ಕೊವಿಡ್ ಮಹಾಮಾರಿ ನಂತರ ಸರ್ಕಾರವು ಪೂರ್ಣ ಚಿತ್ರಮಂದಿರ ತುಂಬಲು ಅನುಮತಿ ನೀಡಿದ ಬಳಿಕ ಬಿಡುಗಡೆಯಾದ ಮೊದಲ ಚಿತ್ರ ಕಾಗೆಮೊಟ್ಟೆ..
ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ನಟನೆಯ ಚಿತ್ರ
ಕಳೆದ ಶುಕ್ರವಾರ ಬಿಡುಗಡೆ ಕಂಡು ಗೆಲುವಿನ ನಗೆ ಬೀರಿದೆ..
ಗುರುರಾಜ್ ಜಗ್ಗೇಶ್, ಮಾದೇಶ್ ಹಾಗೂ ಹೇಮಂತ್ ಅಭಿನಯದ ಕಾಗೆಮೊಟ್ಟೆ ಚಿತ್ರಕ್ಕೆ ಚಂದ್ರಹಾಸ್ ನಿರ್ದೇಶಕ. ಚಿತ್ರವು ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಪ್ರೇಕ್ಷಕರ ಮನಗೆದ್ದು ಮುನ್ನಡೆಯುತ್ತಿದೆ ಎಂಬುದನ್ನು ಖುಷಿಯಿಂದ ಹೇಳಿಕೊಂಡಿತು ಚಿತ್ರತಂಡ.
ನಾವು ಭಯದಿಂದಲೇ ಬಿಡುಗಡೆ ಮಾಡಿದೆವು. ಆದರೆ ಪ್ರೇಕ್ಷಕರಿಂದ ಒಳ್ಳೇ ಪ್ರತಿಕ್ರಿಯೆ ಬಂದಿದೆ. ಹೊಸಬರ ತಂಡಕ್ಕೆ ಈ ಮಟ್ಟದ ಸಹಕಾರ ಸಿಕ್ಕಿರುವುದು ಖುಷಿಯಾಗಿದೆ. ಚಿತ್ರವು 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಮಂದಿನ ವಾರದಿಂದ ಇನ್ನು 20 ಚಿತ್ರಮಂದಿರಗಳು ಹೆಚ್ಚಾಗುತ್ತಿವೆ, ಉತ್ತರ ಕರ್ನಾಟಕ, ಬಿಸಿ ಸೆಂಟರ್ಗಳಲ್ಲಿ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ನಮ್ಮ ಚಿತ್ರದಲ್ಲಿ ನಟಿಸಿದ್ದ ಹಿರಿಯನಟ ಸತ್ಯಜಿತ್ ಅವರು ಈಗ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ ಎಂಬುದು ನೋವಿನ ಸಂಗತಿ. ಹಾಗಾಗಿ ತ್ರಿವೇಣಿ ಚಿತ್ರಮಂದಿರದ ಮೊದಲ ದಿನದ ಬೆಳಗಿನ ಆಟದ ಸಂಗ್ರಹದ ಹಣ 25 ಸಾವಿರ ರೂ. ಹಣವನ್ನು ಅವರ ಚಿಕಿತ್ಸೆಗಾಗಿ ನೀಡುತ್ತಿದ್ದೇವೆ ಎಂದು ಹೇಳಿ ಮಾನವೀಯತೆ ಮೆರೆಯಿತು ಚಿತ್ರತಂಡ.
ಗುರುರಾಜ್ ಜೋಡಿಯಾಗಿ ತನುಜಾ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿರುವ ರಿಯಾಲಿಟಿ ನೋಡಿದ ಎಲ್ಲರಿಗೂ ಇಷ್ಟವಾಗಿದೆ ಎಂದರು ಗುರುರಾಜ್ ಜಗ್ಗೇಶ್. ಕೃಷ್ಣ ಎಲ್ಲಿ ಬದುಕು ಆರಂಭಿಸಿದ, ಎಲ್ಲಿ ಫಿನಿಶ್ ಆದ ಎಂಬುದುನ್ನು ನೈಜವಾಗಿ ಮೂಡಿಸಿದ್ದಾರೆ. ನನಗೆ ಆ್ಯಕ್ಷನ್ ಎಷ್ಟು ಸುಲಭವೋ ಹಾಗೆ ರೊಮ್ಯಾನ್ಸ್ ಅಷ್ಟೇ ಕಷ್ಟವಾಗಿತ್ತು ಎಂದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಚಿತ್ರದ ಸಾಹಸ ನಿರ್ದೇಶಕ ಮಾಸ್ ಮಾದ, ನಟ ಮಾದೇಶ್, ಛಾಯಾಗ್ರಾಹಕ ಪಿ.ಎಲ್. ರವಿ, ವಿತರಕ ಆಟೋರಾಜು ಚಿತ್ರದ ಯಶಸ್ಸಿನ ಸಂತಸ ಹಂಚಿಕೊಂಡರು.