ಕೆಲವೊಮ್ಮೆ ಸ್ವಯಂ ಕಲ್ಪನೆಗಳು ವಿಪರೀತದ ಹಾದಿ ತುಳಿದಾಗ ಯಡವಟ್ಟುಗಳಾಗುತ್ತವೆ.. ಅದರಿಂದ ಒಂದು ಸಮೂಹ ದಾರಿ ತಪ್ಪಿದಾಗ ಆಗುವ ಘಟನೆಗಳೇ ಚಿತ್ರವಾಗಿದೆ. ಅದು ‘ಕಪೋ ಕಲ್ಪಿತಂ’ ಮಂಡ್ಯ ಮೂಲದ ಸುಮಿತ್ರಾ ರಮೇಶ್ ಗೌಡ ಇದರ ಮುಖ್ಯ ಪಾತ್ರಧಾರಿ ಮತ್ತು ನಿರ್ದೇಶಕಿ. ಹೊಸಬರಿಂದ ಕೂಡಿದ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಹೊಗಳಿಕೆ ಸಿಕ್ಕಿದೆ. ಅದೇ ನಮ್ಮ ಹೆಗ್ಗಳಿಕೆ ಎಂದು ಹೇಳಿಕೊಂಡರು ಸುಮಿತ್ರಾ ರಮೇಶ್ ಗೌಡ.
ನಾನು ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ ಕಲ್ಪನೆ ಎಂಬುದರ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಮತ್ತಷ್ಟು ಮಸಾಲೆ ಸೇರಿಕೊಂಡಾಗ ಇರಿಸು ಮುರಿಸು ಆಗುವ ಘಟನೆಗಳು ನಡೆಯುತ್ತವೆ. ಅದು ಸಂಶಯಕ್ಕೆ ಕೂಡ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ಇಂಗಾಯ್ತು ಎಂಬಂತೆ ಬಿಂಬಿತವಾಗುತ್ತದೆ.
ಇಲ್ಲಿ ಹಾಗೆ ಹೀಗೆ ಎಂಬುದರ ಜೊತೆಗೆ ಹಾರರ್ ಎಂಬ ವಿಷಯವೂ ಸೇರಿಕೊಂಡಿದೆ. ಯುವಕರ ತಂಡವೊಂದು ನಿರ್ಜನ ಪ್ರದೇಶದ ಮನೆಯೊಂದಕ್ಕೆ ಹೋದಾಗ ಅಲ್ಲಿ ಭೂತದ ಕಲ್ಪನೆ ಹುಟ್ಟಿಕೊಳ್ಳುತ್ತದೆ. ಭಯದಿಂದ ವರ್ತಿಸುವ ತಂಡ ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತದೆ ಎಂಬುದು ಚಿತ್ರದ ಸಾರಾಂಶ ಎಂಬ ವಿವರ ಕೊಟ್ಟರು ನಿರ್ದೇಶಕಿ. ಈ ಹಿಂದೆ ಒಂದು ಚಿತ್ರದಲ್ಲಿ ಅಭಿನಯಿಸಿದ್ದಲ್ಲದೆ ಸಹಾಯಕ ನಿರ್ದೇಶಕಿಯಾಗಿ ಅನುಭವ ಪಡೆದಿರುವ ಸುಮಿತ್ರಾ ರಮೇಶ್ ಗೌಡ ಮಂಡ್ಯಾ ಜಿಲ್ಲೆ, ಕೆ.ಆರ್.ಪೇಟೆ ಮೂಲದವರು. ಹಿತೈಷಿಗಳ ಸಲಹೆ ಮೇರೆಗೆ ನಿರ್ದೇಶನದ ಕ್ಯಾಪ್ ಹಾಕಲು ಮನಸ್ಸು ಮಾಡಿದರಂತೆ.. ಕಿರುತೆರೆ ನಟ ಮತ್ತು ಇಲ್ಲಿಯವರೆಗೂ ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕ ನಟ. ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಸಂದೀಪ್ಮಲಾನಿ, ನಿರೂಪಕರಾಗಿ ಗೌರೀಶ್ಅಕ್ಕಿ. ಉಳಿದಂತೆ ಶಿವರಾಜ್ಕರ್ಕೆರ, ರಾಜೇಶ್ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್ಗೌಡ ನಟಿಸಿದ್ದಾರೆ. ರಚನೆ, ಚಿತ್ರಕತೆ, ಸಂಭಾಷಣೆ, ಎರಡು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಪಾಲುದಾರಾಗಿರುವುದು ಮಂಗಳೂರಿನ ಗಣಿದೇವ್ ಕಾರ್ಕಳ.
ಛಾಯಾಗ್ರಹಣ-ಸಂಕಲನ ಬಾತುಕುಲಾಲ್ ಅವರದು. ದಕ್ಷಿಣ ಕನ್ನಡ, ಉಡುಪಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಆಶಯಕ್ಕೆ ರಮೇಶ್ ಚಿಕ್ಕೆಗೌಡ ನೆರವು ನೀಡಿದ್ದಾರೆ. ಸವ್ಯಾಚಿ ಕ್ರಿಯೇಶನ್ಸ್ ಹೆಸರಿನೊಂದಿಗೆ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ಕವಿತಾ ಕನ್ನಿಕಾ ಪೂಜಾರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂಬ ಮಾಹಿತಿಗಳು ಬಂದವು.