ರಾಜ್ಯದ ಚಿತ್ರ ಮಂದಿರಗಳು ನೂರರಷ್ಟು ಪ್ರೇಕ್ಷಕನ ಭರ್ತಿ ಮಾಡುವ ಭರದಲ್ಲಿ
ಬಾ ಪ್ರೇಕ್ಷಕನೆ.. ಬಾ.. ಸನಿಹಕೆ ಬಾ.. ಎಂದು ಕರೆಯುವುದಕ್ಕೆ ಸರಿಯಾಗಿ
ಪ್ರೇಕ್ಷಕನೆಡೆ ಲವಲವಿಕೆಯಿಂದ ಹಾರಿ ಬರುತ್ತಿರುವ ಚಿತ್ರ ‘ನಿನ್ನ ಸನಿಹಕೆ’
ಈ ಚಿತ್ರ ನೋಡಿದ ಪ್ರೇಕ್ಷಕ ನಿಜಕ್ಕೂ ಧನ್ಯ.. ಏಕೆಂದರೆ ಚಿತ್ರದ ಮುಖ್ಯನಾಯಕಿ ಧನ್ಯಾ..
ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟಿಸಿರುವ ಚಿತ್ರ ಬಿಡುಗಡೆಗೆ ಕಾಯ್ದು ವರ್ಷಗಳೇ ಆದವು. ಇಂದಿನ ಪೀಳಿಗೆಯ ಸುಂದರ ಪ್ರೇಮ ಕಥಾನಕ ಹೊಂದಿರುವ ಚಿತ್ರವು ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ.
ಇದೇ ಅಕ್ಟೋಬರ್ 8 ರಂದು ಬಿಡುಗಡೆ ಕಾಣುತ್ತಿರುವ ‘ನಿನ್ನ ಸನಿಹಕೆ’ ಚಿತ್ರವನ್ನು ಕನ್ನಡದ ಉದಯೋನ್ಮುಖ ಯುವನಟ ಸೂರಜ್ ಗೌಡ ನಟಿಸಿ ನಿರ್ದೇಶನ ಮಾಡಿರುವುದು ಇಲ್ಲಿ ವಿಶೇಷ.
ಚಿತ್ರದ ಬಿಡುಗಡೆಯ ಪೂರ್ವದಲ್ಲಿ ಮಾಧ್ಯಮಗಳ ಜೊತೆ ಚಿತ್ರತಂಡ ಮಾತಿಗಿಳಿದ ಕ್ಷಣದಲ್ಲಿ ನಮ್ಮ ಚಿತ್ರ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಹೆಚ್ಚು ಆತ್ಮವಿಶ್ವಾಸ ವ್ಯಕ್ತಪಡಿಸಿತು.
ಮುಖ್ಯವಾಗಿ ನಿರ್ಮಾಪಕರಾದ ಅಕ್ಷಯ್ ಹಾಗೂ ರಂಗನಾಥ್ ನಮ್ಮ ಪ್ರಯತ್ನ ಆತ್ಮವಿಶ್ವಾಸದಿಂದಲೇ ಆಗಿದೆ ಮುಂದೆಯೂ ನಮಗೆ ಯಶಸ್ಸು ಕಾದಿದೆ. ಆದರೆ ಕೊರೊನಾ ಸ್ವಲ್ಪ ನಮ್ಮನ್ನು ಕಾಯಿಸಿತು. ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕೆಂದು ಇಷ್ಟು ದಿನ ಕಾಯ್ದುಕೊಂಡಿದ್ದೆವು ಎಂದು ಹೇಳಿಕೊಂಡರು.
ನಮ್ಮ ಚಿತ್ರ ಬಿಡುಗಡೆಯಾದ ಒಂದು ವಾರಕ್ಕೆ ಇಬ್ಬರು ಸ್ಟಾರ್ ಚಿತ್ರಗಳು ಘೋಷಣೆ ಮಾಡಿಕೊಂಡಿರುವುದು ತಿಳಿದಿದೆ. ನಮ್ಮದು ಹೊಸಬರ ಚಿತ್ರ; ಇದರ ಗೆಲುವು ಸಹ ಬಹಳವೇ ಮುಖ್ಯ. ಹಾಗಾಗಿ ಒಳಿತು ಮತ್ತು ಕೆಡಕುಗಳ ಬಗ್ಗೆ ಅವರೇ ಚಿಂತಿಸಲಿ; ನಮಗೆ ಮುಂದೆ ತೊಡಕು ಎದುರಾಗದಂತೆ ಚಿತ್ರೋದ್ಯಮದ ಗಣ್ಯರು ಸಹಕರಿಸಲಿ ಎಂದು ನಿರ್ಮಾಪಕ ರಂಗನಾಥ್ ಕೋರಿಕೆ ಮುಂದಿಟ್ಟರು.
ಸ್ಟಾರ್ ಚಿತ್ರಗಳ ಬಿಡುಗಡೆ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆ. ಆದರೆ ಹೊಸಬರ ಚಿತ್ರದ ಕಡೆಗೂ ಗಮನ ಕೊಡುವುದು ಮುಖ್ಯ ಎಂದವರು ಸಂಗೀತ ನಿರ್ದೇಶಕ ರಘು ದೀಕ್ಷಿತ್.
ಚಿತ್ರದಲ್ಲಿ ಹಾಡುಗಳು ಹೈಲೈಟ್.. ರಘು ದೀಕ್ಷಿತ್ ಸಂಗೀತ ಯುವ ಪೀಳಿಗೆಯ ನಾಡಿಮಿಡಿತಕ್ಕೆ ಹೊಂದಿಕೊಂಡಿದೆ ಎಂಬ ಮಾತುಗಳು ಕೇಳಿ ಬಂದವು.
ಐಶ್ವರ್ಯ, ಸಿದ್ಧಾರ್ಥ್ ಹಾಗೂ ಇನ್ನಿತರ ಹೆಸರಾಂತ ಗಾಯಕರು ಹಾಡಿದ್ದಾರೆ. ಇಲ್ಲಿನ ಎಂಟು ಹಾಡುಗಳಿಗೂ ವಾಸುಕಿ ವೈಭವ್ ಗೀತರಚನೆ ಮಾಡಿದ್ದಾರೆ ಎಂಬ ವಿವರಗಳನ್ನು ಕೊಟ್ಟರು ರಘು ದೀಕ್ಷಿತ್.
ನಮ್ಮೆಲ್ಲರ ಕನಸು ಈ ಚಿತ್ರ. ಹೊಸ ಬಗೆಯ ಆಲೋಚನೆಯಿಂದ ಕೂಡಿದೆ. ಹಾಗಾಗಿ ಬೇರೆ ರೀತಿ ಮೂಡಿ ಬಂದಿದೆ.. ಇದು ಈಗಿನ ಕಾಲದ ಪ್ರೀತಿಯನ್ನು ಅಭಿವ್ಯಕ್ತಿಸುತ್ತದೆ.
ಲೀವಿಂಗ್ ರಿಲೇಶನ್ಸ್ ಮೇಲೆ ಸಿನಿಮಾ ಮೂಡಿಬಂದಿದೆ ಎಂದು ಚಿತ್ರದ ಒಳಗಿನ ವಿವರಗಳನ್ನು ನೀಡಿದವರು ನಿರ್ದೇಶಕ ಮತ್ತು ಮುಖ್ಯ ಪಾತ್ರದಲ್ಲಿ ನಟಿಸಿರುವ ಸೂರಜ್ ಗೌಡ.
ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ನಿರ್ದೇಶಕ ಆಗಬೇಕೆಂಬ ಹಂಬಲ ನನ್ನದು; ಈ ಅವಕಾಶ ನನಗೆ ಮಹತ್ವದಾಗಿದೆ ಎಂದರು.
ಮುಖ್ಯವಾಗಿ ನನಗೆ ನಿರ್ಮಾಪಕರು ಸ್ನೇಹಿತರು. ಈ ಪ್ರಾಜೆಕ್ಟ್ ಒಂದು ಸ್ಟಾರ್ ಗರಿ ಸಿಗುವುದೆಂದು ನಾನು ಆಲೋಚಿಸಿರಲಿಲ್ಲ..ಧನ್ಯಾ ಅವರ ಸೇರ್ಪಡೆಯಿಂದ ಅದು ಸಾಧ್ಯವಾಯಿತು. ರಘು ದೀಕ್ಷಿತ್ ಅವರ ಬೆಂಬಲ ಕೂಡ ಸಿಕ್ಕಿತು; ಹಾಡುಗಳು ಬ್ಯೂಟಿಫುಲ್ ಆಗಿವೆ ಎಂದರು ಸೂರಜ್.
ನಾನು ಅಮೃತಾ ಎನ್ನುವ ಪಾತ್ರ ಡೆಂಟಿಸ್ಟ್ ಪಾತ್ರವನ್ನು ನಿರ್ವಹಿಸಿರುವೆ ಎಂದು ಮಾತಿಗಾರಂಭಿಸಿದರು ಧನ್ಯಾ ರಾಮ್ ಕುಮಾರ್. ಪಾತ್ರವನ್ನು ಮಾಡುತ್ತಾ ಹೋದಂತೆ ಅದು
ನನ್ನ ಪಾತ್ರನೇ ಅನಿಸಿತು ಎಂದು ಹೇಳುತ್ತಾ ಹೋದರು ಧನ್ಯ ರಾಮ್ ಕುಮಾರ್.
ಗಾಯಕರಾದ ಸಿದ್ಧಾರ್ಥ್, ಶೃತಿ ವಿ.ಎಸ್ ಹಾಗೂ ಐಶ್ವರ್ಯ ಕೂಡ ಮಾತನಾಡಿದರು. ಅಕ್ಟೋಬರ್ 8 ರಂದು ಪ್ರೇಕ್ಷಕ ಚಿತ್ರದ ಬಗ್ಗೆ ಕೊಂಚ ಜಂಭದಿಂದಲೇ ಮಾತನಾಡಲಿ ಎಂಬುದು ಚಿತ್ರ ತಂಡದ ಆಶಯವಾಗಿತ್ತು.