್ರಿಯ ನಟ ಗಣೇಶ್ ರಾವ್ ಚಿತ್ರದ ಇತರ ಭೂಮಿಕೆಯಲ್ಲಿ ಇದ್ದಾರೆ.
ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದ ನಿರ್ದೇಶಕ ಮಹೇಶ್ ಬಾಬು ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಿದರು. ಈ ಮುಂಚೆ ಕಿನ್ನಾಳ್ ರಾಜ್ ಅವರಿಂದ ಹಾಡು ಬರೆಸಿದ್ದೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು ಮಹೇಶ್ ಬಾಬು.
ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಹಾಡುಗಳು ಉತ್ತಮ ರೀತಿಯಲ್ಲಿ ಮೂಡಿ ಬಂದಿವೆ ಎಂಬ ವಿವರಗಳು ಬಂದವು. ಚಿತ್ರವನ್ನು ಆಟೋರಾಜ ಚಿತ್ರಮಂದಿರಗಳಿಗೆ ಬಿಡುಗಡೆ ಮಾಡುತ್ತಿದ್ದು, ಪೈಪೋಟಿಯ ನಡುವೆಯೂ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂಬ ವಿವರ ಕೊಟ್ಟರು.
ಭೂಗತ ಲೋಕದ ಕಥೆ ಎನಿಸಿದರು ಅದರಲ್ಲಿ ಒಂದು ತಣ್ಣನೆಯ ಪ್ರೀತಿ ಕಾಣುತ್ತದೆ ಎಂಬುದಕ್ಕೆ ಚಿತ್ರನೋಡಿ ಎಂದರು ಮುಖ್ಯ ಪಾತ್ರದಲ್ಲಿರುವ ಲೋಹಿತ್. ನನ್ನದು ಗಾರ್ಮೆಂಟ್ ಹುಡುಗಿಯ ಪಾತ್ರ ಎಂಬುದು ನಟಿ ಸಸ್ಯಾ ವಿವರಣೆಯಾಗಿತ್ತು.
ಖಳನಟ ವೈಭವ್ ನಾಗರಾಜ್ ಹಾಗೂ ಇತರರು ತಮ್ಮ ಪಾತ್ರಗಳ ಕುರಿತು ವಿವರಗಳನ್ನು ನೀಡಿದರು.