ಕಳೆದ ಎರಡು ವರ್ಷಗಳ ಹಿಂದೆ ಮಾಧ್ಯಮಗಳ ಮುಂದೆ ಸಂದರ್ಶನ ನೀಡುವಾಗ ‘ನಾನು ಕೂಡ ಒಂದು ಕಾಲದಲ್ಲಿ ಪತ್ರಕರ್ತನಾಗಿದ್ದೆ ನಿಮಗೆ ಗೊತ್ತಾ’ ಎಂದು ಹೇಳಿ ಎದುರಿಗೆ ಮೈಕ್ ಹಿಡಿದ ಮಾಧ್ಯಮದ ಪ್ರತಿನಿಧಿಗಳನ್ನು ಚಕಿತಗೊಳಿಸಿದವರು ಭಾರತೀಯ ಚಿತ್ರರಂಗದ ಮೇರು ನಟ ರಜನಿಕಾಂತ್..!!
ಹೌದು ರಜನಿಕಾಂತ್ ಒಂದು ಕಾಲದಲ್ಲಿ ಪತ್ರಿಕಾ ಕಚೇರಿಯೊಂದಕ್ಕೆ ಭೇಟಿ ನೀಡಿ ಕರಡು ತಿದ್ದುವ ಮತ್ತು ಮೊಳೆ ಜೋಡಿಸುವ ಕಾರ್ಯದಲ್ಲಿ ಒಬ್ಬರಿಗೆ ನೆರವಾಗುತ್ತಿದ್ದರು. ಆ ಸಂದರ್ಭದಲ್ಲಿ ಆಸಕ್ತಿಗೆ ಅನುಗುಣವಾಗಿ ಬರೆಯುತ್ತಿದ್ದರು.
ಬೆಂಗಳೂರಿನಲ್ಲಿ ಕಷ್ಟದ ದಿನಗಳನ್ನು ಕಳೆಯುತ್ತಿದ್ದ ಆಗಿನ ಶಿವಾಜಿರಾವ್ ಕನ್ನಡದ ಮುಂಚೂಣಿಯ ದಿನ ಪತ್ರಿಕೆ ‘ಸಂಯುಕ್ತ ಕರ್ನಾಟಕ’ದಲ್ಲಿ ಕಾರ್ಯ ನಿರ್ವಹಿಸಿದ ಹೆಮ್ಮೆಯ ವಿಷಯ ಹೇಳಿಕೊಂಡಿದ್ದರು.
ಅಂದ ಹಾಗೆ ರಜನಿಕಾಂತ್ ಯಾರ ಜೊತೆಗೆ ಹೋಗುತ್ತಿದ್ದರು ಎಂಬುದು ಈಗ ಸುದ್ದಿಯಾಗಿ ಹರಿದಾಡಬಹುದು; ಏಕೆಂದರೆ ರಜನಿ ನೆನೆಯುತ್ತಿದ್ದ ಆ ಹಿರಿಯ ವ್ಯಕ್ತಿ ಬುಧವಾರ ಇಹಲೋಕ ತ್ಯಜಿಸಿದರು. ಅವರ ಹೆಸರು ರಾಮಚಂದ್ರ ರಾವ್.
ಪತ್ರಿಕೋದ್ಯಮದ ಹಿರಿಯಣ್ಣನಂತೆ ಇರುವ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ನಾಲ್ಕು ದಶಕಗಳ ಕಾಲ ರಾಮಚಂದ್ರರಾವ್ ಸೇವೆ ಸಲ್ಲಿಸಿದ್ದರು. ತಮ್ಮ 73ನೇ ವಯಸ್ಸಿನಲ್ಲಿ ಗವಿಪುರಂನ ತಮ್ಮ ಸ್ವಗೃಹದಲ್ಲಿ ಅವರು ನಿಧನರಾದರು.
ರಾಮಚಂದ್ರರಾವ್ ಎಂದ ತಕ್ಷಣವೇ ಕೆಲವರಿಗೆ ರಜನಿಕಾಂತ್ ನೆನಪಾಗುವುದುಂಟು.. ಏಕೆಂದರೆ ರಾಮಚಂದ್ರರಾವ್ ಅವರಿಗೆ ರಜನಿಕಾಂತ್ ಪಟ್ಟಶಿಷ್ಯ.
ರಜನಿ ಅವರು ಕಂಡಕ್ಟರ್ ಆಗಿ ಆಗಿನ ಬಿಟಿಎಸ್ ಸೇರಿದ ಬಳಿಕವೂ ರಾಮಚಂದ್ರರಾವ್ ಅವರನ್ನು ನೋಡಲು ಸಂಯುಕ್ತ ಕರ್ನಾಟಕ ಕಚೇರಿಗೆ ಬರುತ್ತಿದ್ದರು ಎಂಬುದಾಗಿ ಹಿರಿಯ ಪತ್ರಕರ್ತ ರಾಮಣ್ಣ ಕೋಡಿ ಹೊಸಳ್ಳಿ ಅವರು ತಮ್ಮ ಶ್ರದ್ಧಾಂಜಲಿಯಲ್ಲಿ ಮೆಲುಕು ಹಾಕಿದ್ದಾರೆ.
ಆದರೆ ತಮ್ಮ ಆತ್ಮೀಯ ಗುರುವನ್ನು ಕಳೆದುಕೊಂಡ ರಜನಿಕಾಂತ್ ಅವರ ಮನಸ್ಥಿತಿ ಹೇಗಿದೆಯೋ ಏನೋ..
ಆದರೆ ಕಿಕ್ಕಿರಿದ ಮಾಧ್ಯಮಗೋಷ್ಠಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ತಮ್ಮ ಗುರು ರಾಮಚಂದ್ರರಾವ್ ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಸೂಪರ್ ಸ್ಟಾರ್ ರಜನಿ ನೆನೆದಿದ್ದರು.
🖋ಸೇಹಪ್ರಿಯ ನಾಗರಾಜ್